ಸಮಾಜಸೇವಕರಿಂದ ವಾರಸುದಾರರಿಲ್ಲದ 3 ಶವಗಳ ಅಂತ್ಯಸಂಸ್ಕಾರ

| Published : May 11 2024, 12:02 AM IST

ಸಾರಾಂಶ

ಜಿಲ್ಲಾಸ್ಪತ್ರೆಯ ಜಿಲ್ಲಾಸರ್ಜನ್ ಅಶೋಕ್ ಎಚ್. ಮತ್ತು ನಗರ ಪೋಲಿಸ್ ಠಾಣಾಧಿಕಾರಿ ಪುನೀತ್ ಕುಮಾರ್ ಅನಾಥ ಶವಗಳ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಅಂತಿಮ ನಮನ ಸಮರ್ಪಿಸಿ ಮಾನವೀಯತೆ ಮೆರೆದಿರುವುದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಪುರುಷ ಅಪರಿಚಿತ ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ಗುರುವಾರ ನಡೆಸಲಾಯಿತು. ಇದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದ ತಂಡ ಪೊಲೀಸ್‌ ಇಲಾಖೆಗೆ ಸಹಕರಿಸಿರುವ 278ನೇ ವಾರಸುದಾರರಿಲ್ಲದ ಅಂತ್ಯಸಂಸ್ಕಾರವಾಗಿದೆ.

ಜಿಲ್ಲಾಸ್ಪತ್ರೆಯ ಜಿಲ್ಲಾಸರ್ಜನ್ ಅಶೋಕ್ ಎಚ್. ಮತ್ತು ನಗರ ಪೋಲಿಸ್ ಠಾಣಾಧಿಕಾರಿ ಪುನೀತ್ ಕುಮಾರ್ ಅನಾಥ ಶವಗಳ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಅಂತಿಮ ನಮನ ಸಮರ್ಪಿಸಿ ಮಾನವೀಯತೆ ಮೆರೆದಿರುವುದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾದ ಶವ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ರೋಗಿಗಳ ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿತ್ತು. ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ವಾರಸುದಾರರು ಬಾರದೆ ಇರುವುದರಿಂದ, ಕಾನೂನು ಪ್ರಕ್ರಿಯೆಗಳು ನಡೆಸಿದ ಬಳಿಕ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.

ನಗರ ಠಾಣೆಯ ಎಎಸ್ಐ ತಾರಾನಾಥ್, ವಿದ್ಯಾ ಕಾನೂನು ಪ್ರಕ್ರಿಯೆ ನಡೆಸಿದರು. ಸಾಮಾಜಿಕ ಕಾರ್ಯಕರ್ತರಾದ ವಿಕಾಸ್ ಶೆಟ್ಟಿ ಒಳಕಾಡು, ಪ್ರದೀಪ್ ಅಜ್ಜರಕಾಡು, ಸೋನಿ , ಫ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ, ಸಾಜಿ ಕುಮಾರ್ ನೆರವಾದರು.