ಗುತ್ತಲ: ಪಟ್ಟಣದಲ್ಲಿನ ಮೀನು ಹಾಗೂ ಮಾಂಸ ಮಾರಾಟಕ್ಕೆ ರಾಣಿಬೆನ್ನೂರ ರಸ್ತೆಯಲ್ಲಿನ ಪಂಚಾಯಿತಿ ನಿವೇಶನದಲ್ಲಿ ಅವಕಾಶ ಕಲ್ಪಿಸುವ ಹಾಗೂ ವಾಣಿಜ್ಯ ಮಳಿಗೆಗಳ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡುವಂತೆ ಸೋಮವಾರ ಜರುಗಿದ ಪ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು.ಪ.ಪಂ. ಅಧ್ಯಕ್ಷ ಮಾಳವ್ವ ಗೊರವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ ಲಮಾಣಿ, ಪಟ್ಟಣದ ಸರ್ಕಾರಿ ಶಾಲೆಯ ಮುಂಭಾಗದಲ್ಲಿಯೇ ಮೀನು ಹಾಗೂ ಮಾಂಸದ ಮಾರಾಟದಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ ಅದನ್ನು ಬೇರೆಡೆ ಸ್ಥಳಾಂತರ ಮಾಡಬೇಕು. ಅದಕ್ಕೆ ಸೂಕ್ತ ನಿವೇಶದ ಬಗ್ಗೆ ಪ್ರಶ್ನಿಸಿದಾಗ ಈ ಹಿಂದೆ ಗ್ರಾ.ಪಂ. ನಿಂದ ಮೀನು ಹಾಗೂ ಮಾಂಸದ ಮಾರುಕಟ್ಟೆಗಾಗಿ ನಿವೇಶನವನ್ನು ಖರೀದಿಸಲಾಗಿದೆ. ಅಲ್ಲಿಯೇ ಮಾಡುವುದು ಉತ್ತಮ ಎಂದು ಸದಸ್ಯ ಖಲೀಲಹ್ಮದ ಖಾಜಿ ಸಭೆಯ ಗಮನಕ್ಕೆ ತಂದಾಗ ಎಲ್ಲ ಸದಸ್ಯರು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರು.ನಂತರ ಪಟ್ಟಣದಲ್ಲಿ ನೂರಾರು ವಾಣಿಜ್ಯ ಮಳಿಗೆಗಳಿದ್ದು ಇವುಗಳ ಮಾಲಿಕರಿಂದ ವಾಣಿಜ್ಯ ತೆರಿಗೆ ಪಡೆಯದಿರುವುದಕ್ಕೆ ಆಕ್ರೋಶಗೊಂಡ ರುದ್ರಪ ಲಮಾಣಿ ಮಾರ್ಚ್‌ ಅಂತ್ಯದೊಳಗೆ ವಾಣಿಜ್ಯ ತೆರಿಗೆಯನ್ನು ಕಟ್ಟಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಈ ಕುರಿತು ವಿಸ್ತೃತ ಚರ್ಚೆ ಜರುಗಿತು. ಕೆಲವರು ಆಶ್ರಯಕ್ಕಾಗಿ ಅನುಮತಿ ಪಡೆದು ವಾಣಿಜ್ಯಕ್ಕೆ ಬಳಸುತ್ತಿರುವುದು ಸಹ ಸಭೆಯ ಗಮನಕ್ಕೆ ಬಂದಿತು. ಆಗ ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಸುಳ್ಳು ಮಾಹಿತಿ ನೀಡಿ ಅನುಮತಿ ಪಡೆದವರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.