ಮಂಗಳೂರಿನ ಅನೇಕಾಂತ ಫೌಂಡೇಶನ್ ಟ್ರಸ್ಟ್, ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಸಹಯೋಗದಲ್ಲಿ, ವಿಶ್ರಾಂತ ಪ್ರಾಧ್ಯಾಪಕಿ, ವಿಮರ್ಶಕಿ ಡಾ. ರಾಜಲಕ್ಷ್ಮೀ ಎನ್.ಕೆ. ಅವರ ಅನುವಾದಿತ ಕೃತಿ ‘ಅಂಡಮಾನ್ ಇತಿಹಾಸದೊಳಗೊಂದು ಪಯಣ’ ಕೃತಿ ಬಿಡುಗಡೆ ಸಮಾರಂಭ 8ರಂದು ಅಪರಾಹ್ನ 2ರಿಂದ ನಗರದ ವಿ.ವಿ. ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ನಡೆಯಲಿದೆ.

ಮಂಗಳೂರು: ಮಂಗಳೂರಿನ ಅನೇಕಾಂತ ಫೌಂಡೇಶನ್ ಟ್ರಸ್ಟ್, ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಸಹಯೋಗದಲ್ಲಿ, ವಿಶ್ರಾಂತ ಪ್ರಾಧ್ಯಾಪಕಿ, ವಿಮರ್ಶಕಿ ಡಾ. ರಾಜಲಕ್ಷ್ಮೀ ಎನ್.ಕೆ. ಅವರ ಅನುವಾದಿತ ಕೃತಿ ‘ಅಂಡಮಾನ್ ಇತಿಹಾಸದೊಳಗೊಂದು ಪಯಣ’ ಕೃತಿ ಬಿಡುಗಡೆ ಸಮಾರಂಭ 8ರಂದು ಅಪರಾಹ್ನ 2ರಿಂದ ನಗರದ ವಿ.ವಿ. ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ನಡೆಯಲಿದೆ.

ಪುಸ್ತಕ ಬಿಡುಗಡೆ ಸಂದರ್ಭ ಕೃತಿಯ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವ ದೃಷ್ಟಿಯಿಂದ ‘ಅಂಡಮಾನ್ ಇತಿಹಾಸ : ದುಡಿದ ಕೈಗಳು ಮಿಡಿದ ಮನಗಳು’ ವಿಚಾರಸಂಕಿರಣ ನಡೆಯಲಿದೆ. ಹಂಪಿ ಕನ್ನಡ ವಿ.ವಿ. ಇತಿಹಾಸ ವಿಭಾಗದ ಪ್ರೊ. ವಿಜಯ ಪೂಣಚ್ಚ ತಂಬಂಡ ದಿಕ್ಕೂಚಿ ಭಾಷಣ ಮಾಡಲಿದ್ದು, ಚೇಳೈರು ಸರ್ಕಾರಿ ಪ.ಪೂ. ಕಾಲೇಜ್‌ ಪ್ರಾಂಶುಪಾಲ ಡಾ.ಜ್ಯೋತಿ ಚೇಳೈರು ಹಾಗೂ ವಿ.ವಿ.ಕಾಲೇಜಿನ ಪ್ರೊ. ಗಣಪತಿ ಗೌಡ ಎಸ್. ಕೃತಿಯ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ವಿ.ವಿ. ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಹಾಗೂ ಕರಾವಳಿಯ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಉಪಸ್ಥಿತರಿರುವರು ಎಂದು ಸಂಘಟಕರ ಪ್ರಕರಣ ತಿಳಿಸಿದೆ.ಪುಸ್ತಕದ ಕುರಿತು: ಸಾಮಾನ್ಯವಾಗಿ ಇತಿಹಾಸದ ಪುಸ್ತಕಗಳು ಪ್ರಭುತ್ವದ ಸುತ್ತವೇ ಗಿರಕಿ ಹೊಡೆಯುತ್ತಾ ಅಕ್ಷರ ರೂಪದಲ್ಲಿ ಅದನ್ನೇ ಶಾಶ್ವತ ಸತ್ಯವಾಗಿಸುವ ಕಥನಗಳಾಗಿರುತ್ತವೆ. ಆದರೆ ಪ್ರಭುತ್ವವನ್ನು ಬೆವರು, ರಕ್ತ, ಮಾನವೀಯತೆಯ ನೆಲೆಯಲ್ಲಿ ಎಲ್ಲವನ್ನು ದಾರೆಯೆರೆದು ಸಮಾಜವನ್ನು ಪೊರೆದ ನಾಗರಿಕತೆಯ ನಡೆಗೆ ಭಾಷ್ಯ ಬರೆದವರು ರಂಗಪ್ರವೇಶ ಮಾಡುವ ಅವಕಾಶಗಳು ವಿರಳ. ಆದರೆ ''''''''ಅಂಡಮಾನ್ ಇತಿಹಾಸದೊಳಗೊಂದು ಪಯಣ'''''''' ಶಕುಂತಲಾ ಶಿವರಾಮ್ ಅವರು ಬರೆದ ಕೃತಿ ಇದಕ್ಕೊಂದು ಅಪವಾದ. ಅಂಡಮಾನ್ ಎನ್ನುವ ಕತ್ತಲ ರೂಪವನ್ನು ಮನುಷ್ಯ ಸಂವೇದಿ ಸಮಾಜವನ್ನಾಗಿ ಮಾಡಲು ದುಡಿದ ನಮ್ಮ ಗೆಳತಿಯರ, ತಾಯಂದಿರ ಮತ್ತು ಅಕ್ಕಂದಿರ ಶ್ರಮಕ್ಕೆ ಗೌರವ ನೀಡುತ್ತ ದಿಟ್ಟ ಹೆಜ್ಜೆಯ ಗಟ್ಟಿಗಿತ್ತಿಯರು ನಾಡುಕಟ್ಟಿದ ಬಗೆಯನ್ನು ದಾಖಲಿಸುತ್ತದೆ. ವಿಮರ್ಶಕಿ, ಲೇಖಕಿ ಮತ್ತು ಸಮಾಜಮುಖಿ ಚಿಂತನೆಯುಳ್ಳ ಡಾ. ರಾಜಲಕ್ಷ್ಮೀಯವರು, ಶಕುಂತಲಾ ಶಿವರಾಮ್ ಅವರ ಪುಸ್ತಕವನ್ನು (ಮೂಲ-ಇಂಗ್ಲೀಷ್) ಕನ್ನಡಕ್ಕೆ ಅನುವಾದಿಸಿದ್ದಾರೆ. ನವಕರ್ನಾಟಕ ಪ್ರಕಾಶನ ಸಂಸ್ಥೆ ಇದನ್ನು ಪ್ರಕಟ ಮಾಡಿದೆ.