ಜೂ.೨೬ರಿಂದ ದಸಂಸ ಅನಿರ್ದಿಷ್ಟಾವಧಿ ಧರಣಿ

| Published : Jun 23 2025, 11:47 PM IST

ಸಾರಾಂಶ

ಕಳೆದ ೧೮ ವರ್ಷಗಳಿಂದಲೂ ಅರುಣೋದಯ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಮಂದಿ ಶಿಕ್ಷಕರಾಗಿ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ೨೦೨೩ರ ಜೂ. ೨೨ರಂದು ಆರ್ಥಿಕ ಇಲಾಖೆ ಸಹಾಯನುದಾನಿತ ಯೋಜನೆಗೆ ಒಳಪಡಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರದ ಸಹಾಯಧನಕ್ಕೆ ಒಳಪಟ್ಟ ಹಾಡ್ಲಿ-ಮೇಗಳಾಪುರ ಸರ್ಕಾಲ್‌ನ ಅರುಣೋದಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಪ್ರಥಮ ವೇತನ ಪ್ರಮಾಣ ಪತ್ರ ಶಿಫಾರಸ್ಸು ಮಾಡದೆ ನಿರ್ಲಕ್ಷ್ಯ ವಹಿಸಿರುವ ಡಿಡಿಪಿಐ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜೂ.೨೬ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.

ಕಳೆದ ೧೮ ವರ್ಷಗಳಿಂದಲೂ ಅರುಣೋದಯ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಮಂದಿ ಶಿಕ್ಷಕರಾಗಿ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ೨೦೨೩ರ ಜೂ. ೨೨ರಂದು ಆರ್ಥಿಕ ಇಲಾಖೆ ಸಹಾಯನುದಾನಿತ ಯೋಜನೆಗೆ ಒಳಪಡಿಸಿದೆ. ಈ ಆದೇಶ ಹೊರಬಿದ್ದು ೨ ವರ್ಷವಾದರೂ ಸಹ ಪ್ರಮಾಣಪತ್ರ ನೀಡುವಲ್ಲಿ ಡಿಡಿಪಿಐ ಶಿವರಾಮೇಗೌಡ ಅವರು ಕರ್ತವ್ಯಲೋಪವೆಸಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಶಾಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದು, ಈ ಬಗ್ಗೆ ಅನುಸೂಚಿತ ಜಾತಿ ಕಲ್ಯಾಣ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಈ ಶಿಕ್ಷಣ ಸಂಸ್ಥೆಯ ಬಗ್ಗೆ ತಿಳಿಸಿ, ಡಿಡಿಪಿಐ ಶಿವರಾಮೇಗೌಡರ ಕರ್ತವ್ಯಲೋಪ ಕುರಿತಂತೆ ಶಿಕ್ಷಕರು ಮಾಹಿತಿ ನೀಡಿದ್ದರೂ ಸಹ ಈವರೆವಿಗೂ ಅದು ಕಾರ್ಯಗತವಾಗಿಲ್ಲ ಎಂದು ಕಿಡಿಕಾರಿದರು.

ಮುಖಂಡರಾದ ಅನಿಲ್‌ಕುಮಾರ್, ಬಿ.ಆನಂದ್, ಮುತ್ತುರಾಜು, ರಂಗಸ್ವಾಮಿ, ತಮ್ಮಣ್ಣ, ಶರಾವತಿ ಗೋಷ್ಠಿಯಲ್ಲಿದ್ದರು.