ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ದಲಿತ, ಅಸ್ಪೃಶ್ಯ, ಶೋಷಿತ ಸಮುದಾಯಗಳನ್ನು ಪರಂಪರಾಗತವಾಗಿ ನಂಬಿಸಿ ವಂಚಿಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷ ತೊರೆಯುವಂತೆ ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಕರೆ ನೀಡಿದ್ದಾರೆ.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಐದು ಚುನಾವಣೆಗಳಿಂದಲೂ ದಲಿತ ಮತಗಳನ್ನು ಕೇಂದ್ರೀಕರಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆಂದು ಹೇಳಿ, ಶೋಷಿತ ಸಮುದಾಯದವರಿಗೆ ಆಮಿಷವೊಡ್ಡಿ, ಮತ ಪಡೆದು ಅಧಿಕಾರಕ್ಕೆ ಬಂದು ಅಹಿಂದದ ಸೋಗಿನಲ್ಲಿರುವ ಸಿದ್ದರಾಮಯ್ಯ ಹಾಗೂ ಎಸ್.ಎಂ.ಕೃಷ್ಣ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿ, ದಲಿತ ಸಮುದಾಯವನ್ನು ವಂಚಿಸಿಕೊಂಡು ಬರುತ್ತಿದೆ ಎಂದು ಆರೋಪಿಸಿದರು.
ನಮ್ಮ ವಿಮೋಚಕರಾದ ಮಹಾತ್ಮ ಜ್ಯೋತಿಬಾಪುಲೆ, ತಮಿಳುನಾಡಿನ ತಂದೆ ಪೆರಿಯಾರ್, ಕಾನ್ಸಿರಾಂ ಅವರು ಕಾಂಗ್ರೆಸ್ ಪಕ್ಷ ಸಿರಿವಂತರು ಮತ್ತು ಬ್ರಾಹ್ಮಣರ ಮೇವುಗಾಡಿದ್ದಂತೆ. ಬಿಜೆಪಿ ಸೈದ್ಧಾಂತಿಕವಾಗಿ ನಮ್ಮನ್ನು ಮುಗಿಸಲು ಎದುರಿಗೆ ಹೆಡೆಯೆತ್ತಿ ನಿಂತಿರುವ ನಾಗರಹಾವಿನಂತೆ ಎಂದು ಹೇಳಿದ್ದರು, ಆದರೆ ಕಾಂಗ್ರೆಸ್ ಹುಲ್ಲಲ್ಲಿ ಅಡಗಿರುವ ನಾಗರ ಹಾವಿನಂತೆ. ಇದರ ಜತೆ ಎಚ್ಚರದಿಂದ ಇರುವಂತೆಯೂ ಅವರು ತಿಳಿಸಿರುವುದು ಗಮನಾರ್ಹ ವಿಷಯ ಎಂದರು.ರಾಜಕಾರಣದ ಜೇಷ್ಠತಾ ಆಧಾರದ ಮೇಲೆ ತಾವು ಕೊಟ್ಟ ಮಾತಿನಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ದಲಿತ ಜನಾಂಗಕ್ಕೆ ಮಾಡಿಕೊಂಡು ಬರುತ್ತಿರುವ ವಂಚನೆ ವಿರುದ್ಧ ದಲಿತ ಸಮುದಾಯ ರಾಜ್ಯಾದ್ಯಂತ ಜಾಗೃತಿ ಮೂಡಿಸಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಮುಡಾ ಹಗರಣದಿಂದ ಇಕ್ಕಟ್ಟಿಗೆ ಸಿಲುಕಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾಗದಲ್ಲಿ ಸತೀಶ್ ಜಾರಕಿಹೊಳಿ ಎಂಬ ಸಾಹುಕಾರನನ್ನು ಮುಖ್ಯಮಂತ್ರಿಯನ್ನಾಗಿಸಲು ಹೊರಟಿದೆ. ಹಾಗೆ ಮಾಡಿದರೆ ಅದು ಅಸ್ಪೃಶ್ಯ ಸಮುದಾಯಕ್ಕೆ ಎಸಗಿದ ದ್ರೋಹ ಎಂದು ಆರೋಪಿಸಿದರು.
ಈಗಲಾದರೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ತೊರೆಯುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.