ಅಪಘಾತಕ್ಕೆ ರಾಜ್ಯದಲ್ಲಿ ನಿತ್ಯ 30 ಜನರ ಸಾವು!

| N/A | Published : Aug 14 2025, 01:00 AM IST

ಸಾರಾಂಶ

ರಾಜ್ಯದಲ್ಲಿ ಕಳೆದ ಐದೂವರೆ ವರ್ಷದಲ್ಲಿ 2,13,192 ಅಪಘಾತಗಳು ಸಂಭವಿಸಿದ್ದು, 60,115 ಜನ ಸಾವಿಗೀಡಾಗಿದ್ದಾರೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚೆಗೆ ಅಪಘಾತ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೂ ಇನ್ನಷ್ಟು ಕಡಿಮೆ ಮಾಡಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ  

 ವಿಧಾನಪರಿಷತ್‌ : ರಾಜ್ಯದಲ್ಲಿ ಕಳೆದ ಐದೂವರೆ ವರ್ಷದಲ್ಲಿ 2,13,192 ಅಪಘಾತಗಳು ಸಂಭವಿಸಿದ್ದು, 60,115 ಜನ ಸಾವಿಗೀಡಾಗಿದ್ದಾರೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚೆಗೆ ಅಪಘಾತ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ.  ಆದರೂ ಇನ್ನಷ್ಟು ಕಡಿಮೆ ಮಾಡಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

ಸಚಿವರು ನೀಡಿದ ಅಂಕಿ-ಅಂಶಗಳನ್ನೇ ವಿಶ್ಲೇಷಣೆಗೆ ಒಳಪಡಿಸಿದಾಗ, ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ 103 ಅಪಘಾತಗಳು ಸಂಭವಿಸುತ್ತಿದ್ದು, ಸರಾಸರಿ 30 ಮಂದಿ ಬಲಿಯಾಗುತ್ತಿದ್ದಾರೆ ಎಂಬುದು ತಿಳಿದುಬಂದಿದೆ.ಬಿಜೆಪಿಯ ಕೆ.ಎಸ್‌.ನವೀನ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಸಾರಿಗೆ, ಪೊಲೀಸ್‌, ಕಾನೂನು, ಲೋಕೋಪಯೋಗಿ ಇಲಾಖೆಗಳು ಹಲವಾರು ಕ್ರಮ ಕೈಗೊಂಡ ಪರಿಣಾಮ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ.

ರಸ್ತೆ ಅಪಘಾತಗಳಲ್ಲಿ ಯುವಕರ ಸಾವಿನ ಸಂಖ್ಯೆ ಹೆಚ್ಚಾಗಿದೆ. ವ್ಹೀಲಿಂಗ್‌, ಹೆಲ್ಮೆಟ್‌ ಧರಿಸದಿರುವುದು, ಅತಿ ವೇಗ, ಕುಡಿದು ವಾಹನ ಚಾಲನೆ ಪ್ರಮುಖ ಕಾರಣವಾಗಿದೆ ಎಂದರು.ರಾಜ್ಯದಲ್ಲಿ ಈವರೆಗೆ 80,43,253 ದ್ವಿಚಕ್ರ ವಾಹನ, 1,17,34,448 ನಾಲ್ಕು ಚಕ್ರ ವಾಹನ ಹಾಗೂ 7,14,380 ಭಾರೀ ವಾಹನಗಳಿಗೆ ಚಾಲನಾ ಪರವಾನಗಿ ನೀಡಲಾಗಿದೆ. ಅದೇ ರೀತಿ 2,57,321 ಟ್ರ್ಯಾಕ್ಟರ್‌ ವಾಹನಗಳಿಗೆ ಚಾಲನಾ ಪರವಾನಗಿ ಕೊಡಲಾಗಿದೆ. 2,89,977 ಹಳದಿ ಬೋರ್ಡ್‌ ಕಾರುಗಳು ನೋಂದಣಿಯಾಗಿರುತ್ತದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ 2020ರಲ್ಲಿ 34,178 ಅಪಘಾತ ಸಂಭವಿಸಿ 3760 ಜನ ಮೃತಪಟ್ಟಿದ್ದಾರೆ, 2021ರಲ್ಲಿ 34,647 ಅಪಘಾತ, 10,038 ಜನರ ಸಾವು, 2022ರಲ್ಲಿ 39,762 ಅಪಘಾತ, 11,702 ಸಾವು, 2023ರಲ್ಲಿ 43,440 ಅಪಘಾತ, 12321 ಸಾವು, 2024ರಲ್ಲಿ 39,228 ಅಪಘಾತ, 10,319 ಸಾವು ಹಾಗೂ 2025ರಲ್ಲಿ 21,937 ಅಪಘಾತ ಸಂಭವಿಸಿ 5,975 ಜನರು ಸಾವಿಗೀಡಾಗಿದ್ದಾರೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು. 

ಬೆಂಗಳೂರು ನಗರ ಹೆಚ್ಚು ಅಪಘಾತ: ಕಳೆದ ಐದೂವರೆ ವರ್ಷದಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು 21,910 ಅಪಘಾತ ಸಂಭವಿಸಿ, 4,154 ಜನರ ಸಾವಿಗೀಡಾಗಿದ್ದು, 16247 ಜನ ಗಾಯಗೊಂಡಿದ್ದಾರೆ. ಬೆಂಗಳೂರು ನಂತರ ಮಂಗಳೂರು ನಗರದಲ್ಲಿ ಅತಿ ಹೆಚ್ಚು ಅಪಘಾತ ಹಾಗೂ ಸಾವು ಸಂಭವಿಸಿದೆ.

Read more Articles on