ಹೊಸ ಕಾನೂನುಗಳು ಹಾಗೂ ಆಗಾಗ್ಗೆ ತಿದ್ದುಪಡಿಯಾಗುವ ಕಾನೂನುಗಳ ಬಗ್ಗೆ ಅರೆಕಾಲಿಕ ಸ್ವಯಂ ಸೇವಕರು ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ವ್ಯಾಪಕ ಅರಿವು ಮೂಡಿಸುವಂತೆ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ.ಪ್ರಭಾವತಿ ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹೊಸ ಕಾನೂನುಗಳು ಹಾಗೂ ಆಗಾಗ್ಗೆ ತಿದ್ದುಪಡಿಯಾಗುವ ಕಾನೂನುಗಳ ಬಗ್ಗೆ ಅರೆಕಾಲಿಕ ಸ್ವಯಂ ಸೇವಕರು ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ವ್ಯಾಪಕ ಅರಿವು ಮೂಡಿಸುವಂತೆ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ.ಪ್ರಭಾವತಿ ಸಲಹೆ ಮಾಡಿದರು.

ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಬೆಂಗಳೂರು ಔಟ್ಲಾಡ್ ಇಂಡಿಯಾ ಫೌಂಡೇಷನ್ ಹಾಗೂ ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ಸಹಯೋಗದಲ್ಲಿ 2025-26ನೇ ಸಾಲಿನ ಹೊಸ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಪ್ರಸಕ್ತ ಸಾಲಿಗೆ ನೂತನವಾಗಿ ಆಯ್ಕೆಯಾಗಿರುವ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಬೆಂಗಳೂರು ಔಟ್ಲಾಡ್ ಇಂಡಿಯಾ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತಿದೆ. ಬಡವರು, ದುರ್ಬಲರು, ನಿರ್ಗತಿಕರು, ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಸೇರಿದಂತೆ ಸಮಾಜದ ಎಲ್ಲರಿಗೂ ಹೊಸ ಹಾಗೂ ತಿದ್ದುಪಡಿಯಾಗುವ ಕಾನೂನುಗಳ ಮಾಹಿತಿ ಅಗತ್ಯವಿದೆ. ಅರೆಕಾಲಿಕ ಕಾನೂನು ಸ್ವಯಂ ಸೇವಕರ ಜ್ಞಾನ, ತಿಳಿವಳಿಕೆಯನ್ನು ನವೀಕರಿಸುವುದು, ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಪರಿಹರಿಸಿಕೊಳ್ಳಲು ಈ ತರಬೇತಿಯು ನೆರವಾಗಲಿದೆ ಎಂದರು.

ಕಾನೂನುಗಳು ನಿಂತ ನೀರಲ್ಲ, ಆಗಾಗ್ಗೆ ಬದಲಾಗುವ, ತಿದ್ದುಪಡಿಯಾಗುವ ಹಾಗೂ ಹೊಸದಾಗಿ ಸೃಷ್ಠಿಯಾಗುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತವೆ. ಅರೆಕಾಲಿಕ ಸ್ವಯಂ ಸೇವಕರು ಇಂತಹ ಕಾನೂನುಗಳನ್ನು ಜನರ ಮನೆಬಾಗಿಲಿಗೆ ತಲುಪಿಸಿ ಅರ್ಹ ಫಲಾನುಭವಿಗಳಿಗೆ ಉಚಿತ ಕಾನೂನು ನೆರವು ನೀಡುವುದೇ ತರಬೇತಿಯ ಪ್ರಮುಖ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಕಷ್ಟದಲ್ಲಿರುವ ಜನರಿಗೆ ವಸತಿ, ಪಿಂಚಣಿ, ಉದ್ಯೋಗ, ಇತರ ಸೌಲಭ್ಯಗಳನ್ನು ಕಲ್ಪಿಸಲು ಸ್ವಯಂ ಸೇವಕರು ಮುಂದಾಗಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ಚಾಮರಾಜನಗರ ಬಹಳ ವಿಸ್ತಾರವಾದ ಜಿಲ್ಲೆಯಾಗಿದ್ದು, ಸರ್ಕಾರದಿಂದ ಮಂಜೂರಾಗುವ ಪ್ರತಿಯೊಂದು ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಅಧಿಕಾರಿಗಳಿಂದ ಮಾತ್ರವಲ್ಲ, ಅದಕ್ಕೆ ಅರೆಕಾಲಿಕ ಸ್ವಯಂ ಸೇವಕರು ಜತೆಗೂಡಬೇಕು. ಸ್ವಯಂ ಸೇವಕರು ತಮ್ಮ ಜವಾಬ್ದಾರಿಯ ಜೊತೆಗೆ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸವಾಗಬೇಕು. ಸ್ವಯಂ ಸೇವಕರು ತಮ್ಮ ಕಾನೂನು ಅರಿವು, ಜ್ಞಾನವನ್ನು ಸಮಾಜದಲ್ಲಿ ಪಸರಿಸುವಲ್ಲಿ ತರಬೇತಿಯ ಪೂರ್ಣ ಯಶಸ್ಸು ಸಾದ್ಯವಾಗಲಿದೆ ಎಂದು ಕಿವಿಮಾತು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಬೆಂಗಳೂರು ಔಟ್ಲಾಡ್ ಇಂಡಿಯಾ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿಗಳಾದ ಸಿದ್ದಾರ್ಥ್ ಪಾಟೀಲ್, ಡಿ. ಶಾಮಾ ಇತರರು ಹಾಜರಿದ್ದರು.