ದಾವಣಗೆರೆ ಲೋಕಸಭಾ ಕ್ಷೇತ್ರ: ನಾಳೆ ಬಿಗಿ ಬಂದೋಬಸ್ತ್‌ ಮಧ್ಯೆ ಮತ ಎಣಿಕೆ

| Published : Jun 03 2024, 12:30 AM IST

ದಾವಣಗೆರೆ ಲೋಕಸಭಾ ಕ್ಷೇತ್ರ: ನಾಳೆ ಬಿಗಿ ಬಂದೋಬಸ್ತ್‌ ಮಧ್ಯೆ ಮತ ಎಣಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದ ಮತ ಎಣಿಕಾ ಕೇಂದ್ರದಲ್ಲಿ ಜೂ.4ರಂದು ಬೆಳಗ್ಗೆ 8ರಿಂದ ಆರಂಭವಾಗಲಿದೆ. ಮಧ್ಯಾಹ್ನದ ವೇಳೆ ಇಡೀ ಕ್ಷೇತ್ರದ ಫಲಿತಾಂಶ ಹೊರಬೀಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದ್ದಾರೆ.

- ಶಿವಗಂಗೋತ್ರಿಯ ದಾವಿವಿ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಜ್ಜು: ಜಿಲ್ಲಾಧಿಕಾರಿ ಮಾಹಿತಿ

- ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 14 ಟೇಬಲ್‌, ಗರಿಷ್ಠ 19 ಸುತ್ತುಗಳಲ್ಲಿ ಮತ ಎಣಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದ ಮತ ಎಣಿಕಾ ಕೇಂದ್ರದಲ್ಲಿ ಜೂ.4ರಂದು ಬೆಳಗ್ಗೆ 8ರಿಂದ ಆರಂಭವಾಗಲಿದೆ. ಮಧ್ಯಾಹ್ನದ ವೇಳೆ ಇಡೀ ಕ್ಷೇತ್ರದ ಫಲಿತಾಂಶ ಹೊರಬೀಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದರು.

ನಗರದಲ್ಲಿ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 6.30ರಿಂದ ಭದ್ರತಾ ಕೊಠಡಿ ತೆರೆಯಲಿದ್ದು, 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದೆ. ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲ 30 ಅಭ್ಯರ್ಥಿಗಳ ಫಲಿತಾಂಶ ಮಧ್ಯಾಹ್ನದ ಹೊತ್ತಿಗೆ ಹೊರಬರುವ ಸಾಧ್ಯತೆ ಇದೆ ಎಂದರು.

ಹರಪನಹಳ್ಳಿ ಸೇರಿದಂತೆ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು 8 ಕ್ಷೇತ್ರಗಳನ್ನು ಒಳಗೊಂಡ ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ಶಿವಗಂಗೋತ್ರಿಯ ದಾವಿವಿಯಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ. ಗರಿಷ್ಠ 19 ಸುತ್ತುಗಳಲ್ಲಿ ಮತ ಎಣಿಕೆ ಆಗಲಿದೆ. ಪ್ರತಿ ಸುತ್ತಿನಲ್ಲೂ ಎಲ್ಲಾ ಕ್ಷೇತ್ರಗಳಲ್ಲಿ ಎಣಿಕೆ ನಡೆದ ನಂತರ ಮುಂದಿನ ಸುತ್ತಿನ ಎಣಿಕೆ ಆರಂಭಿಸಲಾಗುವುದು ಎಂದು ಹೇಳಿದರು.

ಪ್ರತಿ ಎಣಿಕೆ ಟೇಬಲ್‌ಗಳಲ್ಲಿ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕ, ಒಬ್ಬರು ಮೈಕ್ರೋ ಅಬ್ಸರ್ವರ್‌ ನೇಮಿಸಿದ್ದು, ಎಲ್ಲ ಕ್ಷೇತ್ರಗಳಿಗೆ 336 ಎಣಿಕೆ ಸಿಬ್ಬಂದಿ ನೇಮಕ ಮಾಡಿ, ಎರಡು ಹಂತದ ತರಬೇತಿ ನೀಡಲಾಗಿದೆ. ಮತ ಎಣಿಕೆ ಮುಕ್ತಾಯದ ನಂತರ ವಿವಿ ಪ್ಯಾಟ್ ಸ್ಲಿಪ್‌ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಮತಗಟ್ಟೆಗಳಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿ, ವಿವಿ ಪ್ಯಾಟ್ ಸ್ಲಿಪ್‌ ಎಣಿಕೆ ಮಾಡಲಾಗುವುದು ಎಂದರು.

ಪ್ರತ್ಯೇಕ ಟೇಬಲ್‌ನಲ್ಲಿ ಅಂಚೆ ಮತ ಎಣಿಕೆ:

ಲೋಕಸಭೆ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು, ಅಗತ್ಯ ಸೇವೆಗಳ ಗೈರುಹಾಜರಿ ಮತದಾರರು, ಚುನಾವಣಾ ಕರ್ತವ್ಯನಿರತರು ಸೇರಿದಂತೆ 4918 ಅಂಚೆ ಮತಪತ್ರಗಳು ಸ್ವೀಕೃತವಾಗಿವೆ. ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲು 12 ಎಣಿಕೆ ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ ಪ್ರತಿ ಟೇಬಲ್‌ಗೆ ಒಬ್ಬ ಸಹಾಯಕ ಚುನವಣಾಧಿಕಾರಿ, ಒಬ್ಬ ಎಣಿಕೆ ಮೇಲ್ವಿಚಾರಕರು, ಒಬ್ಬ ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

565 ಸೇವಾ ಮತದಾರರು:

ಕ್ಷೇತ್ರದಲ್ಲಿ 565 ಸೇವಾ ಮತದಾರರಿಗೆ ಇಟಿಪಿಬಿಎಂಎಸ್ ತಂತ್ರಜ್ಞಾನ ಮೂಲಕ ಮತಪತ್ರಗಳನ್ನು ಕಳಿಸಲಾಗಿದೆ. ಮೇ ಅಂತ್ಯದವರೆಗೆ 298 ಮತಗಳು ಸ್ವೀಕೃತವಾಗಿವೆ. ಇವುಗಳನ್ನು ಸ್ವೀಕರಿಸಲು ಎಣಿಕೆ ದಿನ ಬೆಳಗ್ಗೆ 7.59ರ ಸಮಯದವರೆಗೆ ಸ್ವೀಕೃತವಾಗುವ ಮತಗಳನ್ನು ಎಣಿಕೆ ಮಾಡಲಾಗುವುದು. ಇದನ್ನು ಎಣಿಕೆ ಮಾಡಲು 1 ಟೇಬಲ್ ಸ್ಥಾಪಿಸಿ, ನಾಲ್ಕು ಜನ ತಾಂತ್ರಿ ಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮತಗಟ್ಟೆಗಳು, ಎಣಿಕೆ ಸುತ್ತುಗಳ ವಿವರ:

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಇರಲಿದ್ದು, ಪ್ರತಿ ಸುತ್ತಿಗೂ 14 ಮತಗಟ್ಟೆಗಳ ಎಣಿಕೆ ಕ್ರಮವಾಗಿ ನಡೆಯಲಿದೆ. ಮತಗಟ್ಟೆಗಳ ಸಂಖ್ಯೆಯನ್ನು ಆಧರಿಸಿ, ಸುತ್ತು ನಿಗದಿಯಾಗಲಿವೆ. ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆಗಳಿವೆ. ಜಗಳೂರು 263 ಮತಗಟ್ಟೆ 19 ಸುತ್ತು, ಹರಪನಹಳ್ಳಿ 253 ಮತಗಟ್ಟೆ 19 ಸುತ್ತು, ಹರಿಹರ 228 ಮತಗಟ್ಟೆ 16 ಸುತ್ತು, ದಾವಣಗೆರೆ ಉತ್ತರ 245 ಮತಗಟ್ಟೆ 18 ಸುತ್ತು, ದಾವಣಗೆರೆ ದಕ್ಷಿಣ 217 ಮತಗಟ್ಟೆ 16 ಸುತ್ತು, ಮಾಯಕೊಂಡ 240 ಮತಗಟ್ಟೆ 18 ಸುತ್ತು, ಚನ್ನಗಿರಿ 225 ಮತಗಟ್ಟೆ 19 ಸುತ್ತು, ಹೊನ್ನಾಳಿ 245 ಮತಗಟ್ಟೆಗಳ ಎಣಿಕೆ 18 ಸುತ್ತುಗಳಲ್ಲಿ ನಡೆಯಲಿದೆ. ಚುನಾವಣಾ ಕಣದಲ್ಲಿ 30 ಅಭ್ಯರ್ಥಿಗಳು ಹಾಗೂ ನೋಟಾ ಸೇರಿ 31 ಕ್ರಮಾಂಕಗಳನ್ನು ನೋಡಬೇಕಾಗಿದೆ. ಆದ್ದರಿಂದ ಮತ ಎಣಿಕೆ ಮುಕ್ತಾಯದ ಅವಧಿ ಹೆಚ್ಚಳವಾಗಬಹುದು ಎಂದು ಹೇಳಿದರು.

