ಉಡುಪಿ: ರಾಜ್ಯ ಸರ್ಕಾರ ಹಿಜಾಬ್ ನಿಷೇಧ ರದ್ದು ಮಾಡಿದ್ದು ಸರಿಯಾಗಿಯೇ ಇದೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಏನಾದರೂ ಹೇಳಲಿ, ಹಿಜಾಬ್ ಮೊದಲಿನಿಂದಲೂ ಮುಸ್ಲಿಂ ಹೆಣ್ಣು ಮಕ್ಕಳು ಧರಿಸುತ್ತಿದ್ದರು, ಹಿಂದುಗಳು ಕೂಡ ಜನಿವಾರ ಹಾಕುತ್ತಾರೆ, ಕುಂಕುಮ ಇಟ್ಟುಕೊಳ್ಳುತ್ತಾರೆ, ಅದಕ್ಕೆ ಯಾವುದೇ ನಿರ್ಬಂಧ ಇಲ್ಲವಲ್ಲ, ಹಿಜಾಬ್ಗೆ ನ್ಯಾಯಾಲಯದಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ, ಆದ್ದರಿಂದ ಸರ್ಕಾರದ ಆದೇಶದಲ್ಲಿ ತಪ್ಪಿಲ್ಲ, ದಾವಣಗೆರೆ ಉಪಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಮುನಿಸಿಗೂ ಈ ಆದೇಶಕ್ಕೂ ಸಂಬಂಧ ಇಲ್ಲ ಎಂದರು.
ಮೋದಿ ಸಬ್ಸಿಡಿ ತೆಗೆದಿದ್ದಾರೆ: ಹಿಂದೆ ಯುಪಿಎ ಸರ್ಕಾರ ಇದ್ದಾಗ ಕಚ್ಚಾತೈಲ ಬ್ಯಾರಲ್ ಗೆ 130-140 ಡಾಲರ್ ಇತ್ತು, ಆಮೇಲೆ 50 - 60 ಡಾಲರ್ ಗೆ ಇಳಿಕೆ ಆಯಿತು, ಆಗ ಮನಮೋಹನ್ ಸಿಂಗ್ ಸರ್ಕಾರ ಸಬ್ಸಿಡಿ ಕೊಟ್ಟು ಕಡಿಮೆ ದರದಲ್ಲಿ ಪೆಟ್ರೋಲ್ ಡಿಸೇಲ್ ಕೊಡುತಿತ್ತು. ಮೋದಿ ಸರ್ಕಾರ ಗ್ಯಾಸ್ ಪೆಟ್ರೋಲ್ ಎಲ್ಲಾ ಸಬ್ಸಿಡಿ ತೆಗೆದು ಹಾಕಿದೆ, ಕಚ್ಚಾ ತೈಲ ಬೆಲೆ ಇಳಿಕೆ ಆಗಿದ್ದಾಗಲೂ ಅದರ ಲಾಭ ಗ್ರಾಹಕರಿಗೆ ಸಿಗಲಿಲ್ಲ, ಈಗಲೂ ಕೂಡ ಕೇಂದ್ರ ಸರ್ಕಾರ ಸಬ್ಸಿಡಿ ಕೊಟ್ಟು ಜನರಿಗೆ ಕಡಿಮೆ ದರದಲ್ಲಿ ಡೀಸೆಲ್, ಗ್ಯಾಸ್, ಪೆಟ್ರೋಲ್ ಕೊಡಬೇಕು ಎಂದರು.