ಸಾರಾಂಶ
ಮುಂಡರಗಿ: ನ. 21 ಹಾಗೂ 22ರಂದು ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ವೀರಭದ್ರೇಶ್ವರನ ಭಕ್ತರು ಸಲಹೆ ಸೂಚನೆಗಳನ್ನು ನೀಡುವ ಮೂಲಕ ನೆರವು ನೀಡಿ ಸಹಕಾರ ನೀಡಬೇಕು ಎಂದು ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಎಸ್.ವಿ. ಲಿಂಬಿಕಾಯಿ ಮನವಿ ಮಾಡಿಕೊಂಡರು.
ಅವರು ಶನಿವಾರ ಸಂಜೆ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಾತ್ರಾ ಮಹೋತ್ಸವದ ಅಂಗವಾಗಿ ನ. 21ರಂದು ಬೆಳಗ್ಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ತಜ್ಞ ವೈದ್ಯರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರನ ಪಲ್ಲಕ್ಕಿ ಉತ್ಸವ ಜರುಗಲಿದೆ.
ನ. 22ರಂದು ಬೆಳಗ್ಗೆ 8 ಗಂಟೆಗೆ ವೀರಭದ್ರೇಶ್ವರನ ಅಗ್ನಿ ಮಹೋತ್ಸವ ಜರುಗಲಿದ್ದು, ನೂರಾರು ಪುರವಂತರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12ಕ್ಕೆ ಉಚಿತ ಸಾಮೂಹಿಕ ವಿಹಾಹ ಜರುಗಲಿವೆ. ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸರ್ವ ಭಕ್ತರಿಗೆ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.ವೀರಭದ್ರೇಶ್ವರ ಸೇವಾ ಸಮಿತಿಯ ಖಜಾಂಚಿ ವಿ.ಜೆ. ಹಿರೇಮಠ ಮಾತನಾಡಿ, ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಉಚಿತ ಸಾಮೂಹಿಕ ವಿವಾಹ ಜರುಗಲಿದ್ದು, ಕನಕಗಿರಿ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ಜರುಗಲಿದೆ ಎಂದರು.
ಜಾತ್ರಾ ಮಹೋತ್ಸವದ ಅಧ್ಯಕ್ಷ ವೀರೇಶ ತುಪ್ಪದ ಮಾತನಾಡಿ, ಎರಡು ದಿನಗಳ ಕಾಲ ಜರುಗುವ ವೀರಭದ್ರೇಶ್ವರನ ಅದ್ಧೂರಿ ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ನೆರವೇರಲು ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ಆಯಾ ಸಮೀತಿಯ ಸರ್ವ ಪದಾಧಿಕಾರಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಗಿ ನಿರ್ವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು. ಶ್ರೀವೀರಭದ್ರೇಶ್ವರ ಮಹಿಳಾ ವೇದಿಕೆಯ ಸದಸ್ಯ ಲತಾ ಕಡ್ಡಿ ಮಾತನಾಡಿ, ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಕೊನೆಯ ದಿನ ಜರುಗುವ ದೀಪೋತ್ಸವ ಸೇರಿದಂತೆ ಜಾತ್ರೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಮಹಿಳಾ ವೇದಿಕೆಯ ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ವೀರಭದ್ರೇಶ್ವರ ಸೇವಾ ಸಮಿತಿಯ ಉಪಾಧ್ಯಕ್ಷ ಸಾಯಿನಾಥ ಅಳವುಂಡಿ, ಜಾತ್ರಾ ಸಮಿತಿಯ ಈರಣ್ಣ ಕರ್ಜಗಿ, ರವೀಂದ್ರಗೌಡ ಪಾಟೀಲ, ವಿನಯ ಗಂಧಗ, ಶರಣಪ್ಪ ಮುರಗಿ, ಶರಣಪ್ಪ ಕರಡಿ, ಶರಣಪ್ಪ ಕಡ್ಡಿ, ಶರಣಪ್ಪ ಕುಬಸದ, ವೀರಣ್ಣ ಕಾಸಿಗವಿ, ಮುತ್ತಣ್ಣ ಬಣಕಾರ, ಎಂ.ಬಿ.ಗದಗ, ಅಮೃತಾ ಲಿಂಬಿಕಾಯಿ, ಪಾರ್ವತಿ ಕುಬಸದ ಉಪಸ್ಥಿತರಿದ್ದರು.