ನರಗುಂದ: ಕಳೆದ ಹಲವು ದಿನಗಳಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಪರಿಣಾಮ ಅಡುಗೆ ಅನಿಲ ಪೂರೈಕೆ ಸಮಸ್ಯೆಯಾಗಿರುವ ಹಿನ್ನೆಲೆ ಪಟ್ಟಣದಲ್ಲಿ ಗುರುವಾರ ಪೊಲೀಸ್ ರಕ್ಷಣೆಯಲ್ಲಿ ಗ್ರಾಹಕರಿಗೆ ಸಿಲಿಂಡರಗಳನ್ನು ವಿತರಿಸಲಾಯಿತು.

ಕಳೆದ ಕೆಲವು ದಿನಗಳಿಂದ ಪಟ್ಟಣದ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿ ಮುಂದೆ ಬೆಳಗಿನ ಜಾವ 4 ಗಂಟೆಗೆ ಗ್ರಾಹಕರು ಖಾಲಿ ಸಿಲೆಂಡರನೊಂದಿಗೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಹೀಗಾಗಿ ಗ್ಯಾಸ್ ಏಜೆನ್ಸಿ ಮುಂದೆ ಜನಸಂದಣಿ ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯ ರಕ್ಷಣೆಯಲ್ಲಿ ಅಡುಗೆ ಅನಿಲ ವಿತರಣಾ ಪ್ರಕ್ರಿಯೆ ನಡೆಯುತ್ತಿದೆ.

ನೂರಾರು ಗ್ರಾಹಕರು ತಮ್ಮ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಹೊತ್ತು ತಂದು ಎಜೆನ್ಸಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸರತಿ 300 ಮೀಟರ್‌ಗೂ ಹೆಚ್ಚಿತ್ತು. ಬಿರು ಬಿಸಿಲಲ್ಲಿಯೂ ಮಹಿಳೆಯರು, ಮಕ್ಕಳು, ವೃದ್ಧರು ಗ್ಯಾಸ್‌ ಸಿಲಿಂಡರ್‌ಗಾಗಿ ಕಾಯುತ್ತಿದ್ದರು.

ಎರಡು ಏಜೆನ್ಸಿ: ತಾಲೂಕಿನಲ್ಲಿ ಪಟ್ಟಣ ಹಾಗೂ ಕೊಣ್ಣೂರು ಸೇರಿದಂತೆ ಒಟ್ಟು ಎರಡು ಕಡೆ ಅಡುಗೆ ವಿತರಣಾ ಏಜೆನ್ಸಿಗಳಿವೆ. ಪಟ್ಟಣದಲ್ಲಿ ಇಂಡೇನ್ ಗ್ಯಾಸ್ ಇದ್ದು, ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಭಾರತ ಗ್ಯಾಸ್ ಏಜೆನ್ಸಿ ಇದೆ. ತಾಲೂಕಿನಲ್ಲಿ ಒಟ್ಟು 20 ಸಾವಿರಕ್ಕಿಂತ ಹೆಚ್ಚು ಜನರು ಗ್ಯಾಸ್ ಬಳಕೆದಾರರು ಇದ್ದಾರೆ. ಈಗಾಗಲೇ 2100 ಸಿಲಿಂಡರಗಳಿಗೆ ಬೇಡಿಕೆ ಬಂದಿದೆ. ಆದರೆ ನರಗುಂದಕ್ಕೆ ಪ್ರತಿದಿನ ಕೇವಲ 300 ಗ್ಯಾಸ ಸಿಲಿಂಡರ್‌ಗಳು ಪೂರೈಕೆಯಾಗುತ್ತಿದ್ದು, ಜನರ ಬೇಡಿಕೆಯಂತೆ ಅಡುಗೆ ಅನಿಲ ಪೂರೈಕೆಯಾಗುತ್ತಿಲ್ಲ.

ಕೆಲವು ಗ್ರಾಹಕರು ಮುಂದಿನ ದಿನಗಳಲ್ಲಿ ಅಡುಗೆ ಅನಿಲದ ಅಭಾವವಾಗಬಹುದು ಎಂದು ಭಾವಿಸಿ ಅವಶ್ಯವಿಲ್ಲದಿದ್ದರೂ ಸಿಲಿಂಡರ್ ಕೊಳ್ಳಲು ಬರುತ್ತಿದ್ದಾರೆ. ಇದು ಕೂಡ ಸಿಲಿಂಡರ್ ಅಭಾವಕ್ಕೆ ಒಂದು ಕಾರಣವಾಗಿದೆ ಎಂದು ಪಟ್ಟಣದ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿ ಮಾಲೀಕ ಚನ್ನಬಸಪ್ಪ ಕೋರಿ ತಿಳಿಸಿದರು.ಪೂರ್ವಭಾವಿ ಸಭೆ ಮುಂದೂಡಿಕೆ


ಗದಗ: ಡಾ. ಬಾಬುಜಗಜೀವನರಾಂ ಅವರ 119ನೇ ಜಂಯತಿ ಏ. 5ರಂದು ಹಾಗೂ ಡಾ. ಬಿ.ಆರ್. ಅಂಬೇಡ್ಕರ ಅವರ 135ನೇ ಜಯಂತಿ ಏ. 14ರಂದು ಆಚರಿಸುವ ಮಾ. 27ರಂದು ಮಧ್ಯಾಹ್ನ 3ಕ್ಕೆ ಶಿರಹಟ್ಟಿಯ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯನ್ನು ಏ. 1ರಂದು ಮಧ್ಯಾಹ್ನ 3ಕ್ಕೆ ಶಿರಹಟ್ಟಿಯ ತಹಸೀಲ್ದಾರ್ ಕಾರ್ಯಾಲಯದಲ್ಲಿ ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.