ಹೈನುಗಾರಿಕೆ ರೈತರ ಜೀವನೋಪಾಯಕ್ಕೆ ದಾರಿ

| Published : Mar 13 2024, 02:07 AM IST

ಸಾರಾಂಶ

ಕೃಷಿ ಬೇಸಾಯದ ಜೊತೆಗೆ ಹೈನುಗಾರಿಕೆ ಉಪ ಕಸುಬಾಗಿ ರೈತರ ಜೀವನೋಪಾಯಕ್ಕೆ ದಾರಿ ಆಗಲಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಹನೂರು

ಕೃಷಿ ಬೇಸಾಯದ ಜೊತೆಗೆ ಹೈನುಗಾರಿಕೆ ಉಪ ಕಸುಬಾಗಿ ರೈತರ ಜೀವನೋಪಾಯಕ್ಕೆ ದಾರಿ ಆಗಲಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ತಾಲೂಕಿನ ಎಲ್ಲೇಮಾಳ ಗ್ರಾಪಂ ವ್ಯಾಪ್ತಿಯ ಎಂಟಿ ದೊಡ್ಡಿ ಗ್ರಾಮದ ಮಾರಮ್ಮ ದೇವಸ್ಥಾನ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಮಳೆಯಾಶ್ರಿತ ಕೃಷಿ ಅಭಿವೃದ್ಧಿ ಯೋಜನೆಯಡಿ ಆಯ್ಕೆಯಾದ 42 ಮಂದಿ ರೈತ ಫಲಾನುಭವಿಗಳಿಗೆ ಹಸುಗಳನ್ನು ವಿತರಣೆ ಮಾಡಿ ಮಾತನಾಡಿದರು.ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಈ ಗ್ರಾಮಕ್ಕೆ ಅಭಿವೃದ್ಧಿ ಮರೀಚಿಕೆಯಾಗಿದೆ. ಮೂಲಭೂತ ಸೌಲಭ್ಯದಿಂದ ವಂಚಿತವಾಗಿರುವ ಎಂಟಿ ದೊಡ್ಡಿ ಗ್ರಾಮಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ವಿಶೇಷ ಅನುದಾನವನ್ನು ತರಲು ಶ್ರಮಿಸಲಾಗುವುದು ಇಂದಿನ ಸರ್ಕಾರ ಹಾಗೂ ಇದ್ದಂತಹ ಜನಪ್ರತಿನಿಧಿಗಳು ಗ್ರಾಮವನ್ನು ಕಡೆಗಣಿಸಲಾಗಿತ್ತು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ ಭಾಗದ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ರಸ್ತೆ ತೀರಾ ಹದಗೆಟ್ಟಿರುವುದರಿಂದ ಸಾರಿಗೆ ವಾಹನಗಳು ಗ್ರಾಮದ ಕಡೆಗೆ ಬರುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಮಾರ್ಗವಾಗಿ ತೋಮಿಯರ್ ಪಾಳ್ಯ ಬಂಡಳ್ಳಿ ರಸ್ತೆಗಳಿಗೆ ಹೆಚ್ಚಿನ ಅನುದಾನ ನೀಡಿ ರಸ್ತೆ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.ಇದೇ ವೇಳೆ ಪುಟ್ಟ ಮಕ್ಕಳು ನಮ್ಮ ಗ್ರಾಮದ ಶಾಲೆ ತೀರಾ ಶಿಥಿಲಾವಸ್ಥೆ ತಲುಪಿದ್ದು, ಮಳೆ ಬಂದರೆ ಸೋರುತ್ತಿದೆ ಎಂದು ಮಕ್ಕಳು ತಿಳಿಸಿದಾಗ ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗೆ ಮೊಬೈಲ್ ಪೋನ್ ಕರೆ ಮಾಡಿ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಮತ್ತು ಶಾಲಾ ಕಟ್ಟಡ ಉತ್ತಮ ಶಿಕ್ಷಣಕ್ಕೆ ಆಗಬೇಕಾಗಿರುವ ಇನ್ನಿತರ ಅನುಕೂಲತೆಗಳ ಬಗ್ಗೆ ಪಟ್ಟಿ ಮಾಡುವಂತೆ ತಿಳಿಸಿದರು. ಇದಲ್ಲದೆ ಗ್ರಾಮಸ್ಥರು ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲದ ಕಾರಣ ದನ ಕರುಗಳನ್ನು ದೂರದ ಊರಿಗೆ ಸಾಗಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈ ಎಲ್ಲಾ ವ್ಯವಸ್ಥೆಗಳನ್ನು ಸರಿ ದೂಗಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಸದ್ಯದಲ್ಲೆ ಗ್ರಾಮದ ಪ್ರಮುಖ ರಸ್ತೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು.ಕೃಷಿ ನಿರ್ದೇಶಕಿ ಸುಂದ್ರಮ್ಮ ಮಾತನಾಡಿ, 2023-24ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದಡಿ ಮಳೆಯಾಶ್ರಿತ ಕೃಷಿ ಅಭಿವೃದ್ಧಿ ಯೋಜನೆಯಡಿ ತಾಲೂಕಿಗೆ 42 ರೈತರಿಗೆ ಹಸುಗಳನ್ನು ವಿತರಣೆ ಮಾಡಲಾಗುತ್ತಿದೆ. ಸಾಮಾನ್ಯ-30 ಪ.ಜಾತಿ-08 ಪಂಗಡ-04 ನೀಡುತ್ತಿದ್ದು ಒಂದು ರಾಸುಗೆ 40 ಸಾವಿರ ರು.ಗಳಾಗುತ್ತದೆ. ಸರ್ಕಾರ ಪ್ರೋತ್ಸಾಹ ಧನ 20 ಸಾವಿರ ಇನ್ನುಳಿದ 20 ಸಾವಿರ ರು.ಗಳನ್ನು ಫಲಾನುಭವಿಗಳು ನೀಡಬೇಕಾಗುತ್ತದೆ. ಇದಲ್ಲದೆ ರೈತರಿಗೆ ವರ್ಷಕ್ಕೆ10 ಸಾವಿರ ರು.ಗಳನ್ನು ವ್ಯವಸಾಯದ ಖರ್ಚಿಗೆ ನೀಡಲಾಗುತ್ತದೆ. ಇದು ನಗದು ರೂಪವಾಗಿರುವುದಿಲ್ಲ, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಔಷಧಗಳನ್ನು ನೀಡಲಾಗುತ್ತಿದೆ ಎಂದರು.ಈ ವೇಳೆ ಕೃಷಿ ಸಹಾಯಕಿ ನಿರ್ದೇಶಕಿ ಸುಂದ್ರಮ್ಮ, ಕೃಷಿ ಅಧಿಕಾರಿ ವೆಂಕಟ ನಾಯಕ್‌, ಎಲ್ಲೆಮಾಳ ಗ್ರಾಪಂ ಅಧ್ಯಕ್ಷೆ ಕಮಲಮ್ಮ ಸುರೇಶ, ಸದಸ್ಯರಾದ ಚಿನ್ನವೆಂಕಟ, ರಾಜಪ್ಪ, ರಾಧ ಮುಖಂಡರಾದ ಸಿಂಗಾನಲ್ಲೂರು ರಾಜಣ್ಣ, ಹನೂರು ವಿಜಯಕುಮಾರ್, ಬೂದುಗುಪ್ಪೆ ಸುರೇಶ, ಚಂಗವಾಡಿ ಬಲರಾಮ ಇನ್ನಿತರರು ಇದ್ದರು.