ಸಾರಾಂಶ
ಸೂಕ್ತ ಕ್ರಮಕೈಗೊಳ್ಳುವಂತೆ ರೈತರ ಒತ್ತಾಯ
ಕನ್ನಡಪ್ರಭ ವಾರ್ತೆ ಹರಪನಹಳ್ಳಿತಾಲೂಕಿನ ಜಾಜಿಕಲ್ ಗುಡ್ಡದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬಾವಿಹಳ್ಳಿ, ಕೊಂಗನಹೊಸೂರು, ಕಣಿವಿಹಳ್ಳಿ ಗ್ರಾಮದ ಜಮೀನುಗಳಿಗೆ ಕಳೆದ ಹಲವು ದಿನಗಳಿಂದ ಕಾಡು ಹಂದಿಗಳು ನುಗ್ಗಿ ಬೆಳೆ ನಾಶ ಪಡಿಸುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.
ಬಾವಿಹಳ್ಳಿ ಗ್ರಾಮದ ಪೂಜಾರ್ ಬಸಪ್ಪ ಹಾಗೂ ನೆಲ್ಕುದ್ರಿ ಬಸವರಾಜ್ ಎನ್ನುವ ರೈತರ ಜಮೀನುಗಳಿಗೆ ಗುರುವಾರ ಬೆಳಗಿನ ಜಾವ ಕಾಡು ಹಂದಿಗಳು ನುಗ್ಗಿ ಅಪಾರ ಪ್ರಮಾಣದ ಮೆಕ್ಕೆ ಜೋಳದ ಬೆಳೆ ಹಾನಿ ಮಾಡಿವೆ. ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಕ್ರಮ ವಹಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸದೆ ನಿರ್ಲ್ಯಕ್ಷ ವಹಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ ವರ್ಷದಲ್ಲಿ ಸುತ್ತಮುತ್ತಲಿನ ನೂರಾರು ರೈತರ ಜಮೀನುಗಳಿಗೆ ಕಾಡು ಹಂದಿ ನುಗ್ಗಿ ಬೆಳೆಗಳು ನಾಶವಾದ ಬಗ್ಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇಲಾಖೆಯಲ್ಲಿ ಹಣ ಮಂಜೂರಾಗದ ಕಾರಣ ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಪರಿಹಾರ ಬಂದಿದೆ. ಕಾಡಿನಿಂದ ಪ್ರಾಣಿಗಳು ಹೊರಬರದಂತೆ ಸೂಕ್ತ ಕ್ರಮ ವಹಿಸಲು ಪ್ರತಿ ವರ್ಷ ಸೂಚಿಸಿದರು ಅಧಿಕಾರಿಗಳು ರೈತರ ಮಾತನ್ನು ಆಲಿಸುತ್ತಿಲ್ಲ. ಇದಕ್ಕೆ ಪರಿಹಾರವನ್ನೂ ಒದಗಿಸುತ್ತಿಲ್ಲವೆಂದು ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.ಕಾಡು ಸುತ್ತ ತಂತಿ ಬೇಲಿ ಅಳವಡಿಕೆ ಮಾಡಿದ್ದು, ಹಂದಿಗಳು ನುಸುಳಿಕೊಂಡು ಬಂದು ರೈತರ ಜಮೀನುಗಳಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಬೆಳೆ ನಾಶವಾದ ಜಮೀನುಗಳಿಗೆ ಭೇಟಿ ನೀಡಿದ್ದೇವೆ. ಎಷ್ಟು ಬೆಳೆ ಹಾನಿಯಾಗಿದೆಯೊ ಅದಕ್ಕೆ ಪರಿಹಾರ ಒದಗಿಸಲು ಅರ್ಜಿ ಸ್ವೀಕರಿಸುತ್ತೇವೆ. ಆದರೆ ಹಣ ಯಾವಾಗ ಅವರಿಗೆ ಬರುತ್ತದೆ ಎಂಬುದು ನಮಗೆ ಗೊತ್ತಿಲ್ಲ, ಇಲಾಖೆಯಲ್ಲಿ ಹಣವಿಲ್ಲ ಎಂದು ಚಿಗಟೇರಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.