ಸಾರಾಂಶ
ಹನೂರು ಮಲೆಮಹದೇಶ್ವರ ಬೆಟ್ಟದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಹರಿದು ಬಂದ ಭಕ್ತ ಸಾಗರ.
ಕನ್ನಡಪ್ರಭ ವಾರ್ತೆ ಹನೂರು
ಹನೂರು ತಾಲೂಕಿನ ಮಲೆಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಸ್ವಾಮಿಗೆ ಬೆಳಗಿನ ಜಾವ ವಿಶೇಷ ಅಭಿಷೇಕ, ದೀಪದ ಸೇವೆ, ಎಣ್ಣೆ ಮಜ್ಜನ ಸೇವೆ ಹಾಗೂ ಆಷಾಢ ಅಮಾವಾಸ್ಯೆಯ ಪೂಜಾ ಕಾರ್ಯಕ್ರಮಗಳು ಜರುಗಿತು.ದೇವಾಲಯದಲ್ಲಿ ವಿಶೇಷ ಹೂವಿನ ಹಾಗೂ ಜೋಳದ ತೆನೆಗಳನ್ನು ಸಹ ಅಲಂಕಾರಕ್ಕೆ ಬಳಸಿ ನೋಡುಗರ ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಲಾಗಿತ್ತು. ಆಷಾಢ ಮಾಸ ಪ್ರಾರಂಭ:
ಮಣ್ಣೆತ್ತಿನ ಆಷಾಢ ಅಮಾವಾಸ್ಯೆ ಪ್ರಯುಕ್ತ ಮಾದೇಶ್ವರನ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಅಮಾವಾಸ್ಯೆ ಪೂಜೆಗೆ ಬಂದು ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಿಗೆ ಪೂಜೆ ಸಲ್ಲಿಸಿ, ಹರಕೆ ಕಾಣಿಕೆಗಳನ್ನು ಸಲ್ಲಿಸುವ ಮೂಲಕ ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದು ಭಕ್ತಾದಿಗಳು ಪುನೀತರಾದರು.ವಿಶೇಷ ಉತ್ಸವ:ಮಲೆಮಾದೇಶ್ವರನ ಬೆಟ್ಟಕ್ಕೆ ಬರುವ ಭಕ್ತಾದಿಗಳು ಹರಕೆ ತೀರಿಸುವ ನಿಟ್ಟಿನಲ್ಲಿ ಮಾದೇಶ್ವರನ ಬೆಟ್ಟದಲ್ಲಿ ನಡೆಯುವ ಬೆಳ್ಳಿ ರಥೋತ್ಸವ ಹಾಗೂ ಮಲೆ ಮಾದೇಶ್ವರನ ಉತ್ಸವ ರುದ್ರಾಕ್ಷಿ ಮಂಟಪೋತ್ಸವ, ದೂಪದ ಸೇವೆ, ಉರುಳು ಸೇವೆ, ಮುಡಿಸೇವೆ ಹಾಗೂ ಭಕ್ತಾದಿಗಳಿಂದ ಇನ್ನಿತರ ಸೇವೆಗಳು ಧಾರ್ಮಿಕವಾಗಿ ನಡೆಯಿತು.ಮಹಿಳಾ ಭಕ್ತಸಾಗರ:
ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಜೊತೆಗೆ ಎಲ್ಲಿ ನೋಡಿದರೂ ಮಹಿಳಾ ಭಕ್ತರು ಹೆಚ್ಚಾಗಿ ಮಾದೇಶ್ವರನ ಬೆಟ್ಟದಲ್ಲಿ ಕಂಡುಬಂದರು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ರಘು ಸ್ವತಃ ತಾವೇ ಭಕ್ತಾದಿಗಳಿಗೆ ಮಧ್ಯಾಹ್ನದ ಭೋಜನ ಬಡಿಸುವ ಮೂಲಕ ಭಕ್ತಾದಿಗಳ ಗಮನ ಸೆಳೆದರು. ಭಕ್ತಾದಿಗಳಿಗೆ ಬಿಸಿಬೇಳೆ ಬಾತ್, ಸಿಹಿ ಪೊಂಗಲ್, ಪುಳಿಯೋಗರೆ, ಚಿತ್ರಾನ್ನ, ಮಧ್ಯಾಹ್ನಕ್ಕೆ ವಿಶೇಷವಾಗಿ ಮಜ್ಜಿಗೆ ಹುಳಿ, ಟೊಮೇಟೊ ಬಾತ್ ಅನ್ನ ಸಾಂಬಾರ್ ಬೆಲ್ಲದ ಪಾಯಸ ರಸಂ ಮಜ್ಜಿಗೆ ವಿಶೇಷ ದಾಸೋಹ ಕಲ್ಪಿಸುವ ಮೂಲಕ ವ್ಯವಸ್ಥೆ ಕಲ್ಪಿಸಿದ್ದರು.ಮಲೆಮಹದೇಶ್ವರ ಬೆಟ್ಟದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತಾದಿಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಪ್ರತಿ ಹಂತದಲ್ಲೂ ಕ್ರಮ ವಹಿಸಿದೆ. ಅಮಾವಾಸ್ಯೆಗೆ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ವಿಶೇಷ ಕೌಂಟರ್ಗಳಲ್ಲಿ ಮಾದಪ್ಪನ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. -ಎ.ಇ.ರಘು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ, ಮಲೆಮಾದೇಶ್ವರ ಬೆಟ್ಟ.