ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಉಪ ಮುಖ್ಯಮಂತ್ರಿ ಸ್ವಕ್ಷೇತ್ರ ಕನಕಪುರದ ಸಮೀಪದ ಮಾಳಗಾಳು ಗ್ರಾಮದಲ್ಲಿ ಅನ್ಯಕೋಮಿನ ಗುಂಪು ದಲಿತ ಯುವಕನ ಮುಂಗೈ ಕಡಿದುಹಾಕಿ ದೌರ್ಜನ್ಯ ಎಸಗಲಾಗಿರುವ ಕ್ರಮ ಖಂಡಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ತಾಲೂಕು ಡಾ.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರಾಮನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ದಲಿತ ಮುಖಂಡ ಶಂಕನಪುರ ಶೇಖರ್ ಬುದ್ಧ ಮಾತನಾಡಿ, ಮಾಳವಾಳು ಗ್ರಾಮದಲ್ಲಿ ಜು.21 ರಂದು ಅನ್ಯ ಸಮುದಾಯದ ಗುಂಪೊಂದು ದಲಿತರ ಬಡಾವಣೆಗೆ ನುಗ್ಗಿ ದೌರ್ಜನ್ಯ ಎಸಗಿರುವುದು ಖಂಡನೀಯ. ಕೈ ಕತ್ತರಿಸಿ ಕುಟುಂಬದ ಮೇಲೂ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧ.
ವೈರ ಮುಡಿಯವರ ಪುತ್ರ ಅನಿಶ್ ಮೇಲೆ ಮಾರಕಾಸ್ತ್ರ ಹಲ್ಲೆ ನಡೆಸಿದ್ದಲ್ಲದೆ, ಆತನ ಮುಂಗೈಯನ್ನು ಕಡಿದು ಹಾಕಲಾಗಿದೆ. ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಮಾಡಲಾಗಿದೆ. ಈ ಅಮಾನವೀಯ ಕೃತ್ಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ. ರೌಡಿ ಶೀಟರ್ ಆಗಿ ಗಡಿಪಾರಾಗಿದ್ದ ಹರ್ಷ ಅಲಿಯಾಸ್ ಕೈಮಾ ಎಂಬಾತ ತನ್ನ ಸಹಚರರ ಜತೆಗೂಡಿ ಹಲ್ಲೆ ನಡೆಸಿದ್ದಾನೆ. ದಲಿತರಾಮಯ್ಯ ಎಂದು ಕರೆಸಿಕೊಳ್ಳುವ ಸಿಎಂ ಈ ಘಟನೆ ಬಗ್ಗೆ ಕಠಿಣ ಕ್ರಮವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.ವಕೀಲ ರಾಜೇಂದ್ರ ಮಾತನಾಡಿ, ಮಾಳವಾಳು ಗ್ರಾಮದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕನಕಪುರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ 1.19 ಸಾವಿರ ಮತದ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದರಲ್ಲಿ ದಲಿತರು ಹೆಚ್ಚು ಮತ ನೀಡಿದ್ದಾರೆ. ಆದರೀಗ, ದಲಿತರ ಕೈ ಕಡಿದಿರುವುದು ಎಷ್ಟರ ಮಟ್ಟಿಗೆ ಸರಿ. ಈ ಬಗ್ಗೆ ಡಿಕೆ ಶಿವಕುಮಾರ್ ಮೌನ ಸರಿಯಲ್ಲ, ಈ ಕೃತ್ಯದಲ್ಲಿ ಭಾಗಿಯಾಗುರುವ 7 ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಮಂಜುಳಾ ಆಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಪಿಎಸಿಸಿ ಮಾಜಿ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಎಸ್.ಸಿದ್ದಪ್ಪಾಜಿ, ನಟರಾಜು ಮಾಳಿಗೆ, ನಟರಾಜು, ಶಂಕರ್ ಚೇತನ್, ಜಯಶಂಕರ್, ಜೆ.ನಿಂಗರಾಜು, ರೇವಣ್ಣ ಹಳೇ ಹಂಪಾಪುರ, ತೇರಂಬಳ್ಳಿ ಗ್ರಾ.ಪಂ ಸದಸ್ಯ ಪುರುಷೋತ್ತಮ್, ಲಕ್ಷ್ಮಣ್, ಕೃಷ್ಣ, ಶಿವಶಂಕರ್, ನಿಂಗರಾಜು, ವೆಂಕಟರಾಮಣ, ಹರೀಶ್, ಮುಳ್ಳೂರು ಮಂಜುನಾಥ್, ಪ್ರಭುಸ್ವಾಮಿ, ಜಾಕಿ ಸುರೇಶ್ ಇದ್ದರು.