ಸಾರಾಂಶ
ಯಲ್ಲಾಪುರ: ಪಟ್ಟಣದ ನಾಯಕನಕೆರೆಯ ದತ್ತ ಮಂದಿರದ ಲೋಕಾರ್ಪಣಾ ಕಾರ್ಯಕ್ರಮ ಡಿ. ೧೩ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆರಂಭಗೊಂಡಿತು.ವೈದಿಕರಾದ ವಿ. ಅಮೃತೇಶ ಹಿರೇ ಗೋಕರ್ಣ ಇವರ ಪ್ರಧಾನ ಆಚಾರ್ಯತ್ವದಲ್ಲಿ ನಿರ್ಮಾಣ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ದಂಪತಿಗಳ ಯಜಮಾನತ್ವದಲ್ಲಿ ೧೫ ವೈದಿಕರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಶುಕ್ರವಾರ ಬೆಳಗ್ಗೆಯಿಂದ ಗುರುದೇವತಾ ಪ್ರಾರ್ಥನೆ, ಗಣಪತಿ ಪೂಜೆ, ದೇವನಾಂದಿ, ಪುಣ್ಯಾಹವಾಚನ, ಋತ್ವಿಕ್ ವರಣನ, ಬ್ರಹ್ಮಕೂರ್ಚ ಹವನ, ಗಣಹವನ, ಶಿಲ್ಪಿ ಪೂಜೆ, ಆಲಯ ಪರಿಗ್ರಹದ ಮೂಲಕ ಮಹಾ ಸಂಕಲ್ಪ ಕೈಗೊಳ್ಳಲಾಯಿತು.ಮದ್ಯಾಹ್ನ ೩ ಗಂಟೆಗೆ ಸರಿಯಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗಳ ಪುರ ಪ್ರವೇಶ ಮಾಡಿದರು. ಪೂರ್ಣ ಕುಂಭ ಸ್ವಾಗತ, ಚಂಡೆ ವಾದನದೊಂದಿಗೆ ಹುಲ್ಲೋರಮನೆ ಕ್ರಾಸ್ನಿಂದ ದತ್ತ ಮಂದಿರ ಆವರಣಕ್ಕೆ ಮೆರವಣಿಗೆಯಲ್ಲಿ ಪಾದಯಾತ್ರೆಯ ಮೂಲಕ ಶ್ರೀಗಳನ್ನು ಕರೆತರಲಾಯಿತು.ದತ್ತ ಮಂದಿರ ಆವರಣಕ್ಕೆ ಪ್ರವೇಶಿಸಿದ ಶ್ರೀಗಳು ನೂತನ ಶಿಲಾಮಯ ದತ್ತ ಮಂದಿರ ಹಾಗೂ ಧಾರ್ಮಿಕ ಕಾರ್ಯಕ್ರಮದ ಯಾಗಶಾಲೆ, ಬಾಲಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಜೆ ಧಾರ್ಮಿಕ ಕಾರ್ಯಕ್ರಮದಲ್ಲಿ ಯಾಗಶಾಲಾ ಪ್ರವೇಶ, ಸಪ್ತಶುದ್ಧಿ, ಮಂಟಪ ಸಂಸ್ಕಾರ, ಕಲಶ ಸ್ಥಾಪನೆ, ಉದಕ ಶಾಂತಿ ಪಾರಾಯಣ, ವಾಸ್ತು ಹವನ, ಕುಂಡ ಸಂಸ್ಕಾರ, ಅಗ್ನಿಜನನ, ದೇವರಿಗೆ ಸಪ್ತಾಧಿವಾಸ, ಶಯ್ಯಾ ಕಲ್ಪನೆ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ದತ್ತ ಮಂದಿರದ ಉಸ್ತುವಾರಿಗಳಾದ ಮಹೇಶ ಚಟ್ನಳ್ಳಿ, ಲೋಕಾರ್ಪಣಾ ಸಮಿತಿ ಅಧ್ಯಕ್ಷ ಪ್ರಮೋದ ಹೆಗಡೆ, ಮಠದ ಪ್ರತಿನಿಧಿ ಎಸ್.ವಿ. ಯಾಜಿ, ದತ್ತ ಮಂದಿರ ನಿರ್ಮಾಣ ಹಾಗೂ ಲೋಕಾರ್ಪಣಾ ಸಮಿತಿಯ ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ, ಕೆ.ಟಿ. ಭಟ್ಟ ಗುಂಡ್ಕಲ್, ಡಾ. ಕೆ.ಸಿ. ನಾಗೇಶ, ಸಿ.ಜಿ. ಹೆಗಡೆ, ನಾಗೇಶ ಯಲ್ಲಾಪುರಕರ್, ವೇಣುಗೋಪಾಲ ಮದ್ಗುಣಿ, ಶ್ರೀರಂಗ ಕಟ್ಟಿ, ಪ್ರಸಾದ ಹೆಗಡೆ, ರಮೇಶ ಹೆಗಡೆ, ನರಸಿಂಹ ಗಾಂವ್ಕರ್, ನಾಗರಾಜ ಮದ್ಗುಣಿ, ಶಿವಾನಂದ ಹೆಗಡೆ ಶಿಲ್ಪಿಗಳಾದ ವೆಂಕಟ್ರಮಣ ಸೂರಾಲು, ಸತೀಶ ದಾನಗೇರಿ, ವಾಸ್ತು ತಜ್ಞ ಮಹೇಶ ಮುನಿಯಂಗಳ್ ಮುಂತಾದವರು ಇದ್ದರು.ಸಂಜೆ ಮಾರುತಿ ಭಜನಾ ಮಂಡಳಿ ಬಿಸಗೋಡು ಇವರಿಂದ ಭಜನೆ, ಅನಂತ ಪದ್ಮನಾಭ ಭಟ್ಟ ಇವರಿಂದ ಕೀರ್ತನೆ, ವಿ. ಗಣಪತಿ ಭಟ್ಟ ಮೊಟ್ಟೆಗದ್ದೆ ತಂಡದಿಂದ ಗಾನ ವೈಭವ ಕಾರ್ಯಕ್ರಮ ನಡೆಯಿತು.