ಸಾರಾಂಶ
ರಾಜ್ಯದ ಬೌದ್ಧ ಕ್ಷೇತ್ರ ಕಲಬುರಗಿ ಜಿಲ್ಲೆಯ ಸನ್ನತಿಯಿಂದ ಹಮ್ಮಿಕೊಂಡಿರುವ ಭಗವಾನ್ ಬುದ್ಧನ ಸನ್ನತಿ ಪಂಚಶೀಲ ಪಾದಯಾತ್ರೆಯನ್ನು ಮೊಳಕಾಲ್ಮೂರಿನ ತಾಲೂಕಿನ ರಾಂಪುರ ಗ್ರಾಮದಲ್ಲಿ ದಲಿತಪರ ಸಂಘಟನೆಗಳ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು.
ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು
ರಾಜ್ಯದ ಬೌದ್ಧ ಕ್ಷೇತ್ರ ಕಲಬುರಗಿ ಜಿಲ್ಲೆಯ ಸನ್ನತಿಯಿಂದ ಹಮ್ಮಿಕೊಂಡಿರುವ ಭಗವಾನ್ ಬುದ್ಧನ ಸನ್ನತಿ ಪಂಚಶೀಲ ಪಾದಯಾತ್ರೆಯನ್ನು ತಾಲೂಕಿನ ರಾಂಪುರ ಗ್ರಾಮದಲ್ಲಿ ದಲಿತಪರ ಸಂಘಟನೆಗಳ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು.ದೇವಸಮುದ್ರ ಪರಮೇಶಪ್ಪನ ಮಠದಲ್ಲಿ ರಾತ್ರಿ ಕಳೆದ ಅವರು ಶನಿವಾರ ಜಟಂಗಿ ರಾಮೇಶ್ವರ ಹಾಗೂ ಬ್ರಹ್ಮ ಗಿರಿ ಬೆಟ್ಟಕ್ಕೆ ತೆರಳಿ ಅಶೋಕನ ಶಿಲಾ ಶಾಸನಗಳು ಅಧ್ಯಯನ ನಡೆಸಿದರು.
ಇದೇ ವೇಳೆ ಬೌದ್ಧ ಸನ್ಯಾಸಿ ಪೂಜ್ಯ ಬಿಕ್ಕು ಬಂತೆ ಬೋದಿ ದತ್ತ ಮಾತನಾಡಿ, ವಿಶ್ವಶಾಂತಿಗಾಗಿ ಸಾಮ್ರಾಟ್ ಅಶೋಕ ಬುದ್ಧ ಧರ್ಮ ಸ್ವೀಕರಿಸಿದರು. ಅವರ ಆಡಳಿತದಲ್ಲಿ ಬೌದ್ಧಸ್ತೂಪ ಮತ್ತು ಶಿಲಾಶಾಸನಗಳನ್ನು ನಿರ್ಮಿಸಿ ದೇವನಾಂಪ್ರಿಯ ಎಂದು ಹೆಸರಾಗಿದ್ದಾರೆ. ಕರ್ನಾಟಕದಲ್ಲಿ ದೊರೆತ ಸಾಮ್ರಾಟ ಅಶೋಕರ ಹನ್ನೊಂದು ಶಿಲಾಶಾಸನಗಳ ಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಅವುಗಳ ಅಧ್ಯಯನ ನಡೆಸುವ ಜತಗೆ ಅಂತಾರಾಷ್ಟ್ರೀಯ ಮಟ್ಟದ ಬೌದ್ಧ ಕ್ಷೇತ್ರವಾಗಿರುವ ಸನ್ನತಿಯಲ್ಲಿ ಜಾಗತಿಕ ಮಟ್ಟದ ಥೀಮ್ಪಾರ್ಕ್ ಹಾಗೂ ಸೆವೆನ್ ಸ್ಟಾರ್ ಸ್ಮಾರಕವನ್ನು ನಿರ್ಮಿಸಲು ಅನುದಾನ ನೀಡಬೇಕು. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಲ್ಪನೆಯ ಪ್ರಬುದ್ಧ ಭಾರತ ನಿರ್ಮಿಸಲು ಒತ್ತು ನೀಡಬೇಕು. ಬೌದ್ಧರ ಅಭಿವೃದ್ಧಿ ನಿಗಮ ಸ್ಥಾಪನೆ, ಬುದ್ಧ ಪೂರ್ಣಿಮೆಯಂದು ಸರ್ಕಾರಿ ರಜೆ ಘೋಷಿಸುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 70 ದಿನಗಳ ಸನ್ನತಿ ಪಂಚಶೀಲ ಪಾದಯಾತ್ರೆ ನಡೆಸುವ ಮೂಲಕ ವಿಧಾನಸೌಧದಲ್ಲಿ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬೌದ್ಧ ಸನ್ಯಾಸಿಗಳಾದ ಭಂತೆ ಬೋದಿ ತಿಸ್ಸಾ, ಬಂತೆ ಯಶ್, ಬಂತೆ ಅಜಪಾಲ, ದೇವಸಮುದ್ರ ಗ್ರಾಮದ ವಕೀಲರಾದ ಹುಲುಗಪ್ಪ, ದಡಗುರು ಗಂಗಮೂರ್ತಿ, ಯುವ ಮುಖಂಡ ಚಂದ್ರಣ್ಣ ಇದ್ದರು.