ಸಾರಾಂಶ
ಛತ್ರಪತಿ ಶಿವಾಜಿ ಮಹಾರಾಜರು ಸಿಂಹಗಡ ಕೋಟೆಯನ್ನು ವಶಪಡಿಸಿಕೊಂಡ ಐತಿಹಾಸಿಕ ಘಟನೆ ಸ್ಮರಣಾರ್ಥ ಬೆಳಗಾವಿಯ ಮರಾಠ ಲಘು ಪದಾತಿದಳ ಕೇಂದ್ರದ ಸೇನಾ ಯೋಧರ ತಂಡ ಕೋಟೆಯಿಂದ ಕೋಟೆವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳುವ ಮೂಲಕ ರಾಷ್ಟ್ರ ಮಹಾಪುರುಷ ಶಿವಾಜಿ ಮಹಾರಾಜರ ಹೋರಾಟ, ರಾಷ್ಟ್ರಭಕ್ತಿಯ ಕುರಿತ ಜನಜಾಗೃತಿ ಮೂಡಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಛತ್ರಪತಿ ಶಿವಾಜಿ ಮಹಾರಾಜರು ಸಿಂಹಗಡ ಕೋಟೆಯನ್ನು ವಶಪಡಿಸಿಕೊಂಡ ಐತಿಹಾಸಿಕ ಘಟನೆ ಸ್ಮರಣಾರ್ಥ ಬೆಳಗಾವಿಯ ಮರಾಠ ಲಘು ಪದಾತಿದಳ ಕೇಂದ್ರದ ಸೇನಾ ಯೋಧರ ತಂಡ ಕೋಟೆಯಿಂದ ಕೋಟೆವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳುವ ಮೂಲಕ ರಾಷ್ಟ್ರ ಮಹಾಪುರುಷ ಶಿವಾಜಿ ಮಹಾರಾಜರ ಹೋರಾಟ, ರಾಷ್ಟ್ರಭಕ್ತಿಯ ಕುರಿತ ಜನಜಾಗೃತಿ ಮೂಡಿಸಲಾಯಿತು.ಮೇಜರ್ ಸಂದೀಪ ನೇತೃತ್ವದ 10 ವಿವಿಧ ಶ್ರೇಣಿಯ ಸೇನಾಧಿಕಾರಿಗಳು ಹಾಗೂ ಇಬ್ಬರು ಯೋಧರನ್ನೊಳಗೊಂಡ ತಂಡವು ಸುಮಾರು 550 ಕಿ.ಮೀ. ಕ್ರಮಿಸುವ ಸವಾಲಿನ ಪ್ರಯಾಣ ಕೈಗೊಂಡು ಕೋಟೆಯಿಂದ ಕೋಟೆಯವರೆಗೆ ಪ್ರಯಾಣ ಬೆಳೆಸಿ, ಮಹಾನ್ ರಾಷ್ಟ್ರಪುರುಷರ ಬಗ್ಗೆ ಜಾಗೃತಿ, ಅವರ ಹೋರಾಟ, ದೇಶಭಕ್ತಿಯ ಮೌಲ್ಯಗಳನ್ನು ಜನತೆಗೆ ಅರಿವು ಮೂಡಿಸಲಾಯಿತು.
ಶಿವಾಜಿ ಮಹಾರಾಜರ ದಂಡಯಾತ್ರೆ ಕೈಗೊಂಡಿದ್ದ ವೇಳೆ ಸಿಂಹಗಢ ಸೇರಿದಂತೆ ಏಳು ಕೋಟೆಗಳಿಗೆ ಈ ಸೇನಾ ತಂಡವು ಭೇಟಿ ನೀಡಿತು. ರಾಜಹಂಸಗಢ, ವಲ್ಲಭಗಢ, ಅಂಜಿಕ್ಯತಾರಾ ಮತ್ತು ಪನ್ಹಾಲ್ಗಳಂತಹ ಕೋಟೆಗಳಿಗೆ ಭೇಟಿ ಯುವ ಜನತೆಯಲ್ಲಿ ದೇಶಭಕ್ತಿ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಿಂಹಗಢ ಕೋಟೆಯಲ್ಲಿ ಲೆಫ್ಟಿನೆಂಟ್ ಜನರಲ್ ಪಿಜೆಎಸ್ ಪನ್ನುಸೇರಿದಂತೆ ಸೇನಾ ತಂಡವನ್ನು ಗ್ರಾಮಸ್ಥರು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಿದರು.