ಟೀಂ ಕೆ.ಆರ್.ಟಿ ಆಯೋಜಿತ 2ನೇ ವರ್ಷದ ದಶಮಂಟಪ ಪ್ರೀಮಿಯರ್ ಲೀಗ್‌ನ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ಭಗವತಿ-ಸಿ ತಂಡ ಹೊರಹೊಮ್ಮಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಟೀಂ ಕೆ.ಆರ್.ಟಿ ಆಯೋಜಿತ 2ನೇ ವರ್ಷದ ದಶಮಂಟಪ ಪ್ರೀಮಿಯರ್ ಲೀಗ್‌ನ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ಭಗವತಿ-ಸಿ ತಂಡ ಹೊರಹೊಮ್ಮಿತು. ರನ್ನರ್ಸ್ ಪ್ರಶಸ್ತಿಯನ್ನು ಕಾಮಾಕ್ಷಿ-ಎ ತಂಡ ತನ್ನದಾಗಿಸಿಕೊಂಡಿತು. 2ನೇ ರನ್ನರ್ಸ್ ಪ್ರಶಸ್ತಿಯನ್ನು ಕಾಮಾಕ್ಷಿ-ಬಿ ತಂಡ ಪಡೆದುಕೊಂಡಿತು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆದ ಲೀಗ್ ಮಾದರಿಯ ಟೆನ್ನಿಸ್ ಬಾಲ್ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿ ಟ್ರೋಫಿಗಾಗಿ ಸೆಣಸಾಡಿದವು.

ಅಂತಿಮ ಪಂದ್ಯದಲ್ಲಿ ಭಗವತಿ-ಸಿ ತಂಡ ಕಾಮಾಕ್ಷಿ-ಎ ತಂಡವನ್ನು 23 ರನ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲು ಬ್ಯಾಟ್ ಮಾಡಿದ ಭಗವತಿ-ಸಿ ತಂಡ ನಿಗದಿತ 5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 63 ರನ್‌ಗಳನ್ನು ಪೇರಿಸಿತು. ತಂಡದ ಪರ ರೆಯಾಜ್ 18 ಎಸೆತಗಳಲ್ಲಿ 43 ರನ್‌ಗಳನ್ನು ಬಾರಿಸಿದರು. 64 ಗುರಿ ಬೆನ್ನಟ್ಟಿದ ಕಾಮಾಕ್ಷಿ-ಎ ತಂಡ 5 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 40 ರನ್‌ಗಳನ್ನಷ್ಟೆ ಗಳಿಸಿ ಸೋಲನುಭವಿಸಿತು.

ಈ ಮೂಲಕ ಭಗವತಿ-ಸಿ ತಂಡ ಚಾಂಪಿನ್ ಆಯಿತು. ಆಕರ್ಷಕ ಹನುಮ ಗದೆಯ ರೋಲಿಂಗ್ ಟ್ರೋಫಿ ಹಾಗೂ ವಿನ್ನರ್ಸ್ ಟ್ರೋಫಿ, ರೂ.60,000 ನಗದನ್ನು ತನ್ನದಾಗಿಸಿಕೊಂಡಿತು. ಕಾಮಾಕ್ಷಿ-ಎ ತಂಡ ಮೊದಲ ರನ್ನರ್ಸ್ ಟ್ರೋಫಿ ಹಾಗೂ ರೂ.30,000 ನಗದನ್ನು ಪಡೆದುಕೊಂಡಿತು. ಕಾಮಾಕ್ಷಿ-ಬಿ ತಂಡ 3ನೇ ಸ್ಥಾನದ ಟ್ರೋಫಿ ಪಡೆದುಕೊಂಡಿತು.

