ಸಾರಾಂಶ
ಈಗಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಾಗರೀಕರಿಗಾಗಿ ವಿವಿಧ ಸೇವೆ ನೀಡಲಾಗುತ್ತಿದೆ. ಅದೇ ರೀತಿ ವಿವಿಧ ತೆರಿಗೆಗಳನ್ನು ಕೂಡ ವಿಧಿಸಿ ಆಕರಿಸಲಾಗುತ್ತಿದೆ.
ಹುಬ್ಬಳ್ಳಿ:
ಮಹಾನಗರ ಪಾಲಿಕೆಯಿಂದ ಗ್ರಾಹಕರಿಗೆ ಇಂಟಿಗ್ರೇಟೆಡ್ ಡಿಜಿಟಲ್ ಸಿಸ್ಟಮ್ಗಳ ಮೂಲಕ ಗ್ರಾಹಕ-ಸ್ನೇಹಿ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರ ತಿಮ್ಮಪ್ಪ ಹೇಳಿದರು.ಅವರು ಇಲ್ಲಿನ ಐಟಿ ಪಾರ್ಕ್ನಲ್ಲಿರುವ ಕೆಯುಐಡಿಎಫ್ಸಿ ಹುಬ್ಬಳ್ಳಿ ಯೋಜನಾ ಅನುಷ್ಠಾನ ಘಟಕದ ಕಚೇರಿಯಲ್ಲಿ ನಡೆದ ಇಂಟಿಗ್ರೇಟೆಡ್ ಡಿಜಿಟಲ್ ಸಿಸ್ಟಮ್ಗಳ ಮೂಲಕ ಗ್ರಾಹಕ ಸ್ನೇಹಿ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳ ಕುರಿತ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಾಗರೀಕರಿಗಾಗಿ ವಿವಿಧ ಸೇವೆ ನೀಡಲಾಗುತ್ತಿದೆ. ಅದೇ ರೀತಿ ವಿವಿಧ ತೆರಿಗೆಗಳನ್ನು ಕೂಡ ವಿಧಿಸಿ ಆಕರಿಸಲಾಗುತ್ತಿದೆ. ಪ್ರಾಪರ್ಟಿ ಐಡಿಗಳೊಂದಿಗೆ ನಳ ಸಂಪರ್ಕದ ಆರ್ಆರ್ ಸಂಖ್ಯೆಗಳನ್ನು ಲಿಂಕ್ ಮಾಡುವುದು, ಸಾಂಪ್ರದಾಯಿಕ ತೆರಿಗೆ ಪದ್ಧತಿಗಳಿಗೆ ಡಿಜಿಟಲ್ ಸ್ಪರ್ಶ ನೀಡುವುದು ಸೇರಿದಂತೆ ವಿವಿಧ ಸೇವೆಗಳನ್ನು ನಾಗರೀಕರು ಬೆರಳ ತುದಿಯಲ್ಲಿ ಪಡೆಯಬಹುದು. ಯಾವುದೇ ತೊಂದರೆಯಿಲ್ಲದೆ ನಾಗರಿಕರು ತೆರಿಗೆ ಪಾವತಿ ಮಾಡಬಹುದು. ಮತ್ತು ತಮ್ಮ ತೆರಿಗೆಗಳನ್ನು ನಿಗದಿತ ದಿನದಂದು ಪಾವತಿಸಲು ಮೊಬೈಲ್ಗಳಿಗೆ ಸಂದೇಶಗಳ ರವಾನೆ ಮಾಡುವ ಕುರಿತು ಚರ್ಚಿಸಲಾಗಿದೆ ಎಂದರು.ಈ ವೇಳೆ ಹು-ಧಾ ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿಗಳು, ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಐಟಿ ಘಟಕದ ಕಾರ್ಯಪಾಲಕ ಅಭಿಯಂತರರು, ಎಂಐಎಸ್ ಸಿಬ್ಬಂದಿ, ಕೆಯುಐಡಿಎಫ್ಸಿ- ಕುಸ್ಸೆಂಪ್ ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳು, ಇನ್ನೋರಿಯಮ್, ಸೆಮಿನಲ್ ಸಾಫ್ಟವೇರ್ ಮುಖ್ಯಸ್ಥರು, ಎಲ್ ಆ್ಯಂಡ್ ಟಿ, ಸ್ಮೆಕ್ ಸಮಾಲೋಚಕರು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಇದ್ದರು.