ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಾಲೂಕಿನ ೨೬ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಸುವ ಯೋಜನೆಯ ವಿಳಂಬಕ್ಕೆ ಈ ಕ್ಷೇತ್ರವನ್ನಾಳಿದ ಶಾಸಕರ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಶಾಸಕ ಕೆ.ಎಸ್ ಕಿರಣ್ಕುಮಾರ್ ಕಟುವಾಗಿ ಟೀಕಿಸಿದರು.ನಾಲಾ ವೀಕ್ಷಣೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಈ ಯೋಜನೆಯಡಿ ಈ ಭಾಗಕ್ಕೆ ನೀರೇ ಬರುವುದಿಲ್ಲ ಎಂದು ಹೋರಾಟಗಾರರನ್ನು ಲೇವಡಿ ಮಾಡಿದ್ದ ಅಂದಿನ ಶಾಸಕರ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಅವರು ೨೦೧೩ ರಿಂದ ಹಿಡಿದು ಈವರೆಗೂ ಈ ಯೋಜನೆ ಕುಂಟುತ್ತಾ ಸಾಗಿ ಜನರ ತಾಳ್ಮೆಗೆಡಿಸುವಲ್ಲಿ ಆ ಅವಧಿಯಲ್ಲಿದ್ದ ಶಾಸಕರುಗಳೇ ಹೊಣೆಗಾರರಾಗುತ್ತಾರೆ. ನಾಲ್ಕುಬಾರಿ ಗೆದ್ದ ಈ ಇಬ್ಬರಲ್ಲಿ ಒಬ್ಬರು ಸಚಿವರರಾಗಿದ್ದರೂ ರೈತರ ಆದ್ಯತೆಯನ್ನು ಮರೆತು, ಎತ್ತಿನ ಹೊಳೆ ಅನುದಾನದ ೨೫೦ ಕೋಟಿ ರು.ಗಳನ್ನು ಪೈಪ್ಲೈನ್ನ್ನು ಕೆರೆಗಳಿಗೆ ಹದ್ದಿಸಿ ತುಕ್ಕುಹಿಡಿಸಿ ಹೋಗಿದ್ದಾರೆ ಹೊರತು ಒಂದು ಹನಿ ನೀರು ಹರಿಸಿಲ್ಲ.ನ ಇದರ ಫಲವೇ ತಾಲೂಕಿನಲ್ಲಿ ಅಂತರ್ಜಲ ೧೫೦೦ ಅಡಿಗಿಳಿದಿದೆ. ಲಕ್ಷಾಂತರ ಅಡಿಕೆ, ತೆಂಗು ನಾಶವಾಗಿ, ಕೊಟ್ಯಂತರ ರುಗಳನ್ನು ರೈತರು ಕೊಳವೆಬಾವಿ ಕೊರೆಸಲು ಸುರಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಇಂದು ನಾಲಾ ವೀಕ್ಷಣೆ ಮಾಡಿ ಬಂದಿದ್ದು ನಮ್ಮ ಜೊತೆಯಲ್ಲಿ ಹೇಮಾವತಿ ಎಂಜಿನಿಯರ್ ಹಾಗೂ ತಹಸೀಲ್ದಾರ್ ಸಹ ಇದ್ದರು, ಈಗಿನ ಕಾಮಗಾರಿ ವೇಗ ಗಮನಿಸಿದರೆ ಇಲ್ಲಿನ ಶಾಸಕರ ಭರವಸೆಯಂತೆ ಮೂರು ತಿಂಗಳಲ್ಲಿ ಮುಗಿಯದು. ಈಗಿನ ಶಾಸಕರಾಗಲಿ ಈ ಹಿಂದಿನ ಸಚಿವರಾಗಲಿ ಅವರ ಕಾಲದಲ್ಲಿ ನಿರ್ಮಾಣವಾದ ಸಾಸಲು ಕೆರೆಗೆ ಹರಿಯವ ಕಾಲುವೆಗಳು ಹೂಳು ತುಂಬಿ ಮುಚ್ಚಿವೆ. ಈಗ ನೀರು ಬಿಟ್ಟರೂ ಅಲ್ಲಿ ಹರಿಯುವುದಿಲ್ಲ, ಬೇಸಿಗೆಯ ಸಂದರ್ಭದಲ್ಲಿ ಕಾಲುವೆಯಲ್ಲಿನ ಹೂಳು ತೆಗೆಸಿ ಸಿಮೆಂಟ್ ಪ್ಲಾಸ್ಟರ್ ಮಾಡಿಸಬೇಕಿತ್ತು, ಈ ಕಾಮಗಾರಿಗೆ ಗಣಿಹಣವನ್ನು ಬಳಸಬಹುದು ಈ ವಿಷಯವನ್ನು ಮುಖ್ಯ ಮಂತ್ರಿಗೆ ಮತ್ತು ಸಂಬಂಧಪಟ್ಟ ಮಂತ್ರಿಯ ಗಮನಕ್ಕೆ ತರುವೆ. ಬೃಹತ್ ನೀರಾವರಿ ಸಚಿವರಾದ ಉಪಮುಖ್ಯಮಂತ್ರಿ ಗಮನಕ್ಕೆ ತಂದು ಆದಷ್ಟು ಶೀಘ್ರವಾಗಿ ಈ ಯೋಜನೆ ಸಂಪೂರ್ಣವಾಗಿ ಪೂರ್ಣಗೊಳ್ಳುವಂತೆ ಒತ್ತಾಯ ಮಾಡಲಾಗುವುದೆಂದರು.ಮುಂದಿನ ಬಜೆಟ್ನಲ್ಲಿ ತಾಲೂಕು ಕೇಂದ್ರಕ್ಕೆ ಪಾಲಿಟೆಕ್ನಿಕ್ ಕಾಲೇಜು ಮಂಜೂರಾತಿ ಮಾಡಿಸುವುದು ಖಾತ್ರಿ ಎಂದರು. ಸೇಂದಿ ವನಗಳ ಮಂಜೂರಾತಿಗೆ ೧೯೫೭ ರಲ್ಲಿ ಅರ್ಜಿ ಹಾಕಿದ್ದವರಿಗೆ ಮಂಜೂರಾತಿ ಮಾಡಿಕೊಡಲು ನಮ್ಮ ಸರ್ಕಾರ ಒಪ್ಪಿದೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್, ಪಿ.ಟಿ. ಚಿಕ್ಕಣ್ಣ, ಮುಖಂಡರಾದ ಪಂಚಾಕ್ಷರಿ ಎಚ್.ಬಿ. ಎಂ.ಎಂ. ಜಗದೀಶ್, ಶರತ್, ತೀರ್ಥಪುರ ವಾಸು ಮುಂತಾದವರಿದ್ದರು. ಕೆ.ಜಿ. ಕೃಷ್ಣೇಗೌಡ ಸ್ವಾಗತಿಸಿದರು.