ಸಾರಾಂಶ
ಒಬ್ಬ ವಿದ್ಯಾರ್ಥಿ ಪದವಿ ಪೂರೈಸುವ ವೇಳೆಗೆ ಆತನ ಶಿಕ್ಷಣಕ್ಕಾಗಿ ಕೆಲವು ಲಕ್ಷಗಳನ್ನು ಸರ್ಕಾರ ಆತನ ಮೇಲೆ ಖರ್ಚು ಮಾಡಿರುತ್ತದೆ. ಹೀಗೆ ಭಾರತದ ನೆಲದಿಂದ ಲಕ್ಷಾಂತರ ಯುವಜನತೆ ಶಿಕ್ಷಣ ಪಡೆದ ಬಳಿಕ ವಿದೇಶಗಳಿಗೆ ಹೋಗಿ ನೆಲೆಸುತ್ತಾರೆ. ಅವರಿಗೆ ನಮ್ಮ ದೇಶದ ಬಗೆಗೆ ಯಾವ ಗೌರವವಿದೆ ಎಂದು ಪ್ರಶ್ನಿಸಬೇಕಾಗುತ್ತದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಎಲ್ಲ ವೈಯಕ್ತಿಕ ಹಿತಾಸಕ್ತಿಗಳನ್ನೂ ಬದಿಗಿರಿಸಿ ದೇಶಕ್ಕಾಗಿ ಸ್ಪಂದಿಸುವ ಯುವಸಮುದಾಯದ ಸೃಷ್ಟಿಯಾಗಬೇಕು. ಶಿಕ್ಷಣ ವ್ಯವಸ್ಥೆ ಈ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕೆಂಪೇಗೌಡ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ನಿರ್ದೇಶಕ ಕೃಷ್ಣಪ್ಪ ಹೇಳಿದರು.ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ನಗರ ಹೊರವಲಯದ ಕೆಂಪೇಗೌಡ ಕಾನೂನು ಮಹಾವಿದ್ಯಾಲಯದ ಮೂರು ಮತ್ತು ಐದು ವರ್ಷಗಳ ಅಂತಿಮ ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೊಟ್ಯಂತರ ರುಗಳ ವೆಚ್ಚಒಬ್ಬ ವಿದ್ಯಾರ್ಥಿ ಪದವಿ ಪೂರೈಸುವ ವೇಳೆಗೆ ಆತನ ಶಿಕ್ಷಣಕ್ಕಾಗಿ ಕೆಲವು ಲಕ್ಷಗಳನ್ನು ಸರ್ಕಾರ ಆತನ ಮೇಲೆ ಖರ್ಚು ಮಾಡಿರುತ್ತದೆ. ಹೀಗೆ ಭಾರತದ ನೆಲದಿಂದ ಲಕ್ಷಾಂತರ ಯುವಜನತೆ ಶಿಕ್ಷಣ ಪಡೆದ ಬಳಿಕ ವಿದೇಶಗಳಿಗೆ ಹೋಗಿ ನೆಲೆಸುತ್ತಾರೆ. ಅವರಿಗೆ ನಮ್ಮ ದೇಶದ ಬಗೆಗೆ ಯಾವ ಗೌರವವಿದೆ ಎಂದು ಪ್ರಶ್ನಿಸಬೇಕಾಗುತ್ತದೆ ಎಂದರು.
ಇಂದು ಅಮೇರಿಕಾದಂತಹ ದೇಶ ತನ್ನ ಕಂಪನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಬೇಡಿ ಎಂದು ಬಹಿರಂಗವಾಗಿ ಹೇಳುವಷ್ಟರ ಮಟ್ಟಿಗೆ ಮುಂದುವರೆಯುತ್ತಿದೆ. ಆದರೆ ಸ್ವಾಭಿಮಾನವಿಲ್ಲದ ಭಾರತದ ಕೆಲವರು ಆ ದೇಶಕ್ಕೆ ಹೋಗಿ ಅಲ್ಲಿಯವರ ಚಾಕರಿ ಮಾಡುತ್ತಿದ್ದಾರೆ. ದೇಶಪ್ರೇಮ ನಡೆಯನ್ನು ಇಸ್ರೇಲಿಗರನ್ನು ನೋಡಿ ಕಲಿಯಬೇಕು ಎಂದರು.ಕೆಂಪೇಗೌಡ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಬಿ.ಎನ್. ಚಿನ್ನಪ್ಪ ರೆಡ್ಡಿ ಮಾತನಾಡಿ, ನಾವು ರೂಪಿಸಿದ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಸಮರ್ಪಿಸುತ್ತಿದ್ದೇವೆ ಎಂಬುದು ಆಡಳಿತ ಮಂಡಳಿಗೆ ಹಾಗೂ ಅಧ್ಯಾಪಕರಿಗೆ ಹೆಮ್ಮೆಯ ಸಂಗತಿ ಎಂದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿದರು. ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಬಿ.ಎಮ್. ರಾಮಸ್ವಾಮಿ, ಖಜಾಂಜಿ ಮಂಜುನಾಥ್, ನಿರ್ದೇಶಕ ನಾರಾಯಣಸ್ವಾಮಿ, ಕಾಲೇಜಿನ ಪ್ರಾಂಶುಪಾಲೆ ಬಿ.ಜಿ.ಶೋಭಾ, ವಿದ್ಯಾರ್ಥಿಗಳು ಇದ್ದರು.