ದಿ.ಪಿ.ಬಿ. ದುತ್ತರಗಿಯವರ ಬರಹ ಚಾತುರ್ಯ ನಾಟಕದ ಜೀವಾಳ: ಶಾಸಕ ಕಾಶಪ್ಪನವರ

| Published : Apr 12 2025, 12:45 AM IST

ದಿ.ಪಿ.ಬಿ. ದುತ್ತರಗಿಯವರ ಬರಹ ಚಾತುರ್ಯ ನಾಟಕದ ಜೀವಾಳ: ಶಾಸಕ ಕಾಶಪ್ಪನವರ
Share this Article
  • FB
  • TW
  • Linkdin
  • Email

ಸಾರಾಂಶ

ದಿ.ಪಿ.ಬಿ.ದುತ್ತರಗಿಯವರ ಸಂಪತ್ತಿಗೆ ಸವಾಲ್ ನಾಟಕ ನಾಡಿನ ಮೇರು ನಟ ಡಾ.ರಾಜಕುಮಾರ್ ಅವರಿಗೆ ಹೆಸರು ತಂದುಕೊಟ್ಟಿತು. ದಿ.ಪಿ.ಬಿ.ದುತ್ತರಗಿಯವರ ಬರಹ ಚಾತುರ್ಯ ನಾಟಕದ ಜೀವಾಳ ಎಂದು ಶಾಸಕ ಡಾ.ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ದಿ.ಪಿ.ಬಿ.ದುತ್ತರಗಿಯವರ ಸಂಪತ್ತಿಗೆ ಸವಾಲ್ ನಾಟಕ ನಾಡಿನ ಮೇರು ನಟ ಡಾ.ರಾಜಕುಮಾರ್ ಅವರಿಗೆ ಹೆಸರು ತಂದುಕೊಟ್ಟಿತು. ದಿ.ಪಿ.ಬಿ.ದುತ್ತರಗಿಯವರ ಬರಹ ಚಾತುರ್ಯ ನಾಟಕದ ಜೀವಾಳ ಎಂದು ಶಾಸಕ ಡಾ.ವಿಜಯಾನಂದ ಕಾಶಪ್ಪನವರ ಹೇಳಿದರು.

ಸಮೀಪದ ಸೂಳೇಬಾವಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಿ.ಬಿ. ದುತ್ತರಗಿ ಟ್ರಸ್ಟ್‌ (ಸೂಳೇಬಾವಿ) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಂಗ ಗೀತೆಗಳ ಗಾಯನ, ನೃತ್ಯ ರೂಪಕ, ಕೃತಿ ಬಿಡುಗಡೆ ರಂಗಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಮಾರು 63ಕ್ಕೂ ಅಧಿಕ ನಾಟಕ ಕೃತಿ ರಚಿಸುವ ಮೂಲಕ ಪಿ.ಬಿ. ದುತ್ತರಗಿ ಕವಿಗಳು ಸೂಳೇಬಾವಿ ಗ್ರಾಮ ನಾಡಿನಾದ್ಯಂಥ ಕೀರ್ತಿ ತರುವಂತೆ ಮಾಡಿದ್ದಾರೆ. ರಂಗಾಸಕ್ತರು, ನೂತನ ಕಲಾವಿದರಿಗೆ ಅವರು ಇಂದು ಸ್ಫೂರ್ತಿಯಾಗಿದ್ದಾರೆ. ಪ್ರತಿಷ್ಠಾನ ದುತ್ತರಗಿಯವರ 63 ಕೃತಿಗಳನ್ನೂ ಪ್ರಕಟಿಸಬೇಕು. ಟ್ರಸ್ಟಿನ ಎಲ್ಲ ಚಟುವಟಿಕೆಗಳಿಗೆ ಸರ್ಕಾರದಿಂದ ಇನ್ನಷ್ಠು ಹೆಚ್ಚೆಚ್ಚು ಅನುದಾನ ತರಲು ಪ್ರಯತ್ನಿಸುತ್ತೇನೆ. ಬಾಗಲಕೋಟೆಯ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರೊಂದಿಗೆ ಲಿಖಿತ ಹಾಗೂ ಮೌಖಿಕವಾಗಿ ಚರ್ಚಿಸಿ, ಬಾಗಲಕೋಟೆಯ ಕಲಾಭವನಕ್ಕೆ ದಿ.ಪಿ.ಬಿ. ದುತ್ತರಗಿಯವರ ಹೆಸರು ನಾಮಕರಣ ಮಾಡಲು ಪ್ರಯತ್ನಿಸುತ್ತೇನೆ. ಸೂಳೇಬಾವಿ ಗ್ರಾಮ ಸಾಕಷ್ಠು ಕಲಾವಿದರನ್ನು ಹುಟ್ಟುಹಾಕಿರುವ ಗ್ರಾಮ. ಸೂಳೇಬಾವಿ ಗ್ರಾಮ ಭಾವೈಕ್ಯತಾ ಜಾತ್ರಾ ಆಚರಿಸುವ ಮೂಲಕ ಮಾದರಿಯಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವರ ನೇತೃತ್ವದಲ್ಲೇ ದಿ. ಪಿ.ಬಿ.ದುತ್ತರಗಿಯವರ ಜನ್ಮ ಶತಮಾನೋತ್ಸವ ಆಚರಿಸೋಣ ಎಂದು ಹೇಳಿದರು.

ಸಹಕಾರಿ ಧುರೀಣ ರವೀಂದ್ರ ಕಲಬುರ್ಗಿ ಮಾತನಾಡಿ, ನಮ್ಮದೇ ಸರಕಾರವಿದ್ದು, ನಮ್ಮ ಮತಕ್ಷೇತ್ರದ ಶಾಸಕರು ಕಾರ್ಯನಿರ್ವಹಿಸುವಲ್ಲಿ ಗಟ್ಟಿಗಾರಿಗಿದ್ದು, ವಿಜಯಪುರದ ಕಲಾಭವನಕ್ಕೆ ದಿ.ಕಂದಗಲ್ ಹನಮಂತರಾಯರ ಹೆಸರಿಟ್ಟಂತೆ, ಬಾಗಲಕೋಟೆ ಕಲಾಭವನಕ್ಕೆ ದಿ.ಪಿ.ಬಿ.ದುತ್ತರಗಿಯವ ಹೆಸರಿಡಲು ಶತಪ್ರಯತ್ನ ಮಾಡಬೇಕು ಎಂದರು.

ಪಿ.ಬಿ.ದುತ್ತರಗಿ ಟ್ರಸ್ಟಿನ ಅಧ್ಯಕ್ಷ ಎಸ್.ಕೆ.ಕೊನೆಸಾಗರ ಮಾತನಾಡಿ, ರಂಗಭೂಮಿಯಲ್ಲಿ 40 ವರ್ಷ ಸೇವೆಸಲ್ಲಿಸಿದ್ದ ನನ್ನನ್ನು ಗುರುತಿಸಿ, ಪಿ.ಬಿ.ದುತ್ತರಗಿ ಟ್ರಸ್ಟಿಗೆ ಅಧ್ಯಕ್ಷರನ್ನಾಗಿ ಮಾಡಿದವರು ಶಾಸಕ ಡಾ.ವಿಜಯಾನಂದ ಕಾಶಪ್ಪನವರ್ ಅವರು. ಟ್ರಸ್ಟಿಗೆ ಸರಕಾರ ವಾರ್ಷಿಕ ₹11 ಲಕ್ಷ ಅನುದಾನ ನೀಡುತ್ತಿದೆ. ಕಳೆದ 8 ವರ್ಷಗಳಲ್ಲಿ ಟ್ರಸ್ಟಿನಿಂದ ಯಾವುದೇ ಚಟುವಟಿಕೆ ನಡೆಯದ ಕಾರಣ ₹71 ಲಕ್ಷ ಜಮಾ ಹಾಗೇ ಉಳಿದಿದೆ. ಈಗ ಸರಕಾರ ನೀಡಿರುವ ₹11 ಲಕ್ಷ ಬಂದಿದ್ದು, ಮುಂದಿನ ದಿನಗಳಲ್ಲಿ ಟ್ರಸ್ಟ್‌ ವತಿಯಿಂದ ಕ್ರಿಯಾಶೀಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ದಿ.ಪಿ.ಬಿ.ದುತ್ತರಗಿಯರನ್ನು ಬಾಗಲಕೋಟೆ ಸೂಳೇಬಾವಿಗಳಿಗೆ ಸೀಮಿತಗೊಳಿಸದೆ ರಾಜ್ಯಾದ್ಯಂತ ಟ್ರಸ್ಟ್ ಕಾರ್ಯನಿರ್ವಹಿಸುವ ಮೂಲಕ ಅವರ ಹೆಸರು ಚಿರಸ್ಮರಣೆ ಆಗಿಸಲು ಪ್ರಯತ್ನಿಸಲಾಗುವುದು. ಪಿ.ಬಿ.ದುತ್ತರಗಿಯವರ ಜನ್ಮ ಶತಮಾನೋತ್ಸವ, ನಮ್ಮ ಆಡಾಳಿತಾವಧಿಯಲ್ಲೇ ಪಿ.ಬಿ. ದುತ್ತರಗಿ ಟ್ರಸ್ಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸರ್ಕಾರದ ಸಹಕಾರದೊಂದಿಗೆ ಸೂಳೇಬಾವಿಯಲ್ಲೇ ಮಾಡುವ ಉದ್ದೇಶ ಹೊಂದಿದ್ದು, ಅಧಿಕಾರವಿಲ್ಲದಿದ್ದರೂ ರಂಗಾಸಕ್ತರ,ಅಭಿಮಾನಿಗಳ ಸಹಕಾರದಿಂದ ಜನ್ಮ ಶತಮಾನೋತ್ಸವ ಮಾಡುವ ಇಚ್ಚೆ ನಮ್ಮದು ಎಂದರು.

ಇದೇ ವೇಳೆ ಉಪನ್ಯಾಸಕ ಡಾ.ಮುರ್ತುಜಾ ಒಂಟಿಯವರ ರಂಗಸಿರಿ ಕೃತಿಯನ್ನು ಶಾಸಕರು ಬಿಡುಗಡೆಗೊಳಿಸಿದರು. ರಂಗ ಗೀತೆಗಳ ಗಾಯನ, ನೃತ್ಯ ರೂಪಕಗಳು ಜರುಗಿದವು. ಉಪನ್ಯಾಸಕರಾಗಿ ಡಾ.ಮುರ್ತುಜಾ ಒಂಟಿ, ಟ್ರಸ್ಟಿನ ಸದಸ್ಯರಾದ ಚಿದಾನಂದ ಧೂಪದ, ಡಾ.ಸಿದ್ದಪ್ಪ ತಿಮ್ಮಪ್ಪ ಮಾದರ, ಇಬ್ರಾಹಿಂಸಾಬ ಅಬ್ದುಲ್‌ಸಾಬ ಕನಸಾವಿ, ಸುನಂದಾ ಶಾಂತಾಬಾಯಿ ಕಂದಗಲ್ಲ, ಚಂದ್ರಕಾಂತ ತವನಪ್ಪ ವಂದಕುದರಿ ವೇದಿಕೆಯಲ್ಲಿದ್ದರು. ಕರ್ಣಕುಮಾರ ಜೈನಾಪುರ ಸ್ವಾಗತಿಸಿದರು. ಚಿದಾನಂದ ಧೂಪದ ನಿರೂಪಿದರು. ವಿರೂಪಾಕ್ಷ ಗಾಯದ ವಂದಿಸಿದರು.ಟ್ರಸ್ಟ್ ಹಾಗೂ ಸರಕಾರದಿಂದ ದಿ.ಪಿ.ಬಿ. ದುತ್ತರಗಿಯವರ ನಾಟಕಗಳ 12 ಕೃತಿಗಳು ಮಾತ್ರ ಪ್ರಕಟಗೊಂಡಿವೆ. ಇನ್ನುಳಿದ ನಾಟಕ ಕೃತಿಗಳನ್ನು ಪ್ರಕಟಿಸಬೇಕಾಗಿದ್ದು, ಯಾರು ದುತ್ತರಗಿ ಕವಿಗಳ ನಾಟಕಗಳ ಕೃತಿ, ಅಪರೂಪದ ಫೋಟೋಗಳಿದ್ದರೆ ಅವುಗಳನ್ನು ಟ್ರಸ್ಟಿಗೆ ಸಲ್ಲಿಸುವುದರ ಮೂಲಕ ಪಿ.ಬಿ.ದುತ್ತರಗಿಯವರ ಕೃತಿ ಪ್ರಕಟಣೆಗೆ ಸಹಕರಿಸಿ.

-ಡಾ.ವಿಜಯಾನಂದ ಕಾಶಪ್ಪನವರ ಶಾಸಕ ಹುನಗುಂದ