ಬಸವನಬಾಗೇವಾಡಿ, ಇಂಗಳೇಶ್ವರಕ್ಕೆ ಡಿಸಿ ದಿಢೀರ್ ಭೇಟಿ

| Published : Aug 09 2024, 12:50 AM IST

ಸಾರಾಂಶ

ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮ, ಬಸವನಬಾಗೇವಾಡಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಗುರುವಾರ ಸಂಜೆ ದಿಢೀರ್‌ ಭೇಟಿ ನೀಡಿ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದರು. ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರ ಪರಿಶೀಲಿಸಿ ಆಹಾರವನ್ನು ಸವಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಇಂಗಳೇಶ್ವರ ಗ್ರಾಮ, ಬಸವನಬಾಗೇವಾಡಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಗುರುವಾರ ಸಂಜೆ ದಿಢೀರ್‌ ಭೇಟಿ ನೀಡಿ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದರು. ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರ ಪರಿಶೀಲಿಸಿ ಆಹಾರವನ್ನು ಸವಿದರು.

ತಾಲೂಕಿನ ಇಂಗಳೇಶ್ವರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬಸ್ ನಿಲ್ದಾಣದ ಆವರಣದಲ್ಲಿರುವ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಯನ್ನು ಪರಿಶೀಲಿಸಿ ಈ ಜಾಗದಲ್ಲಿ ಪಂಚಲೋಹದ ಅಶ್ವಾರೂಢ ಬಸವೇಶ್ವರರ ಪ್ರತಿಮೆಯನ್ನು ಸ್ಥಾಪನೆ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸರ್ಕಾರ ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ ಬಸವೇಶ್ವರ ವೃತ್ತ ನಿರ್ಮಾಣ ಮಾಡುವ ಜತೆಗೆ ಅಶ್ವಾರೂಢ ಬಸವೇಶ್ವರ ಪ್ರತಿಮೆ ಸ್ಥಾಪನೆ, ಸರ್ಕಾರಿ ಜಾಗದಲ್ಲಿ ಬಸ್ ನಿಲ್ದಾಣ, ಅಗತ್ಯ ಶೌಚಾಲಯ ನಿರ್ಮಾಣ, ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಹಾಕಿಕೊಂಡು ಗ್ರಾಮದ ಅಭಿವೃದ್ಧಿ ಕೈಗೊಳ್ಳಲಾಗುವುದು. ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವುದು, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬಿಗರ ಚೌಡಯ್ಯ ಸಮುದಾಯ ಭವನದ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಗ್ರಾಮದ ಹಾಲಬಾವಿ ಸ್ಥಿತಿಗತಿ ಪರಿಶೀಲನೆ, ಬಸವೇಶ್ವರ ತಾಯಿ ಮಾದಲಾಂಬಿಕೆ ಸ್ಮಾರಕ ಭವನಕ್ಕೆ ಭೇಟಿ ನೀಡಿ ಇಲ್ಲಿ ವಚನ ಅಧ್ಯಯನ ಕೇಂದ್ರ ಸ್ಥಾಪನೆ ಕುರಿತು ಚರ್ಚಿಸಿದರು. ವಿರಕ್ತಮಠದ ವಚನ ಶಿಲಾ ಮಂಟಪಕ್ಕೆ ಭೇಟಿ ನೀಡಿ ವಚನ ಶಿಲಾ ಮಂಟಪವನ್ನು ವೀಕ್ಷಿಸಿದರು. ನಂತರ ವಿರಕ್ತಮಠದ ಚನ್ನಬಸವ ಸ್ವಾಮೀಜಿಗಳ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಲೋಕೋಪಯೋಗಿ ಇಲಾಖೆಯ ಇಇ ಜೆ.