ಸರ್ಕಾರಿ ನೌಕರರಾಗಿದ್ದು ಸಹ ತಮ್ಮ ವೃತ್ತಿಯ ಜತೆ ಜತೆಯಲ್ಲಿ ಇಂತಹ ಸಾಹಸ ಹಾಗೂ ಸ್ಫೂರ್ತಿದಾಯಕ
ಕೊಪ್ಪಳ: ವಿವಿಧ ಮಹಾತ್ಮರ ಜನ್ಮಸ್ಥಳಗಳಿಗೆ ಸ್ವಚ್ಛ ಭಾರತ-ಸ್ವಸ್ಥ ಭಾರತ ಹಾಗೂ ಪರಿಸರ ಉಳಿಸಿ ಜೀವಸಂಕುಲ ಉಳಿಸಿ ಎಂಬ ಘೋಷ ವಾಕ್ಯದಡಿಯಲ್ಲಿ ಸೈಕಲ್ ಮೂಲಕ ದೇಶ ಪರ್ಯಟನೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿರುವ ಶಿವರಾಯಪ್ಪ ಹಾಗೂ ನಳೀನ ಅವರ ಕಾರ್ಯ ಇಂದಿನ ಯುವಕರಿಗೆ ಮಾದರಿ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ಆರೋಗ್ಯ ಇಲಾಖೆಯ ನೌಕರ ಶಿವರಾಯಪ್ಪ ಹಾಗೂ ರಂಗ ಕಲಾವಿದ ನವೀನ ಅವರು ಕೊಪ್ಪಳದಿಂದ ಭಗತ್ ಸಿಂಗ್ ಸ್ಥಳವಾದ ಪಂಜಾಬಿನ ಬಾಗ ಗ್ರಾಮಕ್ಕೆ ಕೈಗೊಂಡ ಸೈಕಲ್ ಯಾತ್ರೆಯ ಕಾರ್ಯಕ್ರಮಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವ ದುರಂತರಗಳ ನಡುವೆ ಈ ಯುವಕರು ಸೈಕಲ್ ಮೂಲಕ ಮಹಾತ್ಮರ ಜನ್ಮ ಸ್ಥಳಕ್ಕೆ ತೆರಳುತ್ತಿರುವ ಕಾರ್ಯ ಶ್ಲಾಘನೀಯ. ಸುಮಾರು ೨೫೦೦ ಕಿಮೀ ದೂರವಿರುವ ಭಗತ್ ಸಿಂಗ್ ಅವರ ಜನ್ಮ ಸ್ಥಳ ಬಾಗಾ ಗ್ರಾಮಕ್ಕೆ ಸೈಕಲ್ ಮೂಲಕ ತೆರಳುತ್ತಿರುವ ಈ ಯುವಕರ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದರು.ಸರ್ಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ನಾಗರಾಜ ಆರ್ ಜುಮ್ಮಣ್ಣನ್ನವರ ಮಾತನಾಡಿ, ಸರ್ಕಾರಿ ನೌಕರರಾಗಿದ್ದು ಸಹ ತಮ್ಮ ವೃತ್ತಿಯ ಜತೆ ಜತೆಯಲ್ಲಿ ಇಂತಹ ಸಾಹಸ ಹಾಗೂ ಸ್ಫೂರ್ತಿದಾಯಕ ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿ.ಈ ಯುವಕರು ಈಗಾಗಲೇ ಕಟಕ್ ಹಾಗೂ ಪೋರಬಂದರಿನ ಸೈಕಲ್ ಯಾತ್ರೆ ಯಶಸ್ವಿಯಾಗಿ ಮುಗಿಸಿದ್ದಾರೆ. ಯುವಕರಿಗೆ ಮುಂದಿನ ದಿನಗಳಲ್ಲಿ ಇಲಾಖೆಯಿಂದ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ ಹಾಗೂ ಗಾಂಧಿ ಬಳಗದ ಸದಸ್ಯ ಆನಂದತಿರ್ಥ ಪ್ಯಾಟಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಬೀರಪ್ಪ ಅಂಡಗಿ, ಕ್ರೀಡಾ ಕಾರ್ಯದರ್ಶಿ ಶರಣಪ್ಪ ರಡ್ಡೇರ, ನಿರ್ದೇಶಕ ಪ್ರಾಣೇಶ ಪೂಜಾರ, ನಾಗರಾಜ ನಾಯಕ ಡೊಳ್ಳಿನ, ಸಾಹಿತಿ ಶರಣಪ್ಪ ಬಿಳಿಎಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹನುಮಂತಪ್ಪ ಕುರಿ, ಮಲ್ಲಪ್ಪ ಗುಡದನ್ನವರ, ಶಿಕ್ಷಕರ ಸಂಘದ ನಿರ್ದೇಶಕ ಗವಿಸಿದ್ದಪ್ಪ ಕೇರಿ, ಗುರುಸ್ವಾಮಿ ಆರ್, ಮುಸ್ತಾಫ ಕುದರಿಮೋತಿ, ಕೋಳೂರು ಸಿರ್ಪಿ ವಿರೇಶ ಮೇಟಿ, ಆರೋಗ್ಯ ಇಲಾಖೆಯ ನೌಕರ ಮಂಜುನಾಥಗೌಡ, ನಾಗರಾಜ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.