- - - * ದಾವಣಗೆರೆ ಕ್ಷೇತ್ರಕ್ಕೆ ಶೇ.76.978 ಮತದಾನ

ದಾವಣಗೆರೆ ಲೋಕಸಭಾ ಕ್ಷೇತ್ರವು ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1946 ಮತಗಟ್ಟೆಗಳಿಂದ 851990 ಪುರುಷ, 857117 ಮಹಿಳಾ, 137 ಇತರೆ ಸೇರಿ 1709244 ಮತದಾರರನ್ನು ಹೊಂದಿದೆ. ಮೇ.7ರಂದು ನಡೆದ ಮತದಾನದಲ್ಲಿ 667742 ಪುರುಷ, 647964 ಮಹಿಳೆಯರು, 40 ಇತರೆ ಸೇರಿ ಒಟ್ಟು 1315746 ಮತದಾರರು ಮತ ಚಲಾಯಿಸಿದ್ದು, ಕ್ಷೇತ್ರದಲ್ಲಿ ಶೇ 76.98 ರಷ್ಟು ಮತದಾನವಾಗಿದೆ. ಒಟ್ಟು 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

- - - * ಎಣಿಕೆ ಕೇಂದ್ರಕ್ಕೆ 3 ಹಂತದ ಭದ್ರತಾ ವ್ಯವಸ್ಥೆ ಮತ ಎಣಿಕೆ ಕೇಂದ್ರ ಸುತ್ತಮುತ್ತ 4 ಹಂತಗಳಲ್ಲಿ ಭದ್ರತೆ ಒದಗಿಸಲಾಗಿದೆ. ಮೊದಲ ಹಂತದಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಎರಡನೇ ಹಂತದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ 3ನೇ ಹಂತದಲ್ಲಿ ಸಿವಿಲ್ ಪೊಲೀಸ್ ವ್ಯವಸ್ಥೆಯ ಭದ್ರತೆ ಒದಗಿಸಲಾಗಿದೆ. ಅಭ್ಯರ್ಥಿಗಳ ಎಣಿಕೆ ಏಜೆಂಟರು, ಎಣಿಕೆ ಸಿಬ್ಬಂದಿಗಳಿಗೆ ಪ್ರವೇಶಕ್ಕೆ ಗುರುತಿನ ಚೀಟಿ ನೀಡಲಾಗಿದೆ. ಗುರುತಿನ ಚೀಟಿ ಇಲ್ಲದ ಯಾರಿಗೂ ಮತ ಎಣಿಕಾ ಕೇಂದ್ರದ ಒಳಗೆ ಪ್ರವೇಶ ಇರುವುದಿಲ್ಲ.

ಮೊಬೈಲ್‌ಗಳ ನಿಷೇಧ:

ಮತ ಎಣಿಕಾ ಕೇಂದ್ರದೊಳಗೆ ಅನುಮತಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ಯಾರಿಗೂ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ತರಲು ಅವಕಾಶ ಇರುವುದಿಲ್ಲ. ಎಣಿಕೆ ಕೇಂದ್ರದೊಳಗೆ ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಆಯುಧ, ಬೆಂಕಿಪೊಟ್ಟಣ, ಲೈಟರ್, ನೀರಿನ ಬಾಟಲಿಗಳನ್ನು ಸಹ ಒಯ್ಯುವಂತಿಲ್ಲ. ಮೂರು ಹಂತದಲ್ಲಿ ಚೆಕ್ ಮಾಡುವ ಮೂಲಕ ಏಜೆಂಟರು ಹಾಗೂ ಇತರೆ ಸಿಬ್ಬಂದಿಗಳನ್ನು ಒಳಬಿಡಲಾಗುತ್ತದೆ. ಅಭ್ಯರ್ಥಿಗಳ ಎಣಿಕೆ ಏಜೆಂಟರಾಗಿ ಆಗಮಿಸುವವರಿಗೆ ಪಾವತಿ ಆದಾರದ ಮೇಲೆ ಉಪಾಹಾರ, ಶುದ್ದ ಕುಡಿಯುವ ನೀರು, ಲಸ್ಸಿ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದ್ದು ಅಂತಹವರಿಗೆ ಎಷ್ಟು ಅಗತ್ಯವಿದೆಯೋ ಅಷ್ಟೂ ಕೂಪನ್‍ ಪಡೆಯಲು ಅವಕಾಶವಿದೆ.

