ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ: ಲಿಂಗ ಭೇದ, ಅಸ್ಪೃಶ್ಯತೆ, ಉಚ್ಛ ನೀಚ, ಮೇಲು-ಕೀಳು, ಜಾತಿ, ಮತ, ಪಂಥಗಳ ಅನಿಷ್ಟ ಭಾವನೆಗಳನ್ನು ತೊರೆದು ನಾವೆಲ್ಲ ಒಂದು ಎಂಬ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂದೇಶ ಸಾರಿದ ವಚನಕಾರ ದೇವರ ದಾಸಿಮಯ್ಯನವರ ಸಂದೇಶಗಳು ಸರ್ವಕಾಲಕ್ಕು ಪ್ರಸ್ತುತವಾಗಿವೆ ಎಂದು ಗುರುಸಿದ್ದೇಶ್ವರ ಮಠದ ಬಸವರಾಜ ಶ್ರೀಗಳು ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠದಲ್ಲಿ ನೇಕಾರ ಸಂತ ಆದ್ಯವಚನಕಾರ ದೇವರ ದಾಸಿಮಯ್ಯನವರ ಜಯಂತ್ಯುತ್ಸವದಲ್ಲಿ ಮಾತನಾಡಿರುವ ಅವರು, ಸಮಾಜದಲ್ಲಿ ಏಕತೆ ತರುವ ನಿಟ್ಟಿನಲ್ಲಿ ದೇವರ ದಾಸಿಮಯ್ಯ ಸಾಕಷ್ಟು ಶ್ರಮಿಸಿದ್ದಾರೆ. ಲಿಂಗ,ಕಾಯಕ ಹಾಗೂ ಜಾತಿ ಅಸಮಾನತೆಗಳನ್ನು ದಾಸಿಮಯ್ಯನವರು ಸಹಿಸಲಿಲ್ಲ. ಸಮಾಜದಲ್ಲಿ ಎಲ್ಲರೂ ಒಂದು, ಕಾಯಕ ಸಮಾಜದಲ್ಲಿ ಬೇಧ ಭಾವ ಸಲ್ಲದು. ಅಂದಾಗ ಮಾತ್ರ ಸಮಾಜದಲ್ಲಿ ಸಮಭಾವ ಕಾಣಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.ದಾಸಿಮಯ್ಯ ಹುಟ್ಟು ಹಾಕಿದ ಧಾರ್ಮಿಕ ಹಾಗೂ ಸಮಾನತೆಯ ಸ್ವಾತಂತ್ರ್ಯದ ಪರಿಕಲ್ಪನೆ ಮನುಕುಲಕ್ಕೆ ಸರ್ವಕಾಲಕೂ ದಾರಿ ಮಾಡಿಕೊಟ್ಟಿದೆ. ಆದರೆ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೃತ್ಯಗಳು ನಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಶ್ರೀಗುರುಬಸವ ದೇವರು ಸಾನಿಧ್ಯ ವಹಿಸಿದ್ದರು. ಪಟ್ಟಸಾಲಿ ನೇಕಾರ ಸಮಾಜದ ಅಧ್ಯಕ್ಷ ಈರಣ್ಣ ಶೇಖಾ, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ನೇಕಾರ ಮುಖಂಡ ರಂಗಪ್ಪ ಶೇಬಿನಕಟ್ಟಿ, ಚಂದ್ರಶೇಖರ ಹೆಗಡೆ, ರವಿ ಅಲದಿ, ಗಿರಿಜಾ ಕಲ್ಯಾಣಿ, ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಚ್.ಎಸ್. ಘಂಟಿ, ಉಪನ್ಯಾಸಕಿ ಸವಿತಾ ಚಂದನವರ, ದೀಪಾ ಉಂಕಿ, ದ್ರಾಕ್ಷಾಯಣಿ ಗೊಬ್ಬಿ, ನಾಗವೇಣಿ ತಿಪ್ಪಾ ಸೇರಿದಂತೆ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೋಟ್ದುಡಿದು ಉಣ್ಣುವ ಜನರನ್ನು ಇಂದು ಕೀಳಾಗಿ ಕಾಣಲಾಗುತ್ತಿದೆ. ನಾವೆಲ್ಲ ಒಂದು ಎಂಬ ಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು. ಜಾತಿ ಪದ್ದತಿ ನಿರ್ಮೂಲನೆಯಾಗಬೇಕಿದ್ದು, ಈ ಸಮಾಜದಲ್ಲಿ ಮೇಲ್ಜಾತಿ ವರ್ಗದವರು ಶ್ರಮಿಕ ವರ್ಗದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಉನ್ನತ ವರ್ಗದವರಲ್ಲಿ ಸ್ವಂತ ಚಿಂತನೆ, ಆಧ್ಯಾತ್ಮಿಕತೆ ಇಲ್ಲದೆ, ಶ್ರಮಿಕ ವರ್ಗದ ಜನರ ಮೇಲೆ ಸವಾರಿ ಮಾಡುತ್ತಿದ್ದಾರೆ. ವಿಶ್ವಾಸ, ವಿಶಾಲ ಮನೋಭಾವ ಎಲ್ಲರಲ್ಲಿ ಬೆಳೆಯಬೇಕಾಗಿದೆ.ಬಸವರಾಜ ಶ್ರೀಗಳು, ಗುರುಸಿದ್ದೇಶ್ವರ ಮಠ