ಕನ್ನಡಪ್ರಭ ವಾರ್ತೆ ಮೈಸೂರು
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಕಿಡಿಗೇಡಿಗಳ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ, ರಾಜ್ಯದಿಂದ ಶಾಶ್ವತ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯವರು (ಅಂಬೇಡ್ಕರ್ ವಾದ) ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಕೃತ್ಯಗಳು ಹೆಚ್ಚಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅಪಮಾನವಾದ ಸಂದರ್ಭದಲ್ಲಿ ಇಡೀ ದಲಿತ ಸಮಾಜ ಬೀದಿಗಿಳಿದು ಪ್ರತಿರೋಧ ವ್ಯಕ್ತಪಡಿಸಿದಾಗ ಎಚ್ಚೆತ್ತುಕೊಳ್ಳುವ ಸಂಬಂಧಪಟ್ಟ ಇಲಾಖೆಗಳು, ಪ್ರತಿಭಟನೆ, ಪ್ರತಿರೋಧ, ಒತ್ತಡಗಳಿಂದ ಆರೋಪಿಯನ್ನು ಪತ್ತೆಹಚ್ಚಿ ನಾಮಕಾವಸ್ತೆಗೆ ಪ್ರಕರಣ ದಾಖಲಿಸಿ ಬಿಡುತ್ತಾರೆ. ಆರೋಪಿಗೆ ಒಂದೆರಡು ದಿನಗಳಲ್ಲಿ ಜಾಮೀನು ದೊರೆತು ರಾಜಾರೋಷವಾಗಿ ತಿರುಗಾಡುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಓರ್ವ ರಾಷ್ಟ್ರನಾಯಕನಿಗೆ ಅಪಮಾನ ಮಾಡಿದರೆ ಏನೂ ಆಗುವುದಿಲ್ಲ ಎಂಬ ಭಾವನೆ ಮೂಡಿ, ಅಪಮಾನದ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಭಾರತದ ಸಮಸ್ತ ಶೋಷಿತ- ಹಿಂದುಳಿದವರ ಪರವಾಗಿ ಜೀವಿತವಿಡೀ ಹೋರಾಡಿ ಅಧಿಕಾರ ತಂದುಕೊಟ್ಟ ರಾಷ್ಟ್ರನಾಯಕ. ಆದರೆ, ಇತ್ತೀಚಿನ ದಿನಗಳಲ್ಲಿ ಹಿಂದುಳಿದ ವರ್ಗಗಳವರಿಂದಲೇ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನಗಳಾಗುತ್ತಿರುವುದು ಶೋಚನೀಯ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಚಾಮರಾಜನಗರದ ಮಸಣಾಪುರ, ಮೈಸೂರಿನ ವಾಜಮಂಗಲದ ಘಟನೆಗಳನ್ನು ಗಮನಿಸಿದರೆ ನಮ್ಮನ್ನು ಆಳುವ ಸರ್ಕಾರದ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಈ ರಾಷ್ಟ್ರಕ್ಕೆ ಮಾಡಿದ ದ್ರೋಹ. ಹೀಗಾಗಿ ಅಂತಹ ಕಿಡಿಗೇಡಿಗಳ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಬಂಧಿಸುವುದಲ್ಲದೇ, ಈ ರಾಜ್ಯದಿಂದಲೇ ಶಾಶ್ವತ ಗಡಿಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ದಸಂಸ ಮುಖಂಡರಾದ ಬನ್ನಹಳ್ಳಿ ಸೋಮಣ್ಣ, ಸಣ್ಣಕುಮಾರ್, ಅನುಷಾ, ಬಸವರಾಜು, ಧಮ್ಮ ಅಶೋಕ, ಪೂರ್ಣಿಮಾ, ಉದಯ್ ಮೊದಲಾದವರು ಇದ್ದರು.