ಗೋವು ಮತ್ತು ನಾವು ಎಂಬುದರ ನಡುವೆ ಭಾವದ ಕೊಂಡಿ ಇದೆ. ಗೋ ಸಂರಕ್ಷಣೆ ಮಾಡುವವರಿಗೆ ರಕ್ಷಣೆ ನೀಡುವ ಕಾರ್ಯವಾಗಬೇಕು

ಯಲಬುರ್ಗಾ: ಗೋ ಸಂರಕ್ಷಣೆ ನಮ್ಮ ದೇಶದ ಸಂಸ್ಕೃತಿಯಾಗಿದ್ದು, ಅವುಗಳ ಸಂರಕ್ಷಣೆ ಮೊದಲ ಆದ್ಯತೆ ಆಗಬೇಕಾಗಿದೆ ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಗೋ ಸಂರಕ್ಷಣೆ ತಾಲೂಕು ಅಭಿಯಾನ ಘಟಕದಿಂದ ಸೋಮವಾರ ನಡೆದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಗೋವಿನ ಹಾಲು ಸೇರಿದಂತೆ ಗೋಉತ್ಪನ್ನ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ. ಹೀಗಾಗಿ ಗೋವುಗಳಿಗೆ ವಿಶೇಷ ಆದ್ಯತೆ ನೀಡಬೇಕು. ಎನ್‌ಎಂಪಿಟಿಯಿಂದ ಗೋ ರಕ್ಷಣೆ ನಿಟ್ಟಿನಲ್ಲಿ ಸಹಕಾರ ನೀಡಲಾಗುವುದು ಎಂದರು.

ಹಿರಿಯ ಮುಖಂಡ ವೀರನಗೌಡ ಬನ್ನಪ್ಪಗೌಡರ ಮಾತನಾಡಿ, ಗೋವು ಮತ್ತು ನಾವು ಎಂಬುದರ ನಡುವೆ ಭಾವದ ಕೊಂಡಿ ಇದೆ. ಗೋ ಸಂರಕ್ಷಣೆ ಮಾಡುವವರಿಗೆ ರಕ್ಷಣೆ ನೀಡುವ ಕಾರ್ಯವಾಗಬೇಕು. ರಕ್ಷಿಸಿದ ಗೋವಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ.

ಗೋವಿನ ಹೆಸರಿನಲ್ಲಿ ಆಗುವ ತೊಂದರೆ ಬಗ್ಗೆ ಅವಲೋಕನ ಮಾಡಿ ಗೋಸಂರಕ್ಷಕ ನಿಧಿಯ ಸ್ಥಾಪನೆ ಅಗತ್ಯವಿದೆ. ಗೋವಿನ ಹೆಸರಿನಲ್ಲಿ ಸಂಸ್ಕೃತಿ ಜಾಗೃತಿ ಕಾರ್ಯಕ್ರಮ ಇದಾಗಿದ್ದು, ಜಾಗೃತಿ ಕಾರ್ಯಗಳು ನಿರಂತರ ನಡೆದಾಗ ಮಾತ್ರ ಜನರು ಎಚ್ಚರಗೊಳ್ಳಲು ಸಾಧ್ಯ ಎಂದರು.

ಮುಖಂಡರಾದ ಸುರೇಶಗೌಡ ಶಿವನಗೌಡರ, ವೀರಣ್ಣ ಹುಬ್ಬಳ್ಳಿ ಮಾತನಾಡಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಮರೇಶ ಹುಬ್ಬಳ್ಳಿ, ದೊಡ್ಡಯ್ಯ ಗುರುವಿನ, ಅಶೋಕ ಅರಕೇರಿ, ಕಲ್ಲೇಶಪ್ಪ ಕರಮುಡಿ, ಶ್ರೀಶೈಲಪ್ಪ ಗೊಂಡಬಾಳ, ಮಲ್ಲಪ್ಪ ಸುರಕೊಡ, ಶಿವು ನರೇಗಲ್, ಆನಂದ ಹಡಪದ, ಯೋಗೀಶ ಶೆಟ್, ಸಂತೋಷಿಮಾ ಜೋಷಿ, ಸುನೀತಾ ಪತಂಗರಾಯ್, ಜಿ.ಎಸ್.ಪಾಟೀಲ್‌, ಸಿದ್ದಪ್ಪ ಹಕ್ಕಿಗುಣಿ, ಮಹಾಂತೇಶ ಭಾಸ್ಕ‌ರ್, ಸಿದ್ದರಾಮೇಶ ಬೆಲೇರಿ, ಸಂಗಪ್ಪ ರಾಮತಾಳ‌ ಸೇರಿದಂತೆ ಇದ್ದರು.