ಧ್ವನಿವರ್ಧಕ ಮೂಲಕ ಫಲಿತಾಂಶ ವಿವರ:

ಪ್ರತಿ ಸುತ್ತಿನ ಮತ ಎಣಿಕೆ ನಂತರ ಸಾರ್ವಜನಿಕವಾಗಿ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಎಣಿಕೆ ವಿವರವನ್ನು ತಿಳಿಸಲಾಗುವುದು. ಸಾರ್ವಜನಿಕರು ಸೇರಿದಂತೆ ಪಕ್ಷಗಳ ಕಾರ್ಯಕರ್ತರು ತಾಳ್ಮೆ ವಹಿಸುವ ಮೂಲಕ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಮನವಿ ಮಾಡಿದರು.

- - -

ಬಾಕ್ಸ್‌ * ನಿಷೇಧಾಜ್ಞೆ ಜಾರಿ, ಮದ್ಯ ಮಾರುವಂತಿಲ್ಲ - ಗುಂಪು ಸೇರುವಂತಿಲ್ಲ, ಮೆರವಣಿಗೆ, ಪಟಾಕಿ ಸಿಡಿಸುವಂತಿಲ್ಲ

ದಾವಣಗೆರೆ: ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ಜೂ.4ರಂದು ಸಾರ್ವಜನಿಕ ಶಾಂತಿ, ಕಾನೂನು, ಸುವ್ಯವಸ್ಥೆ ಕಾಪಾಡಲು ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದರು.

ನಿಷೇಧಾಜ್ಞೆ ಜಾರಿಗೊಂಡ ಅ‍ವಧಿಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಯಾರೂ ಅಕ್ರಮವಾಗಿ ಗುಂಪು ಸೇರುವಂತಿಲ್ಲ, ಮೆರವಣಿಗೆಯನ್ನು ಮಾಡುವಂತಿಲ್ಲ, ಪಟಾಕಿ ಸಿಡಿಸುವುದು, ವಿಜಯೋತ್ಸವ ಆಚರಿಸುವಂತಿಲ್ಲ. ಮತ ಎಣಿಕೆ ದಿನ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾದ್ಯಂತ ಜೂನ್ 4ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಮತ ಎಣಿಕೆ ಕೇಂದ್ರದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎಣಿಕೆ ಕೇಂದ್ರದೊಳಗೆ ಹೋಗಲು ಮೂರು ಹಂತದ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಎಲ್ಲ ಕಡೆ ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಏಜೆಂಟರು, ಸಾರ್ವಜನಿಕರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದೊಳಗೆ ಪ್ರವೇಶಿಸುವವರಿಗೆ ಅನುಮತಿಸಲಾದ ಗುರುತಿನ ಚೀಟಿ ಪ್ರದರ್ಶಿಸಿ, ಒಳಗೆ ಹೋಗಬೇಕು. ಪ್ರವೇಶ ಪತ್ರ ಇಲ್ಲದವರಿಗೆ ಮತ ಎಣಿಕಾ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಪಂ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ ಬಿ. ಇಟ್ನಾಳ್ ಮಾತನಾಡಿ, ಲೋಕಸಭೆ 2019ರ ಚುನಾವಣೆಯ ಮತದಾನಕ್ಕಿಂತ ಶೇ.2024ರ ಚುನಾವಣೆಯಲ್ಲಿ ಶೇ.4ರಷ್ಟು ಮತದಾನವು ಹೆಚ್ಚಳವಾಗಿದೆ. ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್ ಸಮಿತಿ ಅನೇಕ ಜಾಗೃತಿ ಕಾರ್ಯಕ್ರಮ ರೂಪಿಸಿತ್ತು. ಮತದಾನ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ಕೆ ಮೆಚ್ಚಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಇದ್ದರು.

- -- -1ಕೆಡಿವಿಜಿ15, 16:

ದಾವಣಗೆರೆ ಡಿಸಿ ಕಚೇರಿಯಲ್ಲಿ ಜೂ.4ರಂದು ಮತ ಎಣಿಕೆ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಇಲಾಖೆಗಳ ಅಧಿಕಾರಿಗಳು ಇದ್ದರು.