ಸಾರಾಂಶ
ಕೊಪ್ಪಳ(ಯಲಬುರ್ಗಾ):
ಪ್ರಸ್ತುತ ಕಾಲಘಟ್ಟದಲ್ಲಿ ದೇಶದಲ್ಲಿನ ಪ್ರಭುತ್ವ ಪ್ರಶ್ನಿಸುವವರನ್ನು ದಮನ ಮಾಡುವ ಆತಂಕಕಾರಿ ಬೆಳವಣಿಗೆ ಆಗುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.ಯಲಬುರ್ಗಾ ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಸಭಾಭವನದಲ್ಲಿ ಆರ್. ಸಂಕನೂರು ಎಜುಕೇಶನ್ ಫೌಂಡೇಶನ್ ರೂರಲ್ ಡೆವಲಪಮೆಂಟ್ ಟ್ರಸ್ಟ್ ಹಾಗೂ ರಾಜ್ ಪ್ರಕಾಶನದ ವತಿಯಿಂದ ಯುವ ಸಾಹಿತಿ ಎಂ.ಡಿ. ಅಲಿರಾಜರವರ “ಕಾರ್ಮೋಡ” ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ರಾಷ್ಟ್ರದಲ್ಲಿ ಲೇಖಕರು, ಸಾಹಿತಿಗಳು, ಬರವಣಿಗೆಕಾರರನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಕೆಲವೆಡೆ ಲೇಖಕರ, ಬರವಣಿಗೆಕಾರರ ಮೇಲೆ ದೂರು ಸಹ ದಾಖಲಾಗಿದೆ. ಇನ್ನಾದರೂ ಜನ ಸಾಮಾನ್ಯರು ಆಳುವವರನ್ನು ಪ್ರಶ್ನಿಸುವ ಪ್ರಕ್ರಿಯೆ ಪ್ರಾರಂಭಿಸಬೇಕು. ಸಾಹಿತಿಗಳಿಗೆ, ಲೇಖಕರಿಗೆ, ಬರವಣಿಕಾರರಿಗೆ ಮುಕ್ತ ಸ್ವಾಂತತ್ರ್ಯ ಅವಶ್ಯವಿದೆ ಎಂದರು.ಕೊಪ್ಪಳ ವಿವಿ ಕುಲಪತಿ ಡಾ. ಬಿ.ಕೆ. ರವಿ ಮಾತನಾಡಿ, ಶೋಷಿತ ಜನಾಂಗದವರು ಸ್ವಾತಂತ್ರ್ಯ ಸಿಕ್ಕು ಐದಾರು ದಶಕಗಳು ಉರುಳಿದರು ಸಹ ಇಂದಿಗೂ ಸಹ ಇವರು ವ್ಯವಸ್ಥೆಯ ವಿರುದ್ಧ ಪ್ರಶ್ನಿಸುವ ಹಕ್ಕು ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟದೂರು ಮಾತನಾಡಿ, ಇಂದು ಪ್ರಜೆಗಳನ್ನು ನಮ್ಮನ್ನಾಳುವವರು ಚುನಾವಣೆಗೆ ಬಂದಾಗ ಕೊಂಡುಕೊಳ್ಳುತ್ತಾರೆ. ಹೀಗಾಗಿ ಆಳುವ ವರ್ಗ ತನ್ನದೇ ದೌಲತ್ತಿನಲ್ಲಿ ಮೇರೆಯುತ್ತಿರುವುದು ವಿಪರ್ಯಾಸ ಎಂದರು.ಮಾಜಿ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಉಪನ್ಯಾಸಕಿ ಕೆ.ಎನ್. ರೇಣುಕಾ, ಸಾಹಿತ್ಯ ಕ್ಷೇತ್ರದ ಮುನ್ನವ್ವರ್ ಜೋಗಿಬೆಟ್ಟು, ಸಾಮಾಜಿಕ ಕ್ಷೇತ್ರದಲ್ಲಿ ಸಿಂಧನೂರಿನ ಕಾರುಣ್ಯ ನೆಲೆ, ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ವ್ಯವಸ್ಥಾಪಕ ಚನ್ನಬಸಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಕವಿಗೋಷ್ಠಿಯಲ್ಲಿ ತಾರಾಸಿಂಗ ವಿಜಯನಗರ, ಲಕ್ಷ್ಮೀದೇವಿ ಬೂದಗುಂಪಿ, ಡಾ. ಆದರ್ಶ ಬೀದರ, ಸ. ಶರಣಪ್ಪ ಪಾಟೀಲ್ ಕರಮುಡಿ ಕವನ ವಾಚಿಸಿದರು.ಸಾಹಿತಿ ಅಕ್ಬರ ಖಾಲಿಮಿರ್ಚಿ, ಸಿರಾಜ್ ಬಿಸರಳ್ಳಿ, ಕೃತಿಯ ಲೇಖಕ ಎಂ.ಡಿ. ಅಲಿರಾಜ, ಉಪನ್ಯಾಸಕ ರಾಜಶೇಖರ ಕಲಕಬಂಡಿ, ಭೀಮಪ್ಪ ಹವಳಿ, ದೊಡ್ಡಬಸಪ್ಪ ಹಕಾರಿ, ಇಮಾಮಸಾಬ ಸಂಕನೂರು, ಶರೀಪಸಾಬ್ ಕೊತಬಾಳ, ಮುಖ್ಯ ಶಿಕ್ಷಕಿ ಸವಿತಾ ಆರ್. ಓಜನಹಳ್ಳಿ ಇದ್ದರು.