ದಲಿತ ಜನ ಸೇನಾ ಸಂಘಟನೆ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರದ ಅಂಬೇಡ್ಕರ್ ರಸ್ತೆಯ ಶಾಂತಿನಗರ ಬಡಾವಣೆ ಬಸವನಹಳ್ಳಿ ಗ್ರಾಮ ಠಾಣೆಯ ಸರ್ವೇ ನಂ. 50ರ ಶ್ರೀ ವಿನಾಯಕ ದೇವಾಲಯದ ಜಾಗವನ್ನು ಕೆಲವು ಕಾಣದ ಕೈಗಳಿಂದ ಕಂಡವರ ಪಾಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆ ಜಾಗವನ್ನು ದೇವಾಲಯಕ್ಕೆ ಮೀಸಲಿರಿಸಬೇಕು ಎಂದು ಒತ್ತಾಯಿಸಿ ದಲಿತ ಜನ ಸೇನಾ ಸಂಘಟನೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಅನಿಲ್ ಆನಂದ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾಗೆ ಮನವಿ ಸಲ್ಲಿಸಿದರು.

ಬಸವನಹಳ್ಳಿ ಗ್ರಾಮ ಠಾಣೆಯ ಸರ್ವೇ ನಂ. 54 ಮತ್ತು ಸರ್ವೆ ನಂಬರ್ 50ರಲ್ಲಿ ಭೂ ಒತ್ತುವರಿಯಾಗಿದೆ ಎಂದು ಹಿಂದೆ ನಮ್ಮ ಸಂಘಟನೆಯಿಂದ ದೂರು ನೀಡಲಾಗಿತ್ತು. ಸರ್ವೇ ನಂ. 54ರಲ್ಲಿ ಮಲ್ನಾಡ್ ಕಾಫಿ ಕ್ಯೂರಿಂಗ್ ಅವರಿಂದ ಕಬಳಿಕೆಯಾಗಿದ್ದ 15 ಗುಂಟೆ ಜಾಗವನ್ನು ತೆರವುಗೊಳಿಸಲಾಗಿದೆ ಎಂದರು.

ಆದರೆ ಅದರ ಪಕ್ಕದ ಸರ್ವೆ ನಂ. 54 ರಲ್ಲಿ ಈ ಹಿಂದೆ 37 ಗುಂಟೆ ಜಾಗ ವಿನಾಯಕ ದೇವಾಲಯದ ಜಾಗ ವೆಂದು 1983ರ ವರೆಗೆ ನಮೂದಾಗಿತ್ತು. ತದನಂತರ ಎಸ್.ಎಲ್.ರಾಮಣ್ಣ ಅವರು ಆ ಜಾಗ ಹರಾಜಿನಲ್ಲಿ ಕೊಂಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಮಣ್ಣ ಆ ಜಾಗವನ್ನು ಅನ್ಯ ಕ್ರಾಂತ ಉದ್ದೇಶಕ್ಕಾಗಿ ಕೋರಿದ್ದು, ಭೂ ನ್ಯಾಯಮಂಡಳಿ ಅರ್ಜಿ ತಿರಸ್ಕರಿಸಿ ಆ ಜಾಗ ಶ್ರೀ ವಿನಾಯಕ ದೇವಾಲಯದ ಜಾಗವೆಂದು ಸ್ಪಷ್ಟಪಡಿಸಿದೆ.


1986ರ ಆ.7ರಂದು ತಹಸೀಲ್ದಾರ್ ಪರಿಶೀಲನೆ ನಡೆಸಿ ಈ ಜಾಗ ರಾಮಣ್ಣ ಅವರ ಹೆಸರಿನಲ್ಲಿರುತ್ತದೆ ಎಂದು ದಾಖಲು ಮಾಡಿದ್ದಾರೆ. ಜಾಗ ಮಾರ್ಪಾಡಿಗೆ ಹಾಕಿದ್ದ ಹಿಂದಿನ ಅರ್ಜಿ ತಿರಸ್ಕರಿಸಿದ್ದರೂ ಕಾಲ ಘಟ್ಟದಲ್ಲಿ ಕಾಣದ ಕೈಗಳಿಂದ ಆ ಜಾಗ ಎಸ್.ಎಲ್. ರಾಮಣ್ಣ ಹೆಸರಿನಲ್ಲಿ ಪಾಣಿ ಬಂದಿರುತ್ತದೆ. ಕೂಡಲೇ ಇದರ ತನಿಖೆ ನಡೆಸಿ ಸರ್ಕಾರದ ಜಾಗ ಹಾಗೂ ದೇವಾಲಯದ ಜಾಗ ಪುನಃ ಸರ್ಕಾರದ ವಶಕ್ಕೆ ಪಡೆದು ಕೊಳ್ಳಬೇಕು ಎಂದು ಅನಿಲ್‌ ಆನಂದ್‌ ಒತ್ತಾಯಿಸಿದ್ದಾರೆ.

ದಲಿತ ಜನ ಸೇನಾ ಮಹಿಳಾ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲೆ ಆಶಾ, ದಲಿತ ಜನ ಸೇನಾ ಕಾರ್ಯದರ್ಶಿ ಅರುಣ, ಕನಕ, ನವೀನ್, ಪ್ರತಾಪ್, ಶರತ್, ರಮೇಶ್ , ಅಶೋಕ್, ಚಂದ್ರು ಇದ್ದರು.

ಫೋಟೋ ---

ದಲಿತ್ ಜನಸೇನಾ ಸಂಘಟನೆ ಪದಾಧಿಕಾರಿಗಳು ಶಾಂತಿನಗರ ಬಡಾವಣೆ ಬಸವನಹಳ್ಳಿ ಗ್ರಾಮ ಠಾಣೆಯ ಸರ್ವೇ ನಂ. 50ರ ಶ್ರೀ ವಿನಾಯಕ ದೇವಾಲಯದ ಜಾಗದ ಒತ್ತುವರಿ ತೆರವುಗೊಳಿಸಬೇಕು. ಅಕ್ರಮ ದಾಖಲೆ ಸೃಷ್ಟಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾಗೆ ಮನವಿ ಸಲ್ಲಿಸಲಾಯಿತು.