ಸಂಡೂರು: ತಾಲೂಕಿನ ತೋರಣಗಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಜನರಿಗೆ ನಿವೇಶನ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಿಪಿಎಂ ಪಕ್ಷದ ಮುಖಂಡರು ಆಗ್ರಹಿಸಿದ್ದಾರೆ.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ತೋರಣಗಲ್ಲು ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿ ನಾಗರಾಜ್ ಹಾಗೂ ಪಿಡಿಒ ಹನುಮಂತ ಮಾಗಿ ಅವರಿಗೆ ಮನವಿ ಸಲ್ಲಿಸಿ, ತೋರಣಗಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಚ್ಎಲ್ಸಿ ಕಾಲುವೆ ಪಕ್ಕದಲ್ಲಿ ಹಲವು ವರ್ಷಗಳಿಂದ ಬಡ ಕೂಲಿ ಕಾರ್ಮಿಕರು ವಾಸವಾಗಿದ್ದು, ಇವರು ರೇಷನ್ ಕಾರ್ಡ್, ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಹೊಂದಿದ್ದಾರೆ. ಎಲ್ಲ ಚುನಾವಣೆಗಳಲ್ಲಿ ವೋಟು ಹಾಕಿದ್ದರೂ ಈ ವರೆಗೆ ಯಾವುದೇ ಸರ್ಕಾರಗಳು ಇವರಿಗೆ ನಿವೇಶನ ಮತ್ತು ಮನೆಗಳನ್ನು ನೀಡಲು ಸಾಧ್ಯವಾಗಿಲ್ಲ.ತೋರಣಗಲ್ಲು ಗ್ರಾಮದಲ್ಲಿ ಒಂದೊಂದು ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸ ಮಾಡುತ್ತಿವೆ. ಇದು ಕೈಗಾರಿಕಾ ಪ್ರದೇಶವಾಗಿರುವ ಕಾರಣ, ಇಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿವೆ. ಜಿಲ್ಲಾ ಖನಿಜ ನಿಧಿ, ಕೆಎಂಇಆರ್ಸಿ ಹಣದಿಂದ ಭೂಮಿಯನ್ನು ಖರೀದಿ ಮಾಡಿ ಇಲ್ಲಿನ ವಸತಿ ಹಾಗೂ ನಿವೇಶನ ರಹಿತರಿಗೆ ವಸತಿ ಹಾಗೂ ನಿವೇಶನ ಒದಗಿಸಿಕೊಡಬೇಕು. ನಿವೇಶನ ರಹಿತರ ಸಮೀಕ್ಷೆ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಅರ್ಹ ಫಲಾನುಭವಿಗಳನ್ನು ಸೇರ್ಪಡೆಗೊಳಿಸಲು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ನೀಡಿದ ಮೇ 15, 2026ರ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಸಿಪಿಎಂ ತಾಲೂಕು ಕಾರ್ಯದರ್ಶಿ ಎ. ಸ್ವಾಮಿ, ಕಾರ್ಯಕಾರಿ ಮಂಡಳಿ ಸದಸ್ಯ ಜೆ.ಎಂ. ಚನ್ನಬಸಯ್ಯ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಚ್. ಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯ ಎಸ್ ಕಾಲುಬಾ, ಎಸ್ಎಫ್ಐ ಮುಖಂಡ ಶಿವರೆಡ್ಡಿ, ಎನ್. ಶಂಕ್ರಣ್ಣ, ನಾಗಭೂಷಣ, ವೇಬಾ ಕುಮಾರಿ, ಹುಸೇನಮ್ಮ, ಗಂಗಮ್ಮ, ಲಕ್ಷ್ಮೀ, ದುರ್ಗಮ್ಮ, ಮರಿಯಮ್ಮ, ಶಂಶಾದ್ ಬೇಗಂ, ಚಾಂದ್ ಬಾಷಾ, ಮಂಜಮ್ಮ, ತಿಪ್ಪಮ್ಮ ಮುಂತಾದವರು ಉಪಸ್ಥಿತರಿದ್ದರು.