ಶ್ರೀರಂಗನಾಥಸ್ವಾಮಿ ದೇಗುಲದಲ್ಲಿ ತುರ್ತು ಕಾಮಗಾರಿ ನಡೆಸಲು ನಿರ್ಧಾರ

| Published : Oct 29 2025, 01:15 AM IST

ಶ್ರೀರಂಗನಾಥಸ್ವಾಮಿ ದೇಗುಲದಲ್ಲಿ ತುರ್ತು ಕಾಮಗಾರಿ ನಡೆಸಲು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಆದಿರಂಗನಾಥಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದಂತೆ ಇದ್ದ ಹಲವು ಕಾನೂನಾತ್ಮಕ ಸಮಸ್ಯೆ ಬಗೆಹರಿಸಲಾಗಿದೆ. 2018ರಿಂದಲೂ ರಾಜಗೋಪುರದ ಸುಣ್ಣ ಬಣ್ಣ ಬಳಿಸುವ ಕೆಲಸವನ್ನೂ ಮಾಡಲಾಗಿಲ್ಲ. ಇದೀಗ ದೇವಾಲಯದ ಹಣದಿಂದಲೇ ಕೆಲ ಕಾಮಗಾರಿಗಳನ್ನು ನಿರ್ವಹಿಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಭಾರತೀಯ ಪುರಾತತ್ವ ಇಲಾಖೆಯಿಂದ ಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಪಟ್ಟಣದ ದೇವಾಲಯ ಆವರಣದಲ್ಲಿ ನಡೆದ ಸಭೆಯಲ್ಲಿ ಆದಿರಂಗನಾಥಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದಂತೆ ಇದ್ದ ಹಲವು ಕಾನೂನಾತ್ಮಕ ಸಮಸ್ಯೆ ಬಗೆಹರಿಸಲಾಗಿದೆ. 2018ರಿಂದಲೂ ರಾಜಗೋಪುರದ ಸುಣ್ಣ ಬಣ್ಣ ಬಳಿಸುವ ಕೆಲಸವನ್ನೂ ಮಾಡಲಾಗಿಲ್ಲ. ಇದೀಗ ದೇವಾಲಯದ ಹಣದಿಂದಲೇ ಕೆಲ ಕಾಮಗಾರಿಗಳನ್ನು ನಿರ್ವಹಿಸಲು ನಿರ್ಧರಿಸಲಾಗಿದೆ ಎಂದರು.

ಬಿರುಕು ಬಿಟ್ಟಿರುವ ಗೋಡೆಗಳ ದುರಸ್ತಿ, ನೆಲಹಾಸಿನ ಚಪ್ಪಡಿ, ಕಂಬಗಳು, ಛಾವಣಿಗೆ ಕೆಮಿಕಲ್ ವಾಷ್, ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಬಿಸಿಲು ಮಳೆಯಿಂದ ರಕ್ಷಣೆ ಮಾಡಲು ಚಾವಣಿ ವ್ಯವಸ್ಥೆ, ದೇವಾಲಯದೊಳಗೆ ಕತ್ತಲೆ ನಿವಾರಣೆಗೆ ಹೈಮಾಸ್ಕ್ ವಿದ್ಯುತ್ ದೀಪಗಳ ಅಳವಡಿಕೆ, ಕಲ್ಯಾಣಿ ಪುನಶ್ಚೇತನ ಸೇರಿದಂತೆ 16ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಅನಧಿಕೃತ ಅಂಗಡಿಗಳ ನಿಯಮಾನುಸಾರ ವಿಚಾರಣೆ, ಅಂಗಡಿಗಳ ನೆಲಬಾಡಿಗೆ 12 ಲಕ್ಷ ಬಾಕಿ ಉಳಿದಿದ್ದು, ಈ ಬಗ್ಗೆ ಚರ್ಚೆ ನಡೆಸಲಾಯಿತು. ದೇವಸ್ಥಾನ ವ್ಯವಸ್ಥಾಪನಾ ಸದಸ್ಯೆ ಆಶಾಲತಾ ಪುಟ್ಟೇಗೌಡ ಅವರು ನಿತ್ಯವೂ ಪ್ರಸಾದ ವಿತರಿಸುವ ಬಗ್ಗೆ ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಮಾತನಾಡಿ, ಕಾನೂನಿನ್ವಯ ದೇವಾಲಯದ ಅಭಿವೃದ್ಧಿ ಜೊತೆಗೆ ದಾನಿಗಳಿಂದ ಸಂಗ್ರಹಣೆ ಮಾಡಿ ಪಾರದರ್ಶಕವಾಗಿ ಪ್ರಸಾದ ವಿತರಣೆ ಮಾಡಬಹುದು. ಇದರಿಂದ ‘ಎ’ ಗ್ರೇಡ್ ದೇವಾಲಯವೆಂದು ಬಿಂಭಿತವಾಗಿರುವ ಶ್ರೀರಂಗನಾಥಸ್ವಾಮಿ ದೇವಾಲಯದ ಘನೆತೆಯೂ ಹೆಚ್ಚುತ್ತದೆ ಎಂದರು.

ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ಸಹಸ್ರನಾಮ ಕಳಾಭಿಷೇಕ ನ.25, 26 ಹಾಗೂ 27 ರಂದು ಮಾಡಲು ಶುಭಕಾಲವೆಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಚೇತನ್ ಯಾದವ್, ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮಶೇಖರ್, ಸದಸ್ಯ ಸತೀಶ್, ಕಾರ್‍ಯನಿರ್ವಾಹಕ ಅಧಿಕಾರಿ ಉಮಾ ನಟಶೇಖರ್, ಭಾರತೀಯ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿ ಸುನಿಲ್, ಪಿಡಬ್ಲ್ಯೂ ಎಇಇ ಜಿಸಂತ್, ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಸೇರಿದಂತೆ ಹಲವರು ಇದ್ದರು.