ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿದ್ದರ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಿಚ್ಚವಾಡಿ ಗ್ರಾಮದ ದಲಿತ ಕುಟುಂಬ ಚಿಕ್ಕಮ್ಮದೇವಿ ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿತು.ತಾಲೂಕಿನ ಹುಲಿಯೂರುದುರ್ಗ ಹೋಬಳಿ, ಕಿಚ್ಚವಾಡಿ ಗ್ರಾಮದಲ್ಲಿ ಚನ್ನಕೇಶವ, ಬಸವೇಶ್ವರ, ಲಕ್ಷ್ಮಿ ದೇವಿ, ಹುಚ್ಚಮ್ಮ ದೇವಿ, ಮಹಾದೇವಿ, ಮಾಸ್ತಮ್ಮ ದೇವಿ, ಕೋಣೆ ಚಿಕ್ಕಮ್ಮ ದೇವಸ್ಥಾನಗಳಿದ್ದು, ಎಲ್ಲಾ ದೇವಸ್ಥಾನಗಳಿಗೂ ಎಲ್ಲ ಜನಾಂಗದವರಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದರೂ ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ಮಾತ್ರ ದಲಿತರಿಗೆ ಪ್ರವೇಶ ನಿರಾಕರಿಸಲಾಗಿತ್ತು.ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಗೋಪಿ ಜಯಪ್ರಕಾಶ್ ಚಿಕ್ಕಮ್ಮ ದೇವಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಕಳೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಮನವಿ ಮಾಡಿದ್ದರು.ಮನವಿ ಮಾಡಿದ ಹಿನ್ನೆಲೆಯಲ್ಲಿ ಡಿವೈಎಸ್ಪಿ, ತಹಸೀಲ್ದಾರ್ ನೇತೃತ್ವದಲ್ಲಿ ಅಕ್ಟೋಬರ್ 6 ರಂದು ದೇವಾಲಯ ಪ್ರವೇಶ ಕಲ್ಪಿಸಿ ಕೊಡಲು ಹೋದಾಗ ಸವರ್ಣಿಯರು ಅಡ್ಡಿಪಡಿಸಿದ್ದರು. ಮತ್ತೆ ಸೆಪ್ಟೆಂಬರ್ 24ರಂದು ದೇವಾಲಯ ಪ್ರವೇಶಿಸಲು ಗೋಪಿ ಜಯಪ್ರಕಾಶ್ ಕುಟುಂಬ ಮನವಿ ಮಾಡಿದ್ದರು ಫಲಕಾರಿಯಾಗಿರಲಿಲ್ಲ.ಅರ್ಜಿದಾರರು ದೇವಾಲಯ ಪ್ರವೇಶ ಕಲ್ಪಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲಿ ವಿಷಯ ಚರ್ಚೆಗೆ ಬಂದು ಅ, 30 ರಂದು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದ್ದರು.ತಾಲೂಕು ಆಡಳಿತ ಗುರುವಾರ ಗ್ರಾಮಕ್ಕೆ ತೆರಳಿ ದೇವಸ್ಥಾನದ ಪ್ರಮುಖರು ಮತ್ತು ಅರ್ಚಕ ಹಾಗೂ ಗ್ರಾಮಸ್ಥ ರೊಂದಿಗೆ ಮಾತನಾಡಿ ಗ್ರಾಮಸ್ಥರ ಸಮ್ಮುಖದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ಕಲ್ಪಿಸಲು ಮವೊಲಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ಒಪ್ಪದ ಕಾರಣ ದೇವಸ್ಥಾನದ ಬೀಗ ಪಡೆದ ಅಧಿಕಾರಿಗಳು ದೇವಾಲಯದ ಬೀಗ ತೆಗೆಸಿ ಉಜ್ಜಿನಿ ಗ್ರಾಮದ ಗಣಪತಿ ದೇವಾಲಯದ ಸುನಿಲ್ ಎಂಬ ಅರ್ಚಕನನ್ನ ಕರೆಯಿಸಿ ದಲಿತ ಕುಟುಂಬಕ್ಕೆ ದೇವಾಲಯ ಪ್ರವೇಶ ಕಲ್ಪಿಸಿ ಪೂಜೆಗೂ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಡಿವೈಎಸ್ಪಿ ಓಂ ಪ್ರಕಾಶ್, ತಹಸೀಲ್ದಾರ್ ರಶ್ಮಿ, ಅಮೃತೂರು ವೃತ್ತ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಗೌಡ, ನೇತೃತ್ವ ವಹಿಸಿದ್ದರು. ಪಿಎಸ್ಐ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ರಾಜಸ್ವ ನಿರೀಕ್ಷಕ ಪುರುಷೋತ್ತಮ್, ಪಿಡಿಒ ನಾಗರಾಜು, ಸೇರಿದಂತೆ ದಲಿತ ಮುಖಂಡರು ಇದ್ದರು .ಪೋಟೋ ಇದೆ : 30 ಕೆಜಿಎಲ್ 1 : ತಾಲೂಕಿನ ಹುಲಿಯೂರುದುರ್ಗ ಹೋಬಳಿ, ಕಿಚ್ಚವಾಡಿ ಗ್ರಾಮದ ಕೋಣೆ ಚಿಕ್ಕಮ್ಮ ದೇವಸ್ಥಾನ ಮುಂಭಾಗದಲ್ಲಿ ಅಧಿಕಾರಿಗಳು ಮತ್ತು ದಲಿತ ಮುಖಂಡರು .
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))