ದಶಮಂಟಪ ಸರಣಿ: ಶ್ರೀ ಕೋಟೆ ಮಹಾಗಣಪತಿ ದೇವಾಲಯ- ಶತಮಾಹಿಷೆಯ ಸಂಹಾರ
KannadaprabhaNewsNetwork | Published : Oct 22 2023, 01:00 AM IST / Updated: Oct 22 2023, 01:01 AM IST
ದಶಮಂಟಪ ಸರಣಿ: ಶ್ರೀ ಕೋಟೆ ಮಹಾಗಣಪತಿ ದೇವಾಲಯ- ಶತಮಾಹಿಷೆಯ ಸಂಹಾರ
ಸಾರಾಂಶ
47ನೇ ವರ್ಷದ ದಸರಾ ಉತ್ಸವದಲ್ಲಿರುವ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯಿಂದ ಈ ಬಾರಿ ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದ್ದು, ಮಂಟಪಕ್ಕಾಗಿ ಸುಮಾರು 31.5 ಲಕ್ಷ ರು. ವೆಚ್ಚ ಮಾಡಲಾಗುತ್ತಿದೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ 47ನೇ ವರ್ಷದ ದಸರಾ ಉತ್ಸವದಲ್ಲಿರುವ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯಿಂದ ಈ ಬಾರಿ ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದ್ದು, ಮಂಟಪಕ್ಕಾಗಿ ಸುಮಾರು 31.5 ಲಕ್ಷ ರು. ವೆಚ್ಚ ಮಾಡಲಾಗುತ್ತಿದೆ. ದೇವಾಲಯದ ದಸರಾ ಸಮಿತಿ ಅಧ್ಯಕ್ಷರಾಗಿ ಎಚ್.ಪಿ. ಲೋಕೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಟಪದಲ್ಲಿ 30 ಕಲಾಕೃತಿಗಳು ಇರಲಿದೆ. ದೇವಾಲಯ ಸಮಿತಿಯಲ್ಲಿ ಸುಮಾರು 372 ಮಂದಿ ಸದಸ್ಯರಿದ್ದಾರೆ. ಮಂಟಪದಲ್ಲಿ ಅಳವಡಿಸಲಾಗುತ್ತಿರುವ ಕಥೆಯನ್ನು ಆರ್.ಬಿ. ರವಿ ನಿರ್ದೇಶಿಸಿದ್ದಾರೆ. ಮಡಿಕೇರಿಯ ಫ್ಯೂಚರ್ ಇವೆಂಟ್ ಸ್ಟುಡಿಯೋ ಸೆಟ್ಟಿಂಗ್ ಹಾಗೂ ಸೌಂಡ್ಸ್ ಸೆಟ್ಟಿಂಗ್ ಮಾಡಲಿದೆ. ಮಡಿಕೇರಿಯ ಪೂಜಾ ಲೈಟಿಂಗ್ ಆರ್ಚ್ ಬೋರ್ಡ್ ವ್ಯವಸ್ಥೆ ಮಾಡಲಿದೆ. ಗಣೇಶ್ ಹಾಗೂ ಸೋಮಶೇಖರ್ ಟ್ಯ್ರಾಕ್ಟರ್ ಸೆಟ್ಟಿಂಗ್ ಮಾಡಲಿದ್ದಾರೆ. ಮಡಿಕೇರಿಯ ಬಿ.