ಕೊಪ್ಪಳ: ಹಸಿರು ಕ್ರಾಂತಿಯ ಬದಲಿಗೆ ಕೊಪ್ಪಳ ಬಳಿ ಅಭಿವೃದ್ಧಿಯ ನೆಪದಲ್ಲಿ ಕಪ್ಪು ಭ್ರಾಂತಿಗೆ ದೂಡಲಾಗಿದೆ ಎಂದು ಜಂಟಿ ಕ್ರಿಯಾ ಸಮಿತಿ ಸಂಚಾಲಕ ಮಂಜುನಾಥ ಗೊಂಡಬಾಳ ಹೇಳಿದ್ದಾರೆ.
ನಗರಸಭೆ ಎದುರು ನಡೆಯುತ್ತಿರುವ ಬಲ್ಡೋಟ ಹಠಾವೋ ಕೊಪ್ಪಳ ಬಚಾವೋ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ೧೫೭ ದಿನ ಪೂರೈಸಿದ್ದು, ಕಟ್ಟಡ ಕಾರ್ಮಿಕರ ಕೇಂದ್ರ ಸಂಘಟನೆ ಬೆಂಬಲ ನೀಡಿದ ವೇಳೆಯಲ್ಲಿ ಭಾಗವಹಿಸಿ ಮಾತನಾಡಿದರು.ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ದಿ.ಬಾಬು ಜಗಜೀವನರಾಮ್ ೧೧೯ನೇ ಜಯಂತಿಯನ್ನು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಚರಿಸಿದ ಬಳಿಕ ಮಾತನಾಡಿದರು.
ದಲಿತೋದ್ಧಾರಕ ಬಾಬು ಜಗಜೀವನರಾಮ್ ಆಶಯ ಈಗ ಮಣ್ಣು ಪಾಲಾಗುತ್ತಿದ್ದು, ರೈತರ ಕಣ್ಣಲ್ಲಿ ನೀರಿನ ಬದಲಿಗೆ ರಕ್ತ ಹರಿಯುವಂತಾಗಿದೆ, ಕಾರ್ಪೋರೆಟ್ ಕುಳಗಳ ಕೈಯಲ್ಲಿ ದೇಶ ನಲುಗುತ್ತಿದೆ.ರೈತರು ನಿರಾಳವಾಗಿ ಕೃಷಿ ಮಾಡಲು ಆಗದಂತೆ ಭೂಮಿ ತಾಯಿಗೆ ವಿಷ ಇಡಲಾಗಿದೆ. ನಮ್ಮೂರನ್ನು ಹಸಿರು ಕ್ರಾಂತಿಯ ಬದಲಿಗೆ ಕಪ್ಪು ಬೂದಿ, ಹೊಗೆ ತುಂಬಿದ ಪರಿಸರವನ್ನಾಗಿ ಮಾಡಿ ಲಕ್ಷಾಂತರ ಜನರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ಯಾರನ್ನೂ ಕೇಳದೇ ಸ್ಥಳೀಯ ಜನರ ಸಹಮತಿ ಇಲ್ಲದೇ ಕಾರ್ಖಾನೆ ತಂದಿಡುವ ಕೆಲಸ ಮಾಡುತ್ತಿರುವ ಯಾರೇ ಆದರೂ ಅದು ತಪ್ಪು ಎಂದರು.ಪದೇ ಪದೇ ಹೇಳುತ್ತಿದ್ದೇವೆ,ನಮಗೆ ಈ ಕಾರ್ಖಾನೆ ಬೇಡ, ನಮ್ಮ ರೈತರ ಭೂಮಿ ಮರಳಿಸಿ, ಈಗಾಗಲೇ ವಿವಿಧ ಕಾರ್ಖಾನೆಗಳು ಪಡೆದುಕೊಂಡಿರುವ ಹೆಚ್ಚುವರಿ ಭೂಮಿ ಸಹ ಮರಳಿ ರೈತರಿಗೆ ಕೊಡಬೇಕು ಅಲ್ಲಿಯ ತನಕ ವಿಶ್ರಾಂತಿ ತೆಗೆದುಕೊಳ್ಳುವದಿಲ್ಲ, ಜಂಟಿ ಕ್ರಿಯಾ ವೇದಿಕೆ ಹೋರಾಟ ಇಡೀ ದೇಶದಲ್ಲಿ ದೊಡ್ಡ ಕ್ರಾಂತಿ ಮಾಡಲಿದೆ ಎಂಬ ಅರಿವು ಜನರಲ್ಲಿ ಮೂಡಬೇಕು ಎಂದರು.
ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ ಮಾತನಾಡಿ, ಬಾಬು ಜಗಜೀವನರಾಮ್,ದಲಿತ ನಾಯಕ ಬಾಬೂಜಿ ಜಯಂತಿ ಆಚರಣೆ ಮಾಡುವ ಈ ಸಂದರ್ಭದಲ್ಲಿ ಜನರೇ ಎದ್ದು ನಿಲ್ಲಬೇಕು, ಹೋರಾಟವೊಂದೇ ನಾವು ಮಾಡಬೇಕಿರುವ ಕೆಲಸ ಮತ್ತು ಅದೇ ನಮ್ಮನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬಲ್ಲದು. ಭಯ ಬಿಟ್ಟು ಜನ ಹೋರಾಟಕ್ಕೆ ಬೆಂಬಲ ಕೊಡಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು,ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಬಿ.ಜಿ.ಕರಿಗಾರ, ಡಾ.ಬಸವರಾಜ ಪೂಜಾರ, ರವಿ ಕಾಂತನವರ, ಯೂಟ್ಯೂಬರ್ ಸಲ್ಮಾನ್ ಖಾನ್, ಹನುಮೇಶ ಎಂ,ಯಮನೂರ ಜಿ, ನಿಂಗನಗೌಡ, ಕುಮಾರ್ ಕಿನ್ನಾಳ, ಆನಂದ ಕಿನ್ನಾಳ, ಮಂಜುನಾಥ ಗೌಡ, ಬಂಗಾರ ಸ್ವಾಮಿ ಕಿನ್ನಾಳ, ಚೇತನ್ ಕಿನ್ನಾಳ, ಬಾಬಾ ಹುಸೇನ್, ಸಂತೋಷ, ಕರ್ನಾಟಕ ಕಟ್ಟಡ ಕಾರ್ಮಿಕ ಕೇಂದ್ರ ಸಂಘಟನೆಯ ಮಹಾದೇವಪ್ಪ ಮಾವಿನಮಡು, ವೆಂಕಟೇಶ ದೊಡ್ಡಮನಿ, ವೆಂಕಟೇಶ ಅಮರಗಟ್ಟಿ, ದುರುಗಪ್ಪ, ಕಲ್ಲಪ್ಪ, ನಾಗರಾಜ ಕುಷ್ಟಗಿ, ವೈ.ಸತ್ಯನಾರಾಯಣ, ಸುಭಾನ್ ಸಾಬ್ ನೀರಲಗಿ, ರಾಜಶೇಖರ ಏಳುಬಾವಿ, ರಾಮಲಿಂಗಯ್ಯ ಶಾಸ್ತ್ರಿ, ಶಿವಪ್ಪ ಜಲ್ಲಿ, ರತ್ನಮ್ಮ ದೊಡ್ಡಮನಿ, ಭಾಷಾ ಮೇಸ್ತ್ರಿ, ಭೀಮಪ್ಪ ಯಲಬುರ್ಗಾ, ದುರುಗಪ್ಪ ಕನಕಮನಿ, ಶಬ್ಬೀರ್, ಸಂತೋಷ ಇದ್ದರು.