ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಶಾಸಕರನ್ನು ಖರೀದಿ ಮಾಡಿರಲಿಲ್ಲ. ಸರ್ಕಾರದ ಆಡಳಿತ ಮೆಚ್ಚಿ ವಿಪಕ್ಷದ ಶಾಸಕರೇ ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಬಿಜೆಪಿ ನಾಯಕರ ಆರೋಪವನ್ನು ತಳ್ಳಿ ಹಾಕಿದರು.ಭುಜವಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದವರು ದೋಸ್ತಿ ಶಾಸಕರನ್ನು ಖರೀದಿ ಮಾಡಿದ್ದಾರೆ ಎಂದು ಹೇಳಲು ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ನಮ್ಮದು ಮಹಾ ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಶಾಸಕರನ್ನು ಯಾರು ಖರೀದಿಯಾಗುತ್ತಾರೆ. ನಾವು ಯಾವುದೇ ಶಾಸಕರನ್ನು ಹೋಗಿ ವೈಯಕ್ತಿಕವಾಗಿ ಭೇಟಿ ಮಾಡಿ ಮತಯಾಚಿಸಿಲ್ಲ. ಹಣ ಅಥವಾ ಅಧಿಕಾರದ ಆಮಿಷ ನೀಡಿಲ್ಲ. ಗೌಪ್ಯ ಮತದಾನದ ಮುಖಾಂತರ ಚುನಾವಣೆ ನಡೆದಿದೆ. ಬಿಜೆಪಿ- ಜೆಡಿಎಸ್ ಎರಡು ಪಕ್ಷಗಳ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದರು.ಬಿಜೆಪಿ ನಾಯಕರ ಬಗ್ಗೆ ಶಾಸಕರಿಗೆ ಸಾಕಷ್ಟ ಅಸಮಾಧಾನವಿದೆ. ಪಕ್ಷದ ಶಾಸಕರ ಬಗ್ಗೆ ಕೆಟ್ಟ ಪದ ಬಳಸುವುದು ಬಿಜೆಪಿ- ಜೆಡಿಎಸ್ ನಾಯಕರ ಹುಟ್ಟುಗುಣ. ಅಡ್ಡ ಮತದಾನ ಮಾಡಿದ ಶಾಸಕರನ್ನು ಮೀರ್ ಸಾದಿಕ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕೆ ಕುರಿತು ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬ ಮಾತು ಅನ್ವಯಿಸುತ್ತದೆ ಎಂದರು.
ಹೊಲ, ಗದ್ದೆಗಳ ರಸ್ತೆಗಳ ಅಭಿವೃದ್ಧಿಗೆ ಕ್ರಮ:
ಮದ್ದೂರು ಕ್ಷೇತ್ರದಲ್ಲಿ ನಾನು ಶಾಸಕನರಾದ ನಂತರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲು ಹೊಲ ಗದ್ದೆಗಳಿಗೆ ತೆರಳುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಸಾಕಷ್ಟು ಅನುದಾನ ತಂದು ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹೊಲ ಗದ್ದೆಗಳಿಗೆ ತೆರಳುವ ರೈತರ ಅನೂಕುಲಕ್ಕಾಗಿ ರಸ್ತೆಗಳ ಅಭಿವೃದ್ಧಿ ಕ್ರಮ ವಹಿಸುವಂತೆ ಎಂಜಿನಿಯರ್ಗಳಿಗೆ ಸೂಚಿಸಿದ್ದೇನೆ ಎಂದರು.
ವಿದ್ಯುತ್ ಖಾಸಗೀಕರಣ ಸಂಬಂಧ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆಯನ್ನು ಸಿಎಂ ಶೀಘ್ರ ಬಗೆಹರಿಸುತ್ತಾರೆ. ಕೇವಲ 15 ದಿನಗಳ ಹಿಂದೆಯಷ್ಟೇ ತಹಸೀಲ್ದಾರ್ ವರ್ಗಾವಣೆಯಾಗಿದ್ದಾರೆ. ಈಗಷ್ಟೆ ಮುಖ್ಯಮಂತ್ರಿಗಳು ಹಾಗೂ ಮಂತ್ರಿ ಮಂಡಲ ಬದಲಾವಣೆಯಾಗಿದೆ ಇನ್ನೂ ಒಂದು ವಾರದಲ್ಲಿ ಹೊಸ ತಹಸೀಲ್ದಾರ್ ಬರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.ಭುಜವಳ್ಳಿ ಅಲ್ಲದೇ, ಹರಳಹಳ್ಳಿ, ಕಡಿಲುವಾಗಿಲು, ಲಕ್ಷ್ಮೇಗೌಡನದೊಡ್ಡಿ, ಸಬ್ಬನಹಳ್ಳಿ, ಕಾಡುಕೋತ್ತನಹಳ್ಳಿ ಹಾಗೂ ಕಪರೆಕೊಪ್ಪಲು ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸುಮಾರು 2 ಕೋಟಿಗೂ ಅಧಿಕ ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮದ್ದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೇಶ್, ಕೆ.ಸಿ.ಮಹದೇವು, ಗೌಡಪ್ಪ, ಸ್ವಾಮಣ್ಣ, ದೇವರಾಜು, ಜಯರಾಜು, ಶಿವರುದ್ರಸ್ವಾಮಿ, ಚಂದ್ರು, ಜಯಕುಮಾರ್, ಪಾಪಣ್ಣ ಮತ್ತಿತರರು ಇದ್ದರು.