ಎನ್. ಕ್ರಿಯೇಷನ್ನ ಮೋಹನ್ ಹಾಗೂ ಪುನಿತ್ ಅವರು ವೆಲ್ಡಿಂಗ್, ಚಲನವಲನ ಹಾಗೂ ಫ್ಲಾರ್ಟ್ ಫಾರಂ ಸೆಟ್ಟಿಂಗ್ ಮಾಡಲಿದ್ದಾರೆ. ಮಡಿಕೇರಿಯ ಪೂಜಾ ಲೈಟಿಂಗ್ನ ರಘು ಮತ್ತು ತಂಡ ಕಲಾಕೃತಿಗಳಿಗೆ ವಿಶೇಷ ಎಫೆಕ್ಟ್ ನೀಡಲಿದ್ದಾರೆ. ಮಡಿಕೇರಿಯ ಟೀಂ 99 ಫಯರ್ ವರ್ಕ್ ಮಾಡಲಿದೆ. ಮುಂಬೈನಿಂದಲೂ ವಿಶೇಷ ಎಫೆಕ್ಟ್ ನೀಡಲಾಗುತ್ತಿದೆ. * ದೇವಾಲಯದ ಇತಿಹಾಸ ಕೊಡಗನ್ನು ಅಳುತ್ತಿದ್ದ ವೀರ ರಾಜೇಂದ್ರ ರಾಜನು ಮಡಿಕೇರಿಯ ಕೋಟೆಯ ಒಳಗೆ ಗಣಪತಿ ದೇವಾಲಯದವನ್ನು ನಿರ್ಮಿಸಿದನು. ತನ್ನ ಮನೆಯ ದೇವರೆಂದೇ ಪೂಜಿಸುವ ಶ್ರೀ ಗಣಪತಿ ದೇವರಿಗೆ ನಮಿಸಿ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಿದ್ದರು. ಇದರ ಗೋಪುರ ಚಿಕ್ಕದಾದರೂ ಗಣಪತಿಯ ಶಕ್ತಿ ಅಪಾರ. ಬಹುತೇಕರು ಗಣಪತಿಗೆ ಕೈಮುಗಿದು ತನ್ನ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿಯೇ ಮುಂದುವರಿಯುತ್ತಾರೆ. ಹಿಂದೊಮ್ಮೆ ಪರದೇಶದಲ್ಲಿದ್ದವನಿಗೆ 30 ಆನೆಗಳಿದ್ದವಂತೆ ಅದರಲ್ಲಿ ಒಂದು ಆನೆ ತಪ್ಪಿಸಿಕೊಂಡು ಹೋದಾಗ ತಾವು ನಂಬಿದ ಕೋಟೆ ಶ್ರೀ ಮಹಾ ಗಣಪತಿಯನ್ನು ಅಲ್ಲಿಂದಲೇ ಮನಸ್ಸಿನಲ್ಲಿ ಪ್ರಾರ್ಥಿಸಿದರಂತೆ. ಒಂದು ವಾರದ ಬಳಿಕ ತಪ್ಪಿಸಿಕೊಂಡ ಆನೆ ಸ್ವಸ್ಥಾನಕ್ಕೆ ಬಂದಿತು. ಇದಕ್ಕೆ ಕಾಣಿಕೆಯಾಗಿ ಆನೆಯ ಮಾಲೀಕ ಕೊಡಗಿಗೆ ಬಂದಾಗ ಈ ದೇವಾಲಯಕ್ಕೆ ತೆರಳಿ ಚಿನ್ನದ ಆನೆಯ ಪ್ರತಿರೂಪವನ್ನು ದೇವರಿಗೆ ಅರ್ಪಿಸಿದರು. ಇಂತಹ ನಿದರ್ಶನಗಳು ಹಲವು ಇವೆ. ಈ ದೇವಾಲಯದಲ್ಲಿ ಗಣೇಶ ಚತುರ್ಥಿ, ನವರಾತ್ರಿ ಉತ್ಸವ ಅತೀ ವಿಜೃಂಭಣೆಯಿಂದ ನಡೆಯುತ್ತದೆ. ದಸರ ಮಹೋತ್ಸವದ ದಶಮಂಟಪಗಳಲ್ಲಿ 9ನೇಯ ಮಂಟಪ ಶ್ರೀ ಕೋಟೆ ಮಹಾಗಣಪತಿ ದೇವಾಲಯದ್ದಾಗಿದೆ. ಇಲ್ಲಿ ನಿತ್ಯ ಪೂಜೆ ಜರುಗುತ್ತದೆ. ಪ್ರತಿ ವರ್ಷ ಹುತ್ತರಿ ಹಬ್ಬದಂದು ಓಂಕಾರೇಶ್ವರ ದೇವಾಲಯದ ಗದ್ದುಗೆಯಲ್ಲಿ ಕದಿರನ್ನು ಕೊಯ್ದು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ತೆರಳಿ ಕೋಟೆ ಮಹಾಗಣಪತಿಗೆ ಮೊದಲ ಭತ್ತದ ತೆನೆಯನ್ನು ಕಟ್ಟುವುದು ಸಂಪ್ರದಾಯ.