ವಿ. ಕಿರಸೂರ, ತಾಪಂ ಅಧಿಕಾರಿ ಪ್ರಕಾಶ ದೇಸಾಯಿ, ಕೆಬಿಜೆಎನ್‌ಎಲ್ ಇಲಾಖೆಯ ಅಧಿಕಾರಿ ಸೋಲಾಪುರ, ರೈತ ಮುಖಂಡ ಅರವಿಂದ ಕುಲಕರ್ಣಿ, ನಾಗಣ್ಣ ಚಿಗರಿ, ಶ್ರೀಕಾಂತ ರಾಠೋಡ, ಸಿದ್ದಲಿಂಗ ಶೇಖಣಿ, ಮುದ್ದುಗೌಡ ಬಿರಾದಾರ, ರೇವಣಸಿದ್ದ ಕೋಟಾರದ, ಪರಶುರಾಮ ಮಾದರ, ಬಸಪ್ಪ ದಳವಾಯಿ, ರೇವಣಸಿದ್ದ ಐಗಳಿ ಸೇರಿದಂತೆ ಇತರರು ಇದ್ದರು. ನಂತರ ಬಸವನಬಾಗೇವಾಡಿಗೆ ಬರುವ ಮಾರ್ಗ ಮಧ್ಯದಲ್ಲಿ ಪುರಸಭೆಯಿಂದ ನಿರ್ಮಾಣವಾಗಿರುವ ಜಿ ಪ್ಲಸ್ ಮನೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಮಾಹಿತಿಯನ್ನು ಪುರಸಭೆ ಮುಖ್ಯಾಧಿಕಾರಿಗಳಿಂದ ಪಡೆದುಕೊಂಡ ಅವರು ಇಲ್ಲಿ ಮೂಲಭೂತ ಸೌಲಭ್ಯ ಒದಗಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸುವಂತೆ ಹೇಳಿದರು. ನಂತರ ಬಸವನಬಾಗೇವಾಡಿ ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಇಂದಿರಾ ಕ್ಯಾಂಟೀನ್‌ಗೆ ದಿಢೀರ್‌ ಭೇಟಿ ನೀಡಿ ಕ್ಯಾಂಟೀನ್‌ದಲ್ಲಿ ತಯಾರಿಸಿದ ಆಹಾರವನ್ನು ಪರಿಶೀಲಿಸಿದರು. ನಂತರ ಕ್ಯಾಂಟೀನ್‌ದಲ್ಲಿ ತಯಾರಾದ ಬದನೇಕಾಯಿ ಪಲ್ಯೆ, ಚಪಾತಿ, ಅನ್ನ-ಸಾರು ಸವಿದರು. ಅನ್ನವನ್ನು ಸರಿಯಾಗಿ ಮಾಡುವಂತೆ ಸೂಚಿಸಿದ ಅವರು ಆಹಾರವನ್ನು ಪ್ರತಿನಿತ್ಯ ಉತ್ತಮವಾಗಿ ತಯಾರಿಸುವ ಜೊತೆಗೆ ದಾಖಲಾತಿಯನ್ನು ಸರಿಯಾಗಿ ಇಡುವಂತೆ ಕ್ಯಾಂಟೀನ್ ಸಿಬ್ಬಂದಿಗೆ ಸೂಚಿಸಿದರು. ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆಯ ಕಾಮಗಾರಿ ಮಾಹಿತಿ ಪಡೆದುಕೊಂಡರು. ನಂದಿ ತರಕಾರಿ ಮಾರುಕಟ್ಟೆಯಲ್ಲಿ ₹೫೦ ಲಕ್ಷ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಯ ಬಗ್ಗೆ ಮಾಹಿತಿಯನ್ನು ಪುರಸಭೆ ಮುಖ್ಯಾಧಿಕಾರಿಗಳಿಂದ ಪಡೆದುಕೊಂಡರು.ಈ ಸಂದರ್ಭದಲ್ಲಿ ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಪುರಸಭೆ ಅಭಿಯಂತರಾದ ಸಂತೋಷ ಗಿಡ್ಡಸಣ್ಣನವರ, ಮಹಾದೇವ ಜಂಬಗಿ, ಪುರಸಭೆಯ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಕಂದಾಯ ನಿರೀಕ್ಷಕ ಸಂತೋಷ ದೇಸಾಯಿ, ಗ್ರಾಮಾಡಳಿತಾಧಿಕಾರಿ ಸಂತೋಷ ಕುಂಟೋಜಿ ಇತರರು ಇದ್ದರು.