ಸಾರಾಂಶ
ಧಾರವಾಡ:
ದಸರಾ ಕರ್ನಾಟಕದ ನಾಡಹಬ್ಬ. ಅ. 2ರಿಂದ 12ರ ವರೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ದಸರಾ ರಜೆ ನೀಡಿದರೂ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಗೆ ಧಕ್ಕೆ ತರಲು, ಅಪಮಾನ ಮಾಡಲು ಕ್ರಿಶ್ಚಿಯನ್ ಸಂಸ್ಥೆಗಳು ಶಾಲೆಗಳನ್ನು ತೆರೆದಿವೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಹಲವು ವರ್ಷಗಳಿಂದ ದಸರಾ ರಜೆ ಉಲ್ಲಂಘನೆ ಮಾಡುತ್ತಿವೆ. ಶಾಲೆ ಮಾತ್ರವಲ್ಲದೇ ಪರೀಕ್ಷೆಗಳನ್ನು ಸಹ ನಡೆಸುತ್ತಿದೆ. ಈ ಮೂಲಕ ಹಿಂದೂ ಸಂಸ್ಕೃತಿ ಅಪಮಾನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿರುವ ಕ್ರಿಶ್ಚಿಯನ್ ಸಂಸ್ಥೆಗಳು ರಾಷ್ಟ್ರೀಯತೆ ಮತ್ತು ನಮ್ಮ ಸಂಪ್ರದಾಯವನ್ನು ಕಡೆಗಣಿಸುತ್ತಲೇ ಬರುತ್ತಿವೆ. ಅವರ ಶೈಕ್ಷಣಿಕ, ಸೇವಾ ಸಂಸ್ಥೆಗಳಲ್ಲಿ ಅಂಬೇಡ್ಕರ್, ಗಾಂಧೀಜಿ ಭಾವಚಿತ್ರ ಇಡುವುದಿಲ್ಲ. ಬದಲಾಗಿ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯದ ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳೆ ತೊಡುವಂತಿಲ್ಲ, ಕುಂಕುಮ ಧರಿಸುವಂತಿಲ್ಲ, ಹೂವು ಮುಡಿಯುವಂತಿಲ್ಲ ಎಂದು ಮೌಖಿಕ ಆದೇಶ ಸಹ ಹೊರಡಿಸಲಾಗಿದೆ. ಕಾಲ್ಗೆಜ್ಜೆ ಹಾಕುವಂತಿಲ್ಲ ಎನ್ನುತ್ತಾರೆ. ಹಿಂದೂ ಸಮಾಜ, ಸಂಸ್ಕೃತಿಯನ್ನು ಅವಮಾನಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಇದೀಗ ನಾಡಹಬ್ಬ ದಸರಾ ವೇಳೆ ನಮ್ಮ ಮಕ್ಕಳು ದೇವಿ ಆರಾಧನೆ, ಪೂಜೆ ಮಾಡುವುದನ್ನು ಬಿಟ್ಟು ಪರೀಕ್ಷೆಗೆ ಓದುವುದು, ಶಾಲೆಗೆ ಹೋಗುವುದಾಗಿದೆ. ಗದಗ, ಪಾವಗಡ, ಹುಬ್ಬಳ್ಳಿ, ತುಮಕೂರ, ಬೆಂಗಳೂರಿನಲ್ಲಿ ದಸರಾ ರಜೆ ಉಲ್ಲಂಘನೆ ಆಗಿದ್ದು, ಈ ಅವಧಿಯಲ್ಲಿ ಶಾಲೆ ನಡೆಸಿರುವವರ ಮಾನ್ಯತೆ ರದ್ದು ಮಾಡಬೇಕು. ಅನುದಾನ ವಾಪಸ್ ಪಡೆಯಬೇಕು ಹಾಗೂ ಸಂಬಂಧಿಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದ ಮುತಾಲಿಕ್, ಬ್ರಿಟಿಷ್ ಕಾಲದ ಕ್ರಿಸ್ಮಸ್ ರಜೆ ರದ್ದು ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಮಂಜುನಾಥ ಕಾಟಕರ್, ಮೈಲಾರ ಗುಡ್ಡಪ್ಪನವರ, ಮಹಾಲಿಂಗ್ ಅಗಳಿ ಇದ್ದರು.
ಇಸ್ರೇಲ್ಗೆ ಶ್ರೀರಾಮಸೇನೆ ಬೆಂಬಲ:ಇಸ್ರೇಲ್-ಇರಾನ್ ಯುದ್ಧ ವಿಚಾರವಾಗಿ ಶ್ರೀರಾಮಸೇನೆ ಇಸ್ರೇಲ್ ಬೆಂಬಲಿಸುತ್ತದೆ ಎಂದ ಪ್ರಮೋದ ಮುತಾಲಿಕ್, ಇಸ್ರೇಲ್ ಬೆಂಬಲಿಸಿ ಫಲಕ ಪ್ರದರ್ಶನ ಮಾಡಿದರು. ಇಸ್ರೇಲ್ ಚಿಕ್ಕ ದೇಶವಾದರೂ ಅವರ ದೇಶಭಕ್ತಿ ಕಲಿಯಬೇಕು. ಇಸ್ರೇಲ್ ಮಾದರಿಯ ದೇಶಭಕ್ತಿ ನಮಗೂ ಬೇಕಿದೆ. ಭಯೋತ್ಪಾದನೆ ಎಂದರೆ ಬರೀ ಬಾಂಬ್ ಸಿಡಿಸುವುದು, ಬಂದೂಕು ಅಷ್ಟೇ ಅಲ್ಲ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ವ್ಯಾಪಾರ ಜಿಹಾದ್ ಸಹ ಬಯೋತ್ಪಾದನೆ ಆಗಿದೆ. ಇಸ್ರೇಲ್ ಭಯೋತ್ಪಾದನೆಯ ಮೂಲವನ್ನೇ ಹೊಡೆಯುತ್ತಿದೆ. ನಮ್ಮ ಜನರು, ಪೊಲೀಸರು ಮತ್ತು ಸೈನಿಕರು ಇಸ್ರೇಲ್ ಮಾದರಿಯಲ್ಲಿ ನಿಲ್ಲಬೇಕು ಎಂದರು.ಕೈ ಕತ್ತರಿಸಬೇಕು:
ಹುಬ್ಬಳ್ಳಿ ದತ್ತ ಮೂರ್ತಿ ಭಗ್ನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರಮೋದ ಮುತಾಲಿಕ, ಮೂರ್ತಿ ಭಗ್ನ ಮಾಡಿದವರ ಕೈ ಕತ್ತರಿಸಬೇಕು. ಇದು ರಾಕ್ಷಸಿ ಸ್ವರೂಪದ ಕೃತ್ಯ. ಯಾರೇ ಮಾಡಿದರೂ ಅವರಿಗೆ ದತ್ತಾತ್ರೇಯ ಶಾಪ ತಟ್ಟುತ್ತದೆ. ಆ ಕೃತ್ಯ ಮಾಡಿದವರು ಸರ್ವನಾಶ ಆಗುತ್ತಾರೆ. ಕೂಡಲೇ ತಪ್ಪಿತಸ್ಥರ ಬಂಧನ ಆಗಬೇಕು. ಈ ಸಂಬಂಧ ಹು-ಧಾ ಪೊಲೀಸ್ ಆಯುಕ್ತರನ್ನು ಆಗ್ರಹಿಸುತ್ತೇನೆ. ಇಲ್ಲದೇ ಹೋದಲ್ಲಿ ನಾವೇ ಕ್ರಮ ೇತೆಗೆದುಕೊಳ್ಳುತ್ತೇವೆ ಎಂದರು.