ಗುಡಗೇರಿ ಗ್ರಾಮದ ರೈಲು ನಿಲ್ದಾಣದಲ್ಲಿ ಒಂದು ವಾರದಿಂದ ನಿರಂತರವಾಗಿ ರಾತ್ರಿ ವಿದ್ಯುತ್ ಕಡಿತ ಆಗುತ್ತಿರುವುದರಿಂದ ಕತ್ತಲು ಆವರಿಸಿ ಪ್ರಯಾಣಿಕರು ಮೊಬೈಲ್ ಟಾರ್ಚ್ನಲ್ಲಿಯೇ ರೈಲು ಹತ್ತಿ-ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಕುಂದಗೋಳ:
ತಾಲೂಕಿನ ಗುಡಗೇರಿ ಗ್ರಾಮದ ರೈಲು ನಿಲ್ದಾಣದಲ್ಲಿ ಒಂದು ವಾರದಿಂದ ನಿರಂತರವಾಗಿ ರಾತ್ರಿ ವಿದ್ಯುತ್ ಕಡಿತ ಆಗುತ್ತಿರುವುದರಿಂದ ಕತ್ತಲು ಆವರಿಸಿ ಪ್ರಯಾಣಿಕರು ಮೊಬೈಲ್ ಟಾರ್ಚ್ನಲ್ಲಿಯೇ ರೈಲು ಹತ್ತಿ-ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.ನಿಲ್ದಾಣಕ್ಕೆ ಹೆಸ್ಕಾಂ ವಿದ್ಯುತ್ ಸಂಪರ್ಕವಿದ್ದು, ಒಂದು ವಾರದಿಂದ ರಾತ್ರಿ 7.30ರಿಂದ 8ರ ವರೆಗೆ ನಿರಂತರವಾಗಿ ಲೋಡ್ ಶೆಡ್ಡಿಂಗ್ ಇರುತ್ತದೆ. ಈ ಅವಧಿಯಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುವ ‘ಫಾಸ್ಟ್ ಪ್ಯಾಸೆಂಜರ್’ ರೈಲು ಗುಡಗೇರಿ ನಿಲ್ದಾಣಕ್ಕೆ ಆಗಮಿಸುತ್ತದೆ. ಈ ವೇಳೆ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಕನಿಷ್ಠ ಬೆಳಕಿನ ವ್ಯವಸ್ಥೆಯೂ ಇಲ್ಲದೆ ಪ್ರಯಾಣಿಕರು ಕತ್ತಲಲ್ಲೇ ತಡಕಾಡುತ್ತಾ ರೈಲು ಹತ್ತಿ-ಇಳಿಯುವಂತಾಗಿದೆ.
ನಿತ್ಯ ನೂರಾರು ಪ್ರಯಾಣಿಕರು, ವೃದ್ಧರು ಹಾಗೂ ಮಹಿಳೆಯರು ಸಂಚರಿಸುವ ಈ ನಿಲ್ದಾಣದಲ್ಲಿ ವಿದ್ಯುತ್ ಕಡಿತಗೊಂಡಾಗ ಪರ್ಯಾಯವಾಗಿ ಬಳಸಲು ಯಾವುದೇ ಜನರೇಟರ್ ಅಥವಾ ಬ್ಯಾಟರಿ ಬ್ಯಾಕ್ಅಪ್ ವ್ಯವಸ್ಥೆ ಇಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕತ್ತಲ ವಾತಾವರಣದಿಂದಾಗಿ ಪ್ರಯಾಣಿಕರು ಕಾಲು ಜಾರಿ ಬೀಳುವ, ಸುರಕ್ಷತೆಯ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.ರೈಲ್ವೆ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಹಾಗೂ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣವೇ ನಿಲ್ದಾಣಕ್ಕೆ ಜನರೇಟರ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದುನೋಡಬೇಕಿದೆ