ಸಾರಾಂಶ
ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದ ಸಮಯದಲ್ಲಿ ಹೋರಾಟ ಕಿಚ್ಚು ಹೆಚ್ಚಿಸಿದ ದೇಶಾಭಿಮಾನಿ ವೀರ ಸಾವರ್ಕರ್ ಆಗಿದ್ದಾರೆ.
ವೀರ ಸಾವರ್ಕರ 141ನೇ ಜಯಂತಿ ಕಾರ್ಯಕ್ರಮದಲ್ಲಿ ವಾಗ್ಮಿ ಹಾರಿಕಾ ಮಂಜುನಾಥಕನ್ನಡಪ್ರಭ ವಾರ್ತೆ ಗಂಗಾವತಿ
ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದ ಸಮಯದಲ್ಲಿ ಹೋರಾಟ ಕಿಚ್ಚು ಹೆಚ್ಚಿಸಿದ ದೇಶಾಭಿಮಾನಿ ವೀರ ಸಾವರ್ಕರ್ ಆಗಿದ್ದಾರೆ. ಅವರಲ್ಲಿ ಇದ್ದಂತಹ ದೇಶಾಭಿಮಾನವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.ನಗರದ ವೀರ ಸಾವರ್ಕರ್ ಮಾರ್ಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೀರ ಸಾವರ್ಕರ್ ಅವರು 141ನೇ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವ್ಯಾಪಾರಕ್ಕಾಗಿ ಬಂದಿರುವ ಬ್ರಿಟಿಷರು ಇಲ್ಲಿನ ಸಂಪತ್ತು ಕಂಡು ದೇಶವನ್ನು ಆಳಲು ಆರಂಭ ಮಾಡಿದರು. ಹಲವು ವರ್ಷಗಳ ಕಾಲ ಆಡಳಿತ ನಡೆಸಿದ ಬ್ರಿಟಿಷರ ವಿರುದ್ಧ ಸಾಕಷ್ಟು ಜನರು ಹೋರಾಟ ಮಾಡಿ, ಪ್ರಾಣ ಕಳೆದುಕೊಂಡಿದ್ದಾರೆ. ಅವರ ಸಾಲಿನಲ್ಲಿ ವೀರ ಸಾವರ್ಕರ್ ಒಬ್ಬರು. ಆದರೆ ಸದ್ಯ ಪರಿಸ್ಥಿತಿಯಲ್ಲಿ ಕೆಲವರು ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಬ್ರಿಟಿಷರ ಕೈಗೊಂಬೆ ಎಂಬುದಲ್ಲದೇ ವಿವಿಧ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ತಿಳಿಯದೆ ಮಾತನಾಡುವ ಅಜ್ಞಾನಿಗಳ ಬಗ್ಗೆ ಮಾತನಾಡುವ ಬದಲು ನಾವೆಲ್ಲರೂ ಸಾವರ್ಕರ್ ಕೀರ್ತಿಯನ್ನು ಎತ್ತಿ ಹಿಡಿಯುವ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.
ಮುಂದಿನ ಯುವ ಜನಾಂಗಕ್ಕೆ ಸಾವರ್ಕರ್ ಅಂತಹ ಹೋರಾಟಗಾರರನ್ನು ಪರಿಚಯಿಸುವ ಮೂಲಕ ದೇಶಾಭಿಮಾನವನ್ನು ಯುವಕರಲ್ಲಿ ಹೆಚ್ಚಿಸಬೇಕು. ಭಾರತಾಂಬೆಯನ್ನು ತಾಯಿಯ ರೂಪದಲ್ಲಿ ನಾವು ಕಾಣುತ್ತಿದ್ದೇವೆ. ಅವಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಾಹಿತಿ ಅಡ್ಡಂಡ ಕಾರ್ಯಪ್ಪ, ಆರ್ಎಸ್ಎಸ್ ಸಂಘಚಾಲಕ ದುರ್ಗಾದಾಸ್ ಭಂಡಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರಮುಖರಾದ ಸಿಂಗನಾಳ ವಿರೂಪಾಕ್ಷಪ್ಪ, ಜಿ. ಶ್ರೀಧರ, ಎಚ್.ಎ. ಸಿದ್ದರಾಮಸ್ವಾಮಿ, ಚೆನ್ನಪ್ಪ ಮಳಗಿ, ಜೋಗದ ನಾರಾಯಣಪ್ಪ, ಅಮರಜ್ಯೋತಿ ನರಸಪ್ಪ, ನಾಗರಾಜ ಗುತ್ತೇದಾರ, ಮದನ್ಕುಮಾರ ಹಾಗೂ ಇತರರಿದ್ದರು.