ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರತಿಬಾರಿಯೂ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾಗರರಿಗೆ ಹಲವಾರು ವಿಷಯಗಳಲ್ಲಿ ಅನ್ಯಾಯ ಆಗುತ್ತಲೇ ಬಂದಿದ್ದು, ರೈತರ ಸಹಾಯಕ್ಕೆ ಬರಬೇಕಿರುವ ಸರ್ಕಾರ ಕೂಡ ಕಾರ್ಖಾನೆಗಳ ಪರವಾಗಿದೆ. ಹೀಗಾಗಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ನಗರದ ಗಾಂಧಿವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ರ್ಯಾಲಿ ಮುಖಾಂತರ ಆಗಮಿಸಿ ಬೇಡಿಕೆ ಈಡೇರುವವರೆಗೂ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಟನ್ ಕಬ್ಬಿಗೆ ₹ 3500 ದರ ಘೋಷಣೆ ಮಾಡಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರರು ಹಾಗೂ ಜಿಲ್ಲಾ ರೈತ ಸಂಘಗಳ ಒಕ್ಕೂಟದಿಂದ ಅಹೋರಾತ್ರಿ ಧರಣಿ ನಡೆಸಲಾಗುವುದು. ವಿಜಯಪುರ ಜಿಲ್ಲೆಯಲ್ಲಿಯ 10 ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿ ವರ್ಷ ರೈತರನ್ನ ಸುಲಿಗೆ ಮಾಡುವುದು ತಪ್ಪುತ್ತಿಲ್ಲ. ಅಕ್ಕಪಕ್ಕದ ರಾಜ್ಯ ಹಾಗೂ ಜಿಲ್ಲೆಯಲ್ಲಿ ಒಂದು ಬೆಲೆಯಾದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಬೆಲೆ, ಯಾಕೆ ಈ ಇಬ್ಬಗೆ ನೀತಿ, ರೈತರಿಗೆ ಕಬ್ಬಿನ ದರದಲ್ಲಿ ಮೋಸ. ತೂಕದಲ್ಲಿ ಮೋಸ, ಇವುಗಳ ಜೊತೆಗೆ ಸರಿಯಾದ ಸಮಯಕ್ಕೆ ಹಣ ಬಾರದೇ ಮತ್ತಷ್ಟು ತೊಂದರೆ ಆಗುತ್ತಿದೆ. ಒಂದು ಟನ್ ಕಬ್ಬಿನಿಂದ ಸಕ್ಕರೆ ಜೊತೆಗೆ ಎಥೆನಾಲ್, ಸ್ಪಿರಿಟ್, ಮೊಲ್ಯಾಸಿಸ್, ಬಗಾಸ್, ವೇಸ್ಟ್ ಸೇರಿದಂತೆ ಇತರೆ ಉಪ ಉತ್ಪನ್ನಗಳನ್ನು ಮಾಡಿ ಲಕ್ಷ ಲಕ್ಷ ಲಾಭ ಗಳಿಸುತ್ತಿರುವ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ಸರಕಾರ ರೈತರನ್ನ ಮಾತ್ರ ದಿವಾಳಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಫ್.ಆರ್.ಫಿ ದರವನ್ನು ಯಾವುದೇ ಕಾರಣಕ್ಕೂ ಕಬ್ಬು ಬೆಳೆಗಾರರು ಒಪ್ಪುವುದಿಲ್ಲ. ಇಂದಿನ ಆಧುನಿಕ ಕೃಷಿ ಖರ್ಚು ತುಂಬಾ ಹೆಚ್ಚಾಗಿದ್ದು, ಒಂದು ಎಕರೆಗೆ ಅಂದಾಜು ₹ 30 ಸಾವಿರ ನಷ್ಟ ಆಗುತ್ತಿದೆ. ಆದ್ದರಿಂದ ಕಬ್ಬಿನಿಂದ ಆಗುವ ಉಪ ಉತ್ಪನ್ನಗಳಲ್ಲಿ ರೈತರನ್ನು ಪರಿಗಣನೆಗೆ ತೆಗೆದುಕೊಂಡು ಒಂದಿಷ್ಟು ಲಾಭ ಕೊಡಬೇಕು. ಒಟ್ಟಾರೆಯಾಗಿ ಪ್ರತಿ ಟನ್ ಕಬ್ಬಿಗೆ ₹ 3500 ಬೆಲೆ ಕೊಡಲೇಬೇಕು. ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮುಂದೆ ಸರಕಾರಿ ತೂಕದ ಯಂತ್ರವನ್ನು ಅಳವಡಿಸಿ ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸಬೇಕು. ಕಟಾವು ಹಾಗೂ ಸಾಗಾಣೆಯನ್ನು 12 ಗಂಟೆಗಳಲ್ಲಿ ಮುಗಿಸಬೇಕು, ಕಬ್ಬಿನ ಬಾಕಿ ಮೊತ್ತವನ್ನು 14 ದಿನಗಳ ಒಳಗೆ ಕೊಡಬೇಕು. ಇಲ್ಲ ಶೇ.15 ಬಡ್ಡಿ ಹಾಕಿ ಕೊಡಬೇಕು. ಸಿಎಸ್ಆರ್ ಹಣವನ್ನು ರೈತರ ಅಭಿವೃದ್ಧಿಗೆ ಹಾಗೂ ತರಬೇತಿಗೆ ಹಾಗೂ ರೈತರಿಗಾಗಿ ಬಳಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ ಮಾತನಾಡಿ, ಸಿಎಂ ಅವರು ಅ.20ರಿಂದ ಕಾರ್ಖಾನೆ ಆರಂಭಿಸಲು ಸೂಚಿಸಿದ್ದಾರೆ. ಇದು ರೈತರಿಗೆ ಅನ್ಯಾಯ ಆಗಿದೆ. ಹೀಗಾಗಿ ರೈತರು, ಪ್ರಗತಿಪರ ಹೋರಾಟಗಾರರು, ವಿವಿಧ ಸಂಘಟನೆಗಳು ಮಂಗಳವಾರ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಕೆಲಸ ಮಾಡಲಾಗುವುದು. ಎಲ್ಲರೂ ಭಾಗವಹಿಸಿ ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೂ ಸರ್ಕಾರ ಬಗ್ಗದಿದ್ದರೆ ಎಲ್ಲ ಶಾಸಕರ ಮನೆಗಳ ಮುಂದೆಯೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ವೇಳೆ ಕಲ್ಲು ಸೊನ್ನದ, ಸೀತಪ್ಪ ಗಣಿ, ರಾಮನಗೌಡ ಪಾಟೀಲ, ಪ್ರಕಾಶ ತೇಲಿ, ಸಂಗಪ್ಪ ಟಕ್ಕೆ ಸೇರಿದಂತೆ ರೈತರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))