ಪಟ್ಟಣದಲ್ಲಿನ ದೊಡ್ಡ ಹೊಂಡ ಹಾಗೂ ಚಿಕ್ಕ ಹೊಂಡಗಳನ್ನು ಸ್ವಚ್ಛಗೊಳಿಸಬೇಕು. ಅದಕ್ಕಾಗಿ ಅನುದಾನದ ಕೊರತೆ ಇದೆ. ವಿವಿಧ ಯೋಜನೆಗಳಲ್ಲಿನ ಉಳಿತಾಯದ ಹಣವನ್ನು ಬಳಸಿಕೊಂಡು ಹೊಂಡಗಳ ಅಭಿವೃದ್ಧಿ ಮಾಡುವಂತೆ ಹಾಗೂ ಹೊಂಡಗಳಿಗೆ ಹೋಗುತ್ತಿರುವ ಚರಂಡಿಯ ನೀರನ್ನು ಬೇರೆಡೆಗೆ ಹೋಗುವಂತೆ ಮಾಡಿ ಹೊಂಡಗಳನ್ನು ಸುಂದರವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಕಿರಿಯ ಎಂಜಿನಿಯರ್ ಸುರೇಶ ಚಲವಾದಿ ಅವರಿಗೆ ರುದ್ರಪ್ಪ ಲಮಾಣಿ ಸೂಚಿಸಿದರು.ಪಟ್ಟಣದಲ್ಲಿನ ಖಾಲಿ ನಿವೇಶಗಳನ್ನು ಸ್ವಚ್ಛಗೊಳಿಸದೇ ಗಿಡ ಗಂಟಿ ಕಸ ಬೆಳೆದಿರುವ ನಿವೇಶನಗಳ ಮಾಲೀಕರಿಗೆ ನೋಟಿಸ ಜಾರಿ ಮಾಡಿ, ಅವರು ಸ್ವಚ್ಛಗೊಳಿಸದೇ ಇದ್ದರಿಂದ ಪಂಚಾಯಿತಿಯಿಂದ ಸ್ವಚ್ಛಗೊಳಿಸಿ ಅವರ ಆಸ್ತಿಯ ಮೇಲೆ ಭೋಜಾ ಹಾಕುವಂತೆ ರುದ್ರಪ್ಪ ಲಮಾಣಿ ಹೇಳಿದರು.

ಮಾರ್ಚ್ ಅಂತ್ಯದೊಳಗೆ ಉಳಿತಾಯದ ಬಜೆಟ್ ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿ, ಪಂಚಾಯತಿಗೆ ಬರುವ ಆದಾಯದ ಮೂಲಗಳ ಪಟ್ಟಿ ಮಾಡಿ, ತೆರಿಗೆ ಕಟ್ಟಿದವರ ಮಾಹಿತಿಯನ್ನು ಗಣೀಕರಣ ಮಾಡಿ, ಸಿಬ್ಬಂದಿಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಕಟ್ಟು ನಿಟ್ಟಾಗಿ ಸೂಚಿಸಿದರು.ಸಭೆಯಲ್ಲಿ ಪ.ಪಂ. ಅಧ್ಯಕ್ಷೆ ಮಾಳವ್ವ ಗೊರವರ, ಉಪಾಧ್ಯಕ್ಷ ಪರಶುರಾಮ ಯಲಗಚ್ಚ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಸದಸ್ಯರಾದ ಎಸ್.ಜಿ. ಹೊನ್ನಪ್ಪನವರ, ಖಲೀಲಹ್ಮದ ಖಾಜಿ, ಮಾಲತೇಶ ಶೀತಾಳ, ಬಸಪ್ಪ ನೆಗಳೂರ, ಮಹ್ಮದಹನೀಪ ರಿತ್ತಿ, ವಿಜಯ ಲಮಾಣಿ, ಗಣೇಶ ಅರೇಮಲ್ಲಾಪುರ, ದೀಪಾ ಭರಡಿ, ಸಾವಿತ್ರಾ ಘಂಟಿ, ನಾಗರತ್ನಾ ಬಡಿಗೇರ, ರೇಖಾ ಲಮಾಣಿ, ಪಾರವ್ವ ಲಮಾಣಿ, ಶಕುಂತಲಾ ಗುತ್ತಲ, ನಾಮ ನಿರ್ದೇಶಿತ ಸದಸ್ಯರಾದ ನಿಂಗಪ್ಪ ನಾಯಕ, ಪಿ.ಎನ್. ಹೇಮಗಿರಿಮಠ, ಚನ್ನಪ್ಪ ಕಲಾಲ, ಮುಖ್ಯಾಧಿಕಾರಿ ಡಾ. ದೇವಾನಂದ ದೊಡ್ಡಮನಿ, ಕಿರಿಯ ಎಂಜಿನಿಯರ್ ಸುರೇಶ ಚಲವಾದಿ, ಸಿಬ್ಬಂದಿಗಳಾದ ಜಯಮ್ಮ ಮ್ಯಾಗೇರಿ, ಶಂಭು ವಾಳದ, ಬಿಂದಪ್ಪ ಅರ್ಕಸಾಲಿ, ಮಂಜುನಾಥ