ಸಾರಾಂಶ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ವೈಜ್ಞಾನಿಕ ಸಾಕ್ಷಿಗಳ ಮೂಲಕ ನಟ ದರ್ಶನ್ ಗ್ಯಾಂಗ್ಗೆ ಕಾನೂನಿನ ಕುಣಿಕೆ ಬಿಗಿಗೊಳಿಸಲು ಮುಂದಾಗಿರುವ ಪೊಲೀಸರು, ಈಗ ಆರೋಪಿಗಳಿಗೆ ಡಿಎನ್ಎ ಪರೀಕ್ಷೆ ನಡೆಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕನ್ನಡಚಲನಚಿತ್ರ ರಂಗದ ಸ್ಟಾರ್ ನಟ ದರ್ಶನ್ ವಿರುದ್ಧ ಕೊಲೆ ಪ್ರಕರಣದಲ್ಲಿ ಡಿಎನ್ಐ ಪರೀಕ್ಷೆ ಮಹತ್ವ ಪಡೆದುಕೊಂಡಿದೆ.
ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳನ್ನು ಕರೆತಂದು ಪೊಲೀಸರು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಈ ವೇಳೆ ಡಿಎನ್ಎ ಪರೀಕ್ಷೆ ಸಲುವಾಗಿ ಆರೋಪಿಗಳ ರಕ್ತ ಹಾಗೂ ಕೂದಲು ಸಂಗ್ರಹಿಸಲಾಗಿದೆ. ಇವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ರವಾನಿಸಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ನಡೆದ ಪಟ್ಟಣಗೆರೆ ಶೆಡ್ನಲ್ಲಿ ಹಾಗೂ ಕೃತ್ಯ ನಡೆದ ದಿನ ಆರೋಪಿಗಳು ಧರಿಸಿದ್ದ ಉಡುಪುಗಳಲ್ಲಿ ಪತ್ತೆಯಾದ ಕೂದಲು ಸೇರಿದಂತೆ ಇತರೆ ಪುರಾವೆಗಳ ಆಧರಿಸಿ ಪೊಲೀಸರು ಡಿಎನ್ಎ ಪರೀಕ್ಷೆ ನಡೆಸಿದ್ದಾರೆ. ಈಗ ಆರೋಪಿಗಳಿಂದ ಸಂಗ್ರಹಿಸುವ ಕೂದಲು ಹಾಗೂ ರಕ್ತದ ಮಾದರಿಗೂ ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾದ ಕೂದಲುಗಳಿಗೂ ತಾಳೆ ಮಾಡಿ ಎಫ್ಎಸ್ಎಲ್ ತಜ್ಞರು ವರದಿ ನೀಡಲಿದ್ದಾರೆ. ಅವುಗಳು ಹೋಲಿಕೆಯಾದರೆ ಆರೋಪ ಸಾಬೀತುಪಡಿಸಲು ಪೊಲೀಸರಿಗೆ ವೈಜ್ಞಾನಿಕವಾಗಿ ಪ್ರಬಲ ಸಾಕ್ಷ್ಯ ಲಭಿಸಿದಂತಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕಾಗಿ ಪಟ್ಟಣಗೆರೆ ಶೆಡ್, ನಟ ದರ್ಶನ್ರವರ ಮನೆ, ಮೈಸೂರಿನಲ್ಲಿ ಅವರು ತಂಗಿದ್ದ ಹೋಟೆಲ್, ಪತ್ನಿ ವಿಜಯಲಕ್ಷ್ಮೀ ಮನೆ, ಪ್ರಿಯತಮೆ ಪವಿತ್ರಾಗೌಡ ಮನೆ, ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್ ಹೋಟೆಲ್, ಆರೋಪಿಗಳಾದ ವಿನಯ್, ಪ್ರದೂಷ್, ಪವನ್, ರಾಘವೇಂದ್ರ, ಜಗದೀಶ ಅಲಿಯಾಸ್ ಜಗ್ಗು, ಅನುಕುಮಾರ್ ಹಾಗೂ ರವಿಶಂಕರ್ ರವರಿಗೆ ಸೇರಿದ ಮನೆಗಳು ಸೇರಿದಂತೆ 28 ಕಡೆ ಪೊಲೀಸರು ಮಹಜರ್ ನಡೆಸಿದ್ದರು. ಈ ವೇಳೆ ಆರೋಪಿಗಳು ಕೃತ್ಯ ನಡೆದ ದಿನ ಧರಿಸಿದ್ದ ಬಟ್ಟೆಗಳು, ಶೂಗಳನ್ನು ಜಪ್ತಿ ಮಾಡಿದ್ದಲ್ಲದೆ ಅವರು ಕೃತ್ಯ ನಡೆದ ದಿನ ಓಡಾಡಿದ ಸ್ಥಳಗಳಲ್ಲಿ ಕೆಲವು ವೈಜ್ಞಾನಿಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದರು.
ಯಾವ ಕೇಸುಗಳಲ್ಲಿ ಡಿಎನ್ಎ ಪರೀಕ್ಷೆ:
ಸಾಮಾನ್ಯವಾಗಿ ಅತ್ಯಾಚಾರ ಕೃತ್ಯಗಳಲ್ಲಿ ಡಿಎನ್ಎ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ ಸೇರಿದಂತೆ ಪ್ರಮುಖ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು.
ಹಂತಕರ ಸುಳಿವು ಸಿಗದೆ ಭಾರಿ ಸವಾಲಾಗಿದ್ದ ಗೌರಿ ಲಂಕೇಶ್ ಹತ್ಯೆ ಕೃತ್ಯದಲ್ಲಿ ಕೊಲೆ ಸಂಚು ಬಯಲುಗೊಳಿಸಲು ಡಿಎನ್ಐ ಪರೀಕ್ಷೆ ಮಹತ್ವದ ಸುಳಿವಾಗಿತ್ತು.
ಅದೇ ರೀತಿ ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಕೃತ್ಯದಲ್ಲಿ ಕೂಡ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಶಂಕಿತ ಉಗ್ರ ಯಾಸಿನ್ ಭಟ್ಕಳನೇ ಬಾಂಬ್ ಇಟ್ಟಿದ್ದ ಎಂಬುದಕ್ಕೆ ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಕೂದಲು ಆಧರಿಸಿ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಹ ಪ್ರತ್ಯಕ್ಷದರ್ಶಿಗಳಿಲ್ಲದ ಕಾರಣ ಆರೋಪಿಗಳ ಡಿಎನ್ಎ ಪರೀಕ್ಷೆ ಮಹತ್ವ ಪಡೆದಿದೆ. ಅಲ್ಲದೆ ಇಡೀ ಪ್ರಕರಣವು ವೈಜ್ಞಾನಿಕ ಪುರಾವೆಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಮುಂದೆ ಪ್ರತಿಕೂಲ ಸನ್ನಿವೇಶ ಎದುರಾಗಿ ಸಾಕ್ಷಿಗಳು ಹೇಳಿಕೆ ಬದಲಿಸಿದರೂ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ನ್ಯಾಯಾಲಯದಲ್ಲಿ ಹತ್ಯೆ ಕೃತ್ಯ ರುಜುವಾತುಪಡಿಸಲು ಅನುಕೂಲವಾಗಲಿದೆ.
ಈ ಹಿನ್ನೆಲೆಯಲ್ಲಿಯೇ ರೇಣುಕಾಸ್ವಾಮಿ ಹತ್ಯೆ ಕೃತ್ಯದಲ್ಲಿ ವೈಜ್ಞಾನಿಕ ಸಾಕ್ಷ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಪೊಲೀಸರು ಸಂಗ್ರಹಿಸಿದ್ದಾರೆ. ಹೀಗಾಗಿಯೇ ಘಟನಾ ಸ್ಥಳಗಳ ಮಹಜರ್ ಪ್ರಕ್ರಿಯೆ ವೇಳೆ ಲೋಪ ಉಂಟಾಗದಂತೆ ಇನ್ಸ್ಪೆಕ್ಟರ್ ಮಟ್ಟದ ತಂಡ ರಚಿಸಲಾಗಿತ್ತು ಎಂದು ಮೂಲಗಳು ಹೇಳಿವೆ.