ತುಂಬೆಯ ಅಪಾಯಕಾರಿ ತಿರುವಿನಲ್ಲೊಂದು ಕೃತಕ ಕೆರೆ ಸೃಷ್ಟಿ

| Published : Jun 26 2024, 12:44 AM IST

ತುಂಬೆಯ ಅಪಾಯಕಾರಿ ತಿರುವಿನಲ್ಲೊಂದು ಕೃತಕ ಕೆರೆ ಸೃಷ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಸಿಗುವ ತುಂಬೆಯ ಈ ತಿರುವಿನಲ್ಲಿರುವ ಈ ನೀರು ನಿಲ್ಲುವ ಸ್ಥಳ ಅಪಾಯವನ್ನು ಕೈಬೀಸಿ ಕರೆಯುವಂತಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಅದೊಂದು ಅಪಾಯಕಾರಿ ತಿರುವು, ಭಾರಿ ಮಳೆಗೆ ಇಂದು ಆ ತಿರುವಿನಲ್ಲಿಯೇ ನಿರ್ಮಾಣವಾಗಿದೆ ಒಂದು ಕೃತಕ ಕೆರೆ. ಹೌದು ಇದು ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಗೆ ಒಂದು ದಿಟ್ಟ ನಿದರ್ಶನ.

ಮಳೆಗಾಲದಲ್ಲಿ ಯಾವ ಅಪಾಯ ಹೇಗೆ ಬರುತ್ತದೆಯೋ ಗೊತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಸಿಗುವ ತುಂಬೆಯ ಈ ತಿರುವಿನಲ್ಲಿರುವ ಈ ನೀರು ನಿಲ್ಲುವ ಸ್ಥಳ ಅಪಾಯವನ್ನು ಕೈಬೀಸಿ ಕರೆಯುವಂತಿದೆ.

ಏನು ಕಾರಣ?: ರಸ್ತೆ ಬದಿಯ ಬಂಡೆ ಕಲ್ಲನ್ನು ತೆಗೆಯದೆ ನೀರು ಹಾದು ಹೋಗುವ ತೋಡು ನಿರ್ಮಿಸಿದ್ದು ಈ ಎಲ್ಲ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಈಗ ಒಂದು ಮಳೆ ಬಂದ ಕೂಡಲೇ, ರಾಷ್ಟ್ರೀಯ ಹೆದ್ದಾರಿ ರಸ್ತೆಯೇ ಕೆರೆಯಂತಾಗುತ್ತದೆ. ಒಂದು ಕಡೆ ನೀರು ಮತ್ತೊಂದು ಕಡೆ ತಿರುವು ಹಾಗಾಗಿ ಈ ತಿರುವು ತುಂಬಾ ಅಪಾಯಕಾರಿಯಾಗಿದೆ. ಕೆಲವೇ ದಿನಗಳ ಹಿಂದೆ ಈ ತಿರುವಿನಲ್ಲಿ ಗ್ಯಾಸ್ ಟ್ಯಾಂಕರ್‌ ಡಿವೈಡರ್‌ಗೆ ಡಿಕ್ಕಿ ಹೊಡೆದ ದುರ್ಘಟನೆ ನಡೆದಿದೆ. ಸದ್ಯಕ್ಕೆ ಯಾವುದೇ ಅಪಾಯವಾಗಲಿಲ್ಲ. ಆದರೆ ಮಳೆಗಾಲದಲ್ಲಿ ಗುಡ್ಡದ ಮೇಲಿಂದ ನೇರವಾಗಿ ಬರುವ ನೀರು ಹಾಗೂ ಸುತ್ತಲಿನ ಮಳೆಗಾಲದ ಮಳೆ ನೀರು ಈ ಬಂಡೆಕಲ್ಲಿನ ಮೇಲೆ ಮುಚ್ಚಿದ ತೋಡಿನ ಬಳಿ ಸೇರುತ್ತದೆ. ನೀರೇ ಹಾದು ಹೋಗಲು ಸ್ಥಳವಿಲ್ಲದ ಈ ತೋಡಿನೊಳಗೆ ಬಂದ ನೀರು ಇದೇ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲೇ ಶೇಖರಣೆಯಾಗುತ್ತದೆ. ಸ್ವಲ್ಪ ಇಳಿಜಾರು ರಸ್ತೆಯಾಗಿದ್ದು ವಾಹನಗಳು ಅತಿ ವೇಗವಾಗಿ ಬರುತ್ತಿರುತ್ತವೆ. ನಡೆದಾಡಲೂ ಜಾಗವಿಲ್ಲದ ಈ ತಿರುವಿನಲ್ಲಿ ಸಾರ್ವಜನಿಕರು ಈ ಕೆರೆಯನ್ನು ದಾಟುವುದೇ ದೊಡ್ಡ ಸಮಸ್ಯೆ. ಹತ್ತಿರದಲ್ಲೇ ತುಂಬೆ ಖಾಸಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿದ್ದು ನೂರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ಸಂಚರಿಸಬೇಕಾಗಿದ್ದು , ಸ್ಥಳೀಯ ಪುಟ್ಟ ಪುಟ್ಟ ಮಕ್ಕಳು ಈ ಸ್ಥಳದಲ್ಲಿ ಭಯದಿಂದಲೇ ನಡೆದಾಡುವ ಗತಿ ಬಂದಿದೆ.

ಹೆದ್ದಾರಿ ಪ್ರಾಧಿಕಾರವು ಸುಗಮ ವಾಹನ ಸಂಚಾರಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಅರ್ಧಂಬರ್ಧ ಕಾಮಗಾರಿ ಮಾಡಿ ವಾಹನ ಸವಾರರಿಗೂ ಸರಿಯಾಗಿ ಪ್ರಯಾಣಿಸಲೂ ಆಗದೆ ಸಾರ್ವಜನಿಕರಿಗೂ ಸಮಸ್ಯೆಯಾಗುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ.ತುಂಬೆ ತಿರುವು ಭಾರಿ ಅಪಾಯಕಾರಿ. ಅದಲ್ಲದೇ ಈ ಪ್ರದೇಶದಲ್ಲಿ ಮೀಟರ್ ಗಟ್ಟಲೆ ನೀರು ಶೇಖರಣೆಯಾಗಿ ಈ ರಸ್ತೆಯಲ್ಲಿ ಯಾರಿಗೂ ಸಂಚಾರ ಮಾಡಲಿಕ್ಕಾಗುವುದಿಲ್ಲ. ಬೇಸಿಗೆ ಕಾಲದಲ್ಲಿ ಈ ಸಮಸ್ಯೆ ಗೊತ್ತಾಗದಿಲ್ಲರೂ ಪ್ರತೀ ಮಳೆಗಾಲಗಳಲ್ಲಿ ಸಮಸ್ಯೆ ಇದ್ದದ್ದೇ

- ದಿನೇಶ್ ತುಂಬೆನೀರು ಹಾದು ಹೋಗುವ ತೋಡು ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಲ್ಲಿನ ಮೇಲೆ ಕಾಂಕ್ರೀಟ್ ಹಾಕಿ ನಿರ್ಮಾಣ ಮಾಡಿದರೆ ನೀರು ಹೋಗಲು ಸ್ಥಳವೇ ಇಲ್ಲ. ಅರ್ಧಂಬರ್ಧ ಕಾಮಗಾರಿಯ ಬಗ್ಗೆ ಆರಂಭದಲ್ಲೇ ಹೋರಾಟ ಮಾಡಿದರೂ ಯಾವ ಜನಪ್ರತಿನಿಧಿಯೂ ಇದಕ್ಕೆ ಸಹಕಾರ ನೀಡಲಿಲ್ಲ. ಈಗ ಎಲ್ಲರೂ ಅದನ್ನು ಅನುಭವಿಸಬೇಕಾಗುತ್ತದೆ

- ಪ್ರವೀಣ್ ಬಿ. ತುಂಬೆ, ಮಾಜಿ ಅಧ್ಯಕ್ಷರು ತುಂಬೆ ಗ್ರಾಮ ಪಂಚಾಯಿತಿ