ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆರ್ಎಸ್ಎಸ್ ಬಗ್ಗೆ ಮಾತನಾಡುವುದನ್ನು ಬಿಟ್ಟು ಮೊದಲು ಭವಿಷ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವವವನ್ನು ಉಳಿಸಿಕೊಳ್ಳುವುದರತ್ತ ತಲೆ ಕೆಡಿಸಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಸಲಹೆ ನೀಡಿದ್ದಾರೆ.ಆರ್ಎಸ್ಎಸ್ ಸಂಘಟನೆ ಒಂದು ದೊಡ್ಡ ಆಲದ ಮರ. ಈ ಮರದ ಬೇರು ಸಮೇತ ಕಿತ್ತೊಗೆಯುತ್ತೇವೆಂದು ಶತಮಾನಗಳಿಂದಲೂ ವಿಕೃತ ಮನಸ್ಸಿನ ರಾಜಕೀಯ ಶಕ್ತಿಗಳು ವ್ಯರ್ಥ ಪ್ರಲಾಪ ಮಾಡುತ್ತಲೇ ಇವೆ. ಆದರೆ, ಆರ್ಎಸ್ಎಸ್ನ ರಂಬೆ-ಕೊಂಬೆಗಳನ್ನೂ ಕೊಂಕಿಸಲಾಗದವರ ಸೊಲ್ಲಡಗಿಸಿ ದಿಕ್ಕು ಕಾಣದಂತೆ ಮಾಯವಾಗಿವೆ. ಈ ಸಾಲಿಗೆ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದಲೇ ರಾಷ್ಟ್ರದ ರಾಜಕೀಯ ಭೂಪಟದಲ್ಲಿ ಭೂತಗನ್ನಡಿ ಹಿಡಿದು ಹುಡುಕುವ ದಯನೀಯ ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿದೆ, ಮೊದಲು ನಿಮ್ಮ ಅಸ್ಥಿತ್ವ ಉಳಿಸಿಕೊಳ್ಳಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.
ಆರ್ಎಸ್ಎಸ್ ನಿಷೇಧಿಸಬೇಕೆಂದರೆ ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅವರು ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ, ಆರ್ಎಸ್ಎಸ್ ನಿಷೇಧ ಆಗುವುದಿಲ್ಲ. ಇದು ಪ್ರಿಯಾಂಕ ಖರ್ಗೆ ಹಗಲು ಕನಸು ಎಂದು ಲೇವಡಿಗೈದರು.ವಿಧಾನಸೌಧದ ಮೊಗಸಾಲೆಯಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಅಂದಿನ ದಿನದಲ್ಲಿ ಸಮರ್ಥನೆ ಮಾಡಿಕೊಂಡ ಕಾಂಗ್ರೆಸ್ಸಿಗರು, ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಇಟ್ಟವರನ್ನು ಜೈಲಿಗಟ್ಟುವುದರಲ್ಲಿ ವಿಫಲವಾದ ಕಾಂಗ್ರೆಸ್ ಸರ್ಕಾರ, ಹಿಂದೆ ಪಿಎಫ್ಐ ಮೇಲಿನ ೧೭೫ ಪ್ರಕರಣವನ್ನು ಹಿಂಪಡೆದು ೧೬೦೦ ಜನರನ್ನು ಬಿಡುಗಡೆಗೊಳಿಸಿದ್ದ ಕಾಂಗ್ರೆಸ್ಸಿಗರಿಗೆ ಅರ್ಎಸ್ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದ್ದಾರೆ.