ಚನ್ನಪಟ್ಟಣ: ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್, ಸ್ಟವ್ ಹಾಗೂ ಬಟ್ಟೆಗಳು ಕಾಣಿಸುವ ಮೂಲಕ ಕೆಲಕಾಲ ಆತಂಕ ಮೂಡಿಸಿದ್ದ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆ ಸೋಮವಾರ ಬೆಳಿಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ

ಚನ್ನಪಟ್ಟಣ: ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್, ಸ್ಟವ್ ಹಾಗೂ ಬಟ್ಟೆಗಳು ಕಾಣಿಸುವ ಮೂಲಕ ಕೆಲಕಾಲ ಆತಂಕ ಮೂಡಿಸಿದ್ದ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆ ಸೋಮವಾರ ಬೆಳಿಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸೋಮವಾರ ಬೆಳಗಿನ ಜಾವ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಂಗಳ ಎಕ್ಸ್‌ಪ್ರೆಸ್ ರೈಲುಗಾಡಿ ಚಾಲಕ ರೈಲ್ವೆ ಹಳಿಯ ಮೇಲೆ ಅನುಮಾನಾಸ್ಪದ ವಸ್ತುವನ್ನು ಕಂಡು ರೈಲುಗಾಡಿಯನ್ನು ನಿಲ್ಲಿಸಿ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ರೈಲು ಹಳಿಯ ಮೇಲೆ ಗ್ಯಾಸ್ ಸಿಲಿಂಡರ್, ಒಂದು ಗ್ಯಾಸ್ ಸ್ಟೌವ್ ಹಾಗೂ ಬಟ್ಟೆಗಳು ಕಂಡು ಬಂದಿದೆ.

ಯಾರೋ ಮತ್ತೊಂದು ರೈಲಿನಲ್ಲಿ ಈ ಪದಾರ್ಥಗಳನ್ನು ಸಾಗಿಸುವಾಗ ಆಕಸ್ಮಾತ್ ಕೆಳಗೆ ಬಿದ್ದು ರೈಲು ಗಾಡಿಯೊಂದಕ್ಕೆ ಸಿಲುಕಿ ಸಾಕಷ್ಟು ದೂರ ಎಳೆದುಕೊಂಡು ಬಂದಿದೆ ಎಂದು ಶಂಕಿಸಲಾಗಿದೆ. ಹಾನಿಯಾದ ಸ್ಥಿತಿಯಲ್ಲಿದ್ದ ವಸ್ತುಗಳು ಪತ್ತೆಯಾಗಿವೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆಯಿಂದಾಗಿ ೩೦ ನಿಮಿಷ ಮಂಗಳ ಎಕ್ಸ್‌ಪ್ರೆಸ್ ರೈಲುಗಾಡಿಯ ಸಂಚಾರದಲ್ಲಿ ವ್ಯತ್ಯವಾಗಿದೆ.