ಸಾರಾಂಶ
ಮಾಡ್ರಹಳ್ಳಿ ಶ್ರೀ ನಿರ್ವಾಣೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮಾಡ್ರಹಳ್ಳಿ ಬಳಿಯ ಶ್ರೀ ನಿರ್ವಾಣೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಚ್ಚಿದರೆ ಕ್ರಿಮಿನಲ್ ಕೇಸು ದಾಖಲಿಸಬೇಕಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಮುಖ್ಯ ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.ಶಿಕ್ಷಣ ಇಲಾಖೆಯ ಸುತ್ತೋಲೆ ಪ್ರಕಾರ ಶಾಲೆ ಮುಚ್ಚಬೇಕಿದ್ದರೆ ೧ ವರ್ಷ ಮುಂದೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ೨೦೨೪ರ ಜ.೩ರ ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆ ಪ್ರಕಾರ ಈಗಾಗಲೇ ಅನುಮತಿ ಪಡೆದು ಶಾಲೆ ನಡೆಸುತ್ತಿರುವ ಆಡಳಿತ ಮಂಡಳಿ ಶಾಲೆಯಲ್ಲಿ ಮುಚ್ಚಲು ನಿರ್ಧರಿಸಿ ಠರಾವು ಮಾಡಿದ್ದಲ್ಲಿ ಒಂದು ಶೈಕ್ಷಣಿಕ ವರ್ಷದ ಮೊದಲೇ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ಹಾಗೂ ಇಲಾಖೆಗೆ ತಿಳಿಸಬೇಕು ಎಂದಿದೆ ಎಂದರು.ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಕಡ್ಡಾಯವಾಗಿರುತ್ತದೆ. ಈ ನಿಯಮ ಪಾಲಿಸದೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅಥವಾ ಮಧ್ಯಂತರರಲ್ಲಿ ಶಾಲೆ ಮುಚ್ಚದಂತೆ ಕ್ರಮ ವಹಿಸಬೇಕು ಎಂದರು. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯಿದೆ ೨೦೦೯ ಮತ್ತು ನಿಯಮ ೨೦೧೨ರ ಪ್ರಕಾರ ಅಗತ್ಯ ಕ್ರಮ ವಹಿಸಲಾಗುವುದು.ಮಕ್ಕಳ ಹಕ್ಕುಗಳ ಆಯೋಗದ ನಿಯಮಗಳು ಸಹ ಮಕ್ಕಳ ಪರವಾಗಿದೆ ಎಂದು ಸಭೆಯಲ್ಲಿ ತಿಳಿದಿದೆ. ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಯ ಬಗ್ಗೆ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರೂ ಯಾರು ಸಭೆಗೆ ಬಂದಿಲ್ಲ. ಪ್ರಸಕ್ತ ಸಾಲಿಗೆ ಶಾಲೆಯ ನವೀಕರಣಕ್ಕೆ ಮಾನ್ಯತೆಯನ್ನು ಪಡೆಯಲು ಒಂದು ವರ್ಷಕ್ಕೆ ತುರ್ತಾಗಿ ಆನ್ ಲೈನ್ ಮೂಲಕ ಅಥವಾ ಇಲಾಖೆಗೆ ಖುದ್ದು ಅರ್ಜಿ ಸಲ್ಲಿಸಬೇಕು ಎಂದರು.
ನಾಳೆಯಿಂದ ಶಾಲೆಯ ಕಚೇರಿ ತೆರೆದು, ಪೋಷಕರು ಹಾಗೂ ಮಕ್ಕಳು ಬಂದಾಗ ಮುಖ್ಯ ಶಿಕ್ಷಕರು ಹಾಜರಿದ್ದು ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ವ್ಯಾಸಂಗ ಪ್ರಮಾಣ ಪತ್ರ ನೀಡಬೇಕು. ಕಡ್ಡಾಯವಾಗಿ ಕಚೇರಿ ತೆರೆದು ಕೆಲಸ ನಿರ್ವಹಿಸಬೇಕು. ಬರುವ ಮೇ ೨೬ಕ್ಕೆ ಶಾಲೆಯನ್ನು ಆರಂಭಿಸಬೇಕು ಎಂದು ಸಾರ್ವಜನಿಕರಿಗೆ ಹಾಗೂ ಶಿಕ್ಷಣ ಲಾಖೆ ಮಾಹಿತಿ ನೀಡಬೇಕು ಎಂದು ಪ್ರಚಾರ ಮಾಡಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ಹಾಗೂ ಕಾವಲು ಪಡೆಯ ಎ.ಅಬ್ದುಲ್ ಮಾಲೀಕ್ ಸೇರಿದಂತೆ ಶಾಲೆಯ ಪೋಷಕರು ಹಾಗು ವಿದ್ಯಾರ್ಥಿಗಳಿದ್ದರು.