ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಬರಗಾಲದಿಂದ ಬೆಳೆಹಾನಿಗೊಳಗಾದ 78,839 ರೈತರ ಖಾತೆಗೆ 34,94,97,157 ರು. ಹಣವನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದದ ಮೂಲಕ ತಹಸೀಲ್ದಾರ್ಗಳೊಂದಿಗೆ ಮಾತನಾಡಿ ಬರದ ಹಿನ್ನೆಲೆ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರದ ಹಣ ಜಮೆ ಮಾಡಲಾಗಿದೆ. ಬಹಳಷ್ಟು ರೈತರು ತಮಗೆ ಹಣ ಬಂದಿರುವುದಿಲ್ಲ ಎಂದು ಮೌಖಿಕವಾಗಿ ಕರೆ ಮಾಡಿ ದೂರು ಸಲ್ಲಿಸುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಿ ರೈತರ ಸಮಸ್ಯೆ ಪರಿಹರಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯ ಕೊರತೆ ಹಿನ್ನೆಲೆ ಬೆಳೆ ನಷ್ಟ ಕುರಿತಂತೆ ಸಮೀಕ್ಷೆ ನಡೆಸಿ ಸುಮಾರು 79,839 ರೈತರ 39812 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವುದಾಗಿ ವರದಿ ಸಲ್ಲಿಸಲಾಗಿತ್ತು. ಎಸ್.ಡಿ.ಆರ್.ಎಫ್ ನಿಯಮದ ಅನುಸಾರ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ರೈತರ ಖಾತೆಗೆ ಜಮೆ ಮಾಡಿರುವ ಪರಿಹಾರ ಹಣ ಹಾಗೂ ಫಲಾನುಭವಿಗಳ ವಿವರವನ್ನು ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿ ಪ್ರಕಟಿಸುವಂತೆ ಹಾಗೂ ಬೆಳೆಹಾನಿ ರೈತರ ಖಾತೆಗೆ ಜಮೆ ಮಾಡಿರುವ ವಿವರವನ್ನು ಗ್ರಾಮ ಪಂಚಾಯ್ತಿಗಳ ವೆಬ್ ಸೈಟ್ಗಳಲ್ಲೂ ಸಹ ಪ್ರಕಟಿಸಲಾಗುವುದು ಎಂದರು.ರೈತರ ಜಮೀನಿನ ಸರ್ವೆ ಸಂಖ್ಯೆ, ರೈತರ ಹೆಸರು ಮೊಬೈಲ್ ಸಂಖ್ಯೆ ಹಾಗೂ ಇನ್ನಿತರೆ ವಿವರಗಳು ಸಹಾಯವಾಣಿಯಲ್ಲಿ ಲಭ್ಯವಿರಬೇಕು. ರೈತರು ಸಂಪರ್ಕಿಸಿದ ತಕ್ಷಣ ಅವರಿಗೆ ಮಂಜೂರಾಗಿರುವ ಪರಿಹಾರದ ವಿವರ, ಮಂಜೂರಾಗಿಲ್ಲದಿದ್ದರೆ ನಿಖರ ಮಾಹಿತಿ ನೀಡಬೇಕು ಪರಿಹಾರ ಬಂದಿಲ್ಲ ಎಂದ ಕೂಡಲೇ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಎಂದು ಅವರನ್ನು ಅಲೆದಾಡುವಂತೆ ಮಾಡಬೇಡಿದೆಂದು ಸೂಚಿಸಿದರು.ಪರಿಹಾರ ಹಣ ಪಾವತಿಗೆ ಸಂಬಂಧಿಸಿದಂತೆ ಸುಮಾರು 1000 ರೈತರಿಗೆ ಆಧಾರ್ ಬ್ಯಾಂಕ್ ಖಾತೆಗೆ ಜೋಡಣೆಯಾಗದೆ, ಖಾತೆ ನಿಷ್ಕ್ರೀಯ ಹಾಗೂ ಸರಿಯಾದ ಐ.ಎಫ್.ಎಸ್.ಸಿ ಕೋಡ್ ಇಲ್ಲ ಎಂದು ಪಾವತಿಯಾಗಿರುವುದಿಲ್ಲ. ಇವುಗಳನ್ನು 24 ಗಂಟೆಯೊಳಗೆ ತಹಸೀಲ್ದಾರ್ ವಿಶೇಷ ಕಾಳಜಿ ವಹಿಸಿ ಪರಿಹಾರ ಹಣ ಪಾವತಿಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದಾರೆ ಕಡ್ಡಾಯವಾಗಿ ಟ್ಯಾಂಕರ್ ಮ್ಯಾನೆಜ್ಮೆಂಟ್ ಆ್ಯಪ್ನ ಮೂಲಕ ನಿರ್ವಹಿಸಬೇಕು. ಇಲ್ಲಾವದಲ್ಲಿ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಕೆ.ಆರ್.ಪೇಟೆ ತಾಲೂಕಿನಲ್ಲಿ 17298 ರೈತರ ಒಟ್ಟು 9322.06 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 7,70,60,982 ರು., ಮದ್ದೂರಿನಲ್ಲಿ 12499 ರೈತರ ಒಟ್ಟು 3050.20 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 3,62,56,911 ರು.,
ಮಳವಳ್ಳಿ ಯಲ್ಲಿ11599 ರೈತರ ಒಟ್ಟು 4240.50 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 4,63,86,485 ರು., ಮಂಡ್ಯ ತಾಲೂಕಿನಲ್ಲಿ 4408 ರೈತರ ಒಟ್ಟು 2078.04 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 1,74,35,984 ರು., ನಾಗಮಂಗಲ ತಾಲೂಕಿನಲ್ಲಿ 28926 ರೈತರ ಒಟ್ಟು 18646.80 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 15,15,74,633 ರು.,ಪಾಂಡವಪುರ ತಾಲೂಕಿನಲ್ಲಿ 4700 ರೈತರ ಒಟ್ಟು 2323.86 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 1,94,82,867 ರು., ಶ್ರೀರಂಗಪಟ್ಟಣ ತಾಲೂಕಿನಲ್ಲಿ 409 ರೈತರ ಒಟ್ಟು 150.66 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 12,99,295 ರು. ಪರಿಹಾರ ಹಣ ಪಾವತಿಸಲಾಗಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಉಪವಿಭಾಗಾಧಿಕಾರಿ ಮಹೇಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ಜಂಟಿ ಕೃಷಿ ನಿರ್ದೇಶಕ ಅಶೋಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಉಪಸ್ಥಿತರಿದ್ದರು.