ಮೊದಲ ಕ್ವಾಲಿಫೈಯರ್‌ನಲ್ಲಿ ಭಗವತಿ-ಸಿ ತಂಡ ಮೊದಲು ಬ್ಯಾಟ್ ಮಾಡಿ 5 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 57 ರನ್‌ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕಾಮಾಕ್ಷಿ-ಎ ತಂಡ 2 ವಿಕೆಟ್‌ಗಳನ್ನು ಕಳೆದುಕೊಂಡು 28 ರನ್‌ಗಳನ್ನಷ್ಟೆ ಪೇರಿಸಿ ಸೋಲನುಭವಿಸಿತು. ಭಗವತಿ-ಸಿ ತಂಡ ಈ ಮೂಲಕ ನೇರ ಫೈನಲ್ ಪ್ರವೇಶಿಸಿತು.

ಎಲಿಮಿನೇಟರ್ ಪಂದ್ಯದಲ್ಲಿ ಕಾಮಾಕ್ಷಿ-ಬಿ ತಂಡ ಭಗವತಿ-ಎ ತಂಡವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ಭಗವತಿ-ಎ ತಂಡ ನಿಗದಿತ 5 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 47 ರನ್‌ಗಳನ್ನು ಗಳಿಸಿತು. ಕಾಮಾಕ್ಷಿ-ಬಿ ತಂಡ 4.5 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿ ಸಾಧಿಸಿತು.

2ನೇ ಕ್ವಾಲಿಫೈಯರ್‌ನಲ್ಲಿ ಕಾಮಾಕ್ಷಿ-ಬಿ ತಂಡ ಮೊದಲು ಬ್ಯಾಟ್ ಮಾಡಿ 26 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದನ್ನು ಬೆನಟ್ಟಿದ ಕಾಮಾಕ್ಷಿ-ಎ ತಂಡ 4.4 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಸಾಧನೆ ಗೈದು ಫೈನಲ್ ಪ್ರವೇಶಿಸಿತು. ಕಾಮಾಕ್ಷಿ-ಬಿ ತಂಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ವೈಯಕ್ತಿತ ಬಹುಮಾನಗಳು: ಕಾಮಾಕ್ಷಿ ತಂಡದ ಸಂತು ಮ್ಯಾಕ್ಸ್ವೆಲ್ ಟೂರ್ನಿಯ ಉತ್ತಮ ಬ್ಯಾಟ್ಸ್ಮ್ಯಾನ್ ಪ್ರಶಸ್ತಿ ಪಡೆದುಕೊಂಡರು. ಕಾಮಾಕ್ಷಿ ತಂಡದ ಬಿಪಿನ್ ಉತ್ತಮ ಬೌಲರ್, ಅಂತಿಮ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಭಗವತಿ ತಂಡದ ಯತೀಶ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಭಗವತಿ ತಂಡದ ಲೋಕಿ, ಉತ್ತಮ ಕ್ಯಾಚ್ ಪ್ರಶಸ್ತಿಯನ್ನು ಕಾಮಾಕ್ಷಿ ತಂಡದ ಜೀವನ್ ಹಾಗೂ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಕಾಮಾಕ್ಷಿ ತಂಡದ ಜೀವನ್ ಪಡೆದುಕೊಂಡರು.

ಟ್ರೋಫಿ ವಿತರಣೆ ಸಂದರ್ಭ ಕೋದಂಡರಾಮ ದೇವಾಲಯದ ರಾಮ ಸೇವಾ ಸಮಿತಿಯ ಅಧ್ಯಕ್ಷ ಗೋಪಿನಾಥ್, ದೇವಾಲಯ ಟ್ರಸ್ಟಿಗಳಾದ ಮಂಜುನಾಥ್, ಪರಮೇಶ್, ಜ್ಯೋತಿ ಯುವಕ ಸಂಘದ ಅಧ್ಯಕ್ಷ ವಿಶ್ವನಾಥ್, ಸದಸ್ಯರಾದ ವಿಜಯ್, ಮಹೇಶ್, ಕಿಂಬರ್ಲಿ ಕೂರ್ಗ್ನ ಮದನ್ ಸೇರಿದಂತೆ ಇತರರು ಹಾಜರಿದ್ದರು.