ಕಡಿಮೆ ಮತದಾನದ ಪ್ರದೇಶದಲ್ಲಿ ಹೆಚ್ಚು ಜಾಗೃತಿ ಮೂಡಿಸಿ

| Published : Apr 24 2024, 02:23 AM IST

ಸಾರಾಂಶ

ಭಾರತೀಯ ಚುನಾವಣೆ ಆಯೋಗ ಸೂಚಿಸಿರುವ ನಿರ್ದೇಶನಗಳನ್ನು ಚಾಚುತಪ್ಪದೇ ನಿರ್ವಹಿಸಿ ಲೋಕಸಭೆ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ವಿಜಯಪುರ ಮೀಸಲು ಮತಕ್ಷೇತ್ರದ ಚುನಾವಣಾ ವೀಕ್ಷಕ ಡಾ.ರತನಕನ್ವರ್ ಗಂಧವಿಚರಣ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತೀಯ ಚುನಾವಣೆ ಆಯೋಗ ಸೂಚಿಸಿರುವ ನಿರ್ದೇಶನಗಳನ್ನು ಚಾಚುತಪ್ಪದೇ ನಿರ್ವಹಿಸಿ ಲೋಕಸಭೆ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ವಿಜಯಪುರ ಮೀಸಲು ಮತಕ್ಷೇತ್ರದ ಚುನಾವಣಾ ವೀಕ್ಷಕ ಡಾ.ರತನಕನ್ವರ್ ಗಂಧವಿಚರಣ ಹೇಳಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಚುನಾವಣಾ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಪ್ರದೇಶಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು. ಜಿಲ್ಲೆಯ ಮತದಾರ ಮುಕ್ತವಾಗಿ ಮತದಾನ ಮಾಡಲು ಶಾಂತಿಯುತವಾದ, ಸುವ್ಯವಸ್ಥಿತವಾದ ವಾತಾವರಣ ರೂಪಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮಸ್ಯೆಗಳು ಕಂಡು ಬಂದರೆ ಮೊದಲ ಆದ್ಯತೆಯ ಮೇರೆಗೆ ನಿವಾರಿಸಬೇಕು. ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಪೊಲೀಸ್ ವಿಕ್ಷಣಾಧಿಕಾರಿ ಎಂ.ಅರ್ಶಿ ಮಾತನಾಡಿ, ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳು ಕಾರ್ಯಕ್ಷಮತೆಯಿಂದ ಕರ್ತವ್ಯ ನಿರ್ವಹಿಸಬೇಕು. ಮತದಾನಕ್ಕೆ ಪ್ರಜೆಗಳ ಸಹಕಾರ ಅತೀ ಅವಶ್ಯಕವಿದ್ದು, ಅಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಕ್ರಮವಹಿಸಬೇಕು ಎಂದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 2085 ಮತಗಟ್ಟೆಗಳಿದ್ದು, 9,82,974 ಪುರುಷ, 9,57,906 ಮಹಿಳಾ, 210 ಇತರೆ ಮತದಾರರು ಸೇರಿದಂತೆ ಒಟ್ಟು 19,46,090 ಮತದಾರರು ಇದ್ದಾರೆ. ಇದರಲ್ಲಿ 21,803 ವಿಶೇಷ ಚೇತನ ಮತದಾರರು, 44,169 ಯುವ ಮತದಾರರು, 17,157 ಹಿರಿಯ(85 ವರ್ಷ ಮೇಲ್ಪಟ್ಟ) ಮತದಾರರು, 1,882 ಸೇವಾ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.---

ಬಾಕ್ಸ್‌

ನೋಡಿದೆ...ಮತದಾನ ಜಾಗೃತಿ ಅಂಗವಗಿ29ರಂದು ವಿದ್ಯಾರ್ಥಿಗಳಿಗೆ ರಸಪ್ರಶ್ನೆವಿಜಯಪುರ:ಲೋಕಸಭಾ ಚುನಾವಣೆಗೆ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾನ ಹೆಚ್ಚಿಸುವ ಸಲುವಾಗಿ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಮತದಾನದ ಜಾಗೃತಿ ಮೂಡಿಸಲು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮಹಾನಗರ ಪಾಲಿಕೆ ಸಹಯೋಗದಲ್ಲಿ ನೈತಿಕವಾಗಿ ಮತ್ತು ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಜಾಗೃತಿ ಕಾರ್ಯಕ್ರಮಕ್ಕೆ 10 ರಿಂದ 16 ಮತ್ತು 17 ರಿಂದ 23 ರ ವಯೋಮಾನದ ಆಸಕ್ತ ವಿದ್ಯಾರ್ಥಿಗಳಿಗೆ ಚುನಾವಣೆ ವಿಷಯದ ಕುರಿತು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 29ರಂದು ಬೆಳಗ್ಗೆ 10.30 ಗಂಟೆಗೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಏ.26ರ ಸಂಜೆ 5 ಗಂಟೆ ಒಳಗೆ ನಾಮಾಂಕನವನ್ನು ಪಾಲಿಕೆಯ ಆವಕ ವಿಭಾಗದಲ್ಲಿ ವಯಸ್ಸಿನ ದಾಖಲಾತಿಯೊಂದಿಗೆ ನೋಂದಾಯಿಸಲು ಕೋರಲಾಗಿದೆ.

ವಿಳಾಸ: ಆಯುಕ್ತರು, ಮಹಾನಗರ ಪಾಲಿಕೆ, ಬಾಗಲಕೋಟೆ ರಸ್ತೆ, ಜಲನಗರ-586109, ವಿಜಯಪುರ. ದೂರವಾಣಿ: 08352-278536, 222474 ಸಂಪರ್ಕಿಸಬಹುದಾಗಿದೆ.