ದಳವಾಯಿಕೋಡಿಹಳ್ಳಿ: ಶ್ರೀಕೃಷ್ಣಜನ್ಮಾಷ್ಟಮಿಗೆ ವೇಷಭೂಷಣ ಸ್ಪರ್ಧೆ

| Published : Aug 18 2025, 12:00 AM IST

ದಳವಾಯಿಕೋಡಿಹಳ್ಳಿ: ಶ್ರೀಕೃಷ್ಣಜನ್ಮಾಷ್ಟಮಿಗೆ ವೇಷಭೂಷಣ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 60ಕ್ಕೂ ಹೆಚ್ಚು ಮಕ್ಕಳು ವಿವಿಧ ರೀತಿಯ ಕೃಷ್ಣನ ವೇಷಭೂಷಣಗಳನ್ನು ತೊಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನವನ್ನು ಹಲಗೂರು ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿ ಆರ್‌.ಹಿತೇಶ್‌, ದ್ವಿತೀಯ ಸ್ಥಾನವನ್ನು ಎಸ್.ಜಿ.ಕಾನ್ವೆಂಟ್ ವಿದ್ಯಾರ್ಥಿ ಸುದೀಕ್ಷ , ತೃತೀಯ ಸ್ಥಾನವನ್ನು ಜೆ.ಜೆ.ಪಬ್ಲಿಕ್ ಶಾಲೆಯ ಭಾನುಪ್ರಿಯ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಹಲಗೂರು

ಇಲ್ಲಿಗೆ ಸಮೀಪದ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿರುವ ಶ್ರೀರಾಧಾಕೃಷ್ಣ ಆಧ್ಯಾತ್ಮ‌ ಕೇಂದ್ರದ ಆವರಣದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ 7 ವರ್ಷದವರೆಗಿನ ಮಕ್ಕಳಿಗಾಗಿ ಶ್ರೀಕೃಷ್ಣವೇಷಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸುಮಾರು 60ಕ್ಕೂ ಹೆಚ್ಚು ಮಕ್ಕಳು ವಿವಿಧ ರೀತಿಯ ಕೃಷ್ಣನ ವೇಷಭೂಷಣಗಳನ್ನು ತೊಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಅದರಲ್ಲಿ ಪ್ರಥಮ ಸ್ಥಾನವನ್ನು ಹಲಗೂರು ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿ ಆರ್‌.ಹಿತೇಶ್‌, ದ್ವಿತೀಯ ಸ್ಥಾನವನ್ನು ಎಸ್.ಜಿ.ಕಾನ್ವೆಂಟ್ ವಿದ್ಯಾರ್ಥಿ ಸುದೀಕ್ಷ , ತೃತೀಯ ಸ್ಥಾನವನ್ನು ಜೆ.ಜೆ.ಪಬ್ಲಿಕ್ ಶಾಲೆಯ ಭಾನುಪ್ರಿಯ ಪಡೆದುಕೊಂಡರು. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿದರೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಯಿತು.

ಬೆಳಗ್ಗೆ ಶ್ರೀರಾಧಾಕೃಷ್ಣನ ಮೂರ್ತಿಗೆ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ ನಡೆಸಲಾಯಿತು. ನಂತರ ಮಂದಿರದ ಹಿಂಭಾಗ ಇರುವ ಕೊಳದಲ್ಲಿ ತೆಪ್ಪೋತ್ಸವ ನಡೆಸಲಾಯಿತು. ಪಲ್ಲಕ್ಕಿ ಸೇವೆ ನಡೆಸಿದ ನಂತರ ದೇವರ ಮೂರ್ತಿಗಳನ್ನು ತೊಟ್ಟಿಲಲ್ಲಿ ಮಲಗಿಸಿ ಉಯ್ಯಾಲೆ ಸೇವೆ ನಡೆಸಿ, ನಂತರ ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಮಾಡಿದ ಬಳಿಕ ಭಕ್ತಾದಿಗಳಿಗೆ ಮಹಾ ಮಂಗಳಾರತಿ, ಪ್ರಸಾದ ವಿನಯೋಗಿಸಲಾಯಿತು.

ಗಾಯಕರಾದ ಶಿವಾರ ಉಮೇಶ್ ಮತ್ತು ತಂಡದವರಿಂದ ದಾಸವಾಣಿ ಭಕ್ತಿಗೀತೆಗಳನ್ನು ಹಮ್ಮಿಕೊಳ್ಳಲಾಗಿತ್ತು. ತೀರ್ಪುಗಾರರಾಗಿ ಜಿ.ಎಸ್. ಕೃಷ್ಣ , ಸಿದ್ದರಾಜು, ಸ್ನೇಹ ನೆಲ್ಲೂರು ಕರ್ತವ್ಯ ನಿರ್ವಹಿಸಿದರು

ಕಾರ್ಯಕ್ರಮದಲ್ಲಿ ಶ್ರೀ ರಾಧಾಕೃಷ್ಣ ಆಧ್ಯಾತ್ಮ ಮಂದಿರದ ಜೆ ಸಿದ್ದಲಿಂಗಸ್ವಾಮಿ, ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ಎಸ್‌.ಮನೋಹರ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಸಿ.ಪ್ರವೀಣ, ಡಿ.ಎಲ್.ಮಾದೇಗೌಡ, ಎನ್. ಕೆ.ಕುಮಾರ್, ರವೀಶ್, ಡಿ.ಖಗ್ಗೇಶ್, ಪಿ.ಮಹೇಶ್, ಸ್ವಾಮಿ, ರಕ್ಷಿತ್ ಭಾಗವಹಿಸಿದ್ದರು.

ವಿಶಿಷ್ಟ್ ಮಾಂಟೆಸ್ಸರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ವಿಶಿಷ್ಟ್ ಮಾಂಟೆಸ್ಸರಿ ಶಾಲೆಯಲ್ಲಿ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶಾಲೆಯ ಮಕ್ಕಳು ರಾಧೆ ಹಾಗೂ ಕೃಷ್ಣನ ವೇಷದಲ್ಲಿ ಮುದ್ದು ಮುದ್ದಾಗಿ ಕಾಣುವ ಜೊತೆಗೆ ಎಲ್ಲರೂ ಶ್ರೀಕೃಷ್ಣನ ಭಜನೆ ಹಾಗೂ ಹಾಡುಗಳನ್ನು ಹಾಡಿ ಸಡಗರ-ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ವಿದ್ಯಾ ಜ್ಯೋತಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಎಸ್.ಜೀವಿತಾ, ಶಿಕ್ಷಕಿಯರಾದ ಕೌಸಲ್ಯ, ಶಶಿ, ಹೇಮಾ ಹಾಗೂ ಸಹಾಯಕಿ ನಾಗರತ್ನ ಇತರರಿದ್ದರು.