ಜಿಲ್ಲಾ ಆಟದ ಮೈದಾನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸ್ವಾತಂತ್ರ್ಯ ದಿನಾಚರಣೆ ವೇದಿಕೆ‌ ಮುಂದೆ ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ಶನಿವಾರ ನಡೆದಿದೆ.

ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಚಿಕ್ಕಮಗಳೂರಿನ ದಲಿತ‌ ಸಂಘಟನೆ ಮುಖಂಡರು ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಬೌದ್ಧ ವಿಹಾರ ನಿರ್ಮಾಣಕ್ಕೆ ಜಾಗ ಮಂಜೂರಿಗೆ ಆಗ್ರಹಿಸಿದರು. ಗವನಹಳ್ಳಿ ಸರ್ವೇ ನಂ. 93ರಲ್ಲೇ ಜಾಗ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಹಲವು ವರ್ಷಗಳಿಂದ ಜಾಗ ನೀಡುವುದಾಗಿ ಸರ್ಕಾರ ಭರವಸೆ ನೀಡುತ್ತಲೇ ಬಂದಿದ್ದು, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೇರೆಡೆ ಜಾಗ ನೀಡುವ ಪ್ರಸ್ತಾಪ ತಿರಸ್ಕರಿಸಿದ ಪ್ರತಿಭಟನಾಕಾರರು, ಗವನಹಳ್ಳಿ ಸರ್ವೇ ನಂ. 93ರಲ್ಲೇ ಜಾಗ ಬೇಕು ಎಂದು ಪಟ್ಟು ಹಿಡಿದರು.


ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸಚಿವ ಕೆ.ಜೆ. ಜಾರ್ಜ್ ಜಾಗದ ವಿಚಾರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ದ್ದರು. ಭಾಷಣದ ಬಳಿಕ ಸಚಿವರನ್ನು ಭೇಟಿಯಾಗಿ ಈ ಕುರಿತು ಮಾತನಾಡಲು ಅವಕಾಶ ನೀಡುವಂತೆ ದಲಿತ ಸಂಘಟನೆ ಗಳ ಮುಖಂಡರು ಮನವಿ ಮಾಡಿದರು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಾಗದ ಸಮಸ್ಯೆ ಶೀಘ್ರ ಬಗೆಹರಿಸಿ, ನಿಗದಿತ ಸರ್ವೇ ನಂಬರ್‌ನಲ್ಲೇ ಜಾಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಬೇರೆ ಬೇರೆ ಸಮುದಾಯಕ್ಕೆ ಜಾಗ ಮಂಜೂರು ಮಾಡುವ ವೇಳೆ ಡೀಮ್ಡ್ ಅರಣ್ಯದ ಸಮಸ್ಯೆ ಇರಲಿಲ್ಲ. ಆದರೆ, ದಲಿತರಿತೆ ಜಾಗ ಮಂಜೂರು ಮಾಡುವ ವೇಳೆ ಮಾತ್ರ ಡೀಮ್ಡ್ ಅರಣ್ಯ ಎಂಬ ಸಮಸ್ಯೆ ಉದ್ಬವಿಸಿತಾ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಸರ್ಕಾರವನ್ನು ರಿಯಲ್ ಎಸ್ಟೇಟ್ ಸರ್ಕಾರ ಎಂದು ಆರೋಪಿಸಿದರು.