ಸಾರಾಂಶ
ಶಿವಮೊಗ್ಗ: ಕ್ರೇನಿಯೊಸಿನೋಸ್ಟೊಸಿಸ್ ಎಂಬ ಅಪರೂಪದ ಕಾಯಿಲೆಯಿಂದ ತಲೆಬುರುಡೆ ವಿರೂಪಗೊಂಡು ಬಳಲುತ್ತಿದ್ದ 9 ತಿಂಗಳ ಮಗುವಿನ ತಲೆ ಬುರುಡೆ ಚಿಪ್ಪನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ಹರೀಶ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಲೆಬುರುಡೆಯ ಮೂಳೆಗಳ ಮಧ್ಯೆ ಸೂಚರ್ಸ್ (ಬಿರುಕುಗಳು) ಇರುತ್ತದೆ. ಈ ಬಿರುಕುಗಳು ಅವಧಿಗಿಂತ ಮುಂಚೆ ಕೂಡಿಕೊಂಡರೆ ಆ ಸಂದರ್ಭದಲ್ಲಿ ಬುರುಡೆಯ ಒಂದು ಭಾಗ ಸರಿಯಾಗಿ ಬೆಳವಣಿಗೆ ಆಗುವುದಿಲ್ಲ ಇದನ್ನೇ ಕ್ರೇನಿಯೊಸಿನೋಸ್ಟೊಸಿಸ್ ಎಂದು ಕರೆಯಲಾಗುತ್ತದೆ. ಕ್ರೇನಿಯೊಸಿನೋಸ್ಟೊಸಿಸ್ ನಿಂದ ಮಗುವಿನ ತಲೆಬುರುಡೆ ವಿರೂಪವಾಗಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ದೃಷ್ಟಿ ಹೋಗಬಹುದು, ಮೆದುಳಿನ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಅಥವಾ ಜೀವಕ್ಕೂ ಅಪಾಯವಾಗಬಹುದು ಎಂದರು.ಶಿವಮೊಗ್ಗದಲ್ಲಿ ಇದೇ ಮೊದಲ ಕ್ರೇನಿಯೊಸಿನೋಸ್ಟೊಸಿಸ್ ಶಸ್ತ್ರಚಿಕಿತ್ಸೆಯಾಗಿದ್ದು, ಯಶಸ್ವಿಯಾಗಿದೆ. ಇದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ, ಈ ಸರ್ಜರಿಗೆ ನರಶಸ್ತ್ರಚಿಕಿತ್ಸಾ ತಜ್ಞ ವೈದ್ಯರಿರಬೇಕು, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯರಿರಬೇಕು, ಮಕ್ಕಳ ಅರವಳಿಕೆ ತಜ್ಞ ವೈದ್ಯರಿರಬೇಕು, ಮಕ್ಕಳ ಐಸಿಯು ವ್ಯವಸ್ಥೆ ಇರಬೇಕು ಹಾಗಾಗಿ ಈ ಶಸ್ತ್ರಚಿಕಿತ್ಸೆಗೆ ಒಂದು ತಜ್ಞ ವೈದ್ಯರ ತಂಡ ಬೇಕಾಗುತ್ತದೆ. ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡುವಂತಹ ಕೇಂದ್ರಗಳು ತುಂಬಾ ಕಡಿಮೆ ಇವೆ ಎಂದು ಹೇಳಿದರು.
ಮೆದುಳಿಗೆ ಯಾವುದೇ ರೀತಿ ಹಾನಿಯಾಗದಂತೆ ಮೆದುಳಿನ ಚಿಪ್ಪನ್ನು ಬೇರ್ಪಡಿಸಿ ಕೊಟ್ಟಿದ್ದಾರೆ. ನಂತರ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ.ಚೇತನ್ ಕುಮಾರ್ ನವಿಲೆಹಾಳ್ ಅವರು ಆ ತಲೆ ಬುರುಡೆಯ ಚಿಪ್ಪಿನ ಆಕಾರವನ್ನು ಬದಲಾಯಿಸಿ ಸರಿಯಾದ ಆಕಾರಕ್ಕೆ ಬರುವಂತೆ ಸರಿಪಡಿಸಿ ಅಳವಡಿಸಿದ್ದಾರೆ. ಮಕ್ಕಳ ಅರವಳಿಕೆ ತಜ್ಞ ವೈದ್ಯರಾದ ಡಾ.ಅರ್ಜುನ್ ಭಾಗವತ್ ಮಗುವಿಗೆ ಅನೆಸ್ತೇಶಿಯಾ ನೀಡಿ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಸಹಕರಿಸಿದ್ದಾರೆ ಎಂದು ವಿವರಿಸಿದರು.ಮಗುವಿಗೆ 8 ತಿಂಗಳು ಇರಬೇಕಾದರೆ ಪೋಷಕರು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದು ಮಕ್ಕಳ ತಜ್ಞ ವೈದ್ಯರಾದ ಡಾ.ಕಾವ್ಯ ಅವರ ಬಳಿ ತೋರಿಸಿದ್ದಾರೆ, ಈ ಸಂದರ್ಭದಲ್ಲಿ ಸಿ.ಟಿ ಸ್ಕ್ಯಾನ್ ಮಾಡಿಸಲಾಗಿದ್ದು, ಈ ಸಿ.ಟಿ ಸ್ಕ್ಯಾನ್ನಲ್ಲಿ ಮಗುವಿಗೆ ಕ್ರೇನಿಯೊಸಿನೋಸ್ಟೊಸಿಸ್ ಇರುವುದು ದೃಢಪಟ್ಟಿದೆ. ಈ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಗುವಿನ ಪೋಷಕರಿಗೆ ವಿವರಿಸಿದಾಗ ಅವರು ದೃಢ ಮನಸ್ಸಿನಿಂದ ಈ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡ ನಂತರ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇವೆ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ, ಮಗು ಕೂಡಾ ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯ ಡಾ.ಚೇತನ್ ಕುಮಾರ್ ನವಿಲೆಹಾಳ್, ಮಕ್ಕಳ ಅರವಳಿಕೆ ತಜ್ಞ ವೈದ್ಯ ಡಾ.ಅರ್ಜುನ್ ಭಾಗವತ್, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರರೋಗ ತಜ್ಞ ವೈದ್ಯ ಡಾ.ಪ್ರಶಾಂತ್ ಶ್ರೀಪುರಂ, ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿ ಮುರುಳೀಧರ್ ರಾವ್ ಕುಲಕರ್ಣಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿಜಯ ಕುಮಾರ ಮಾಯೆರ ಉಪಸ್ಥಿತರಿದ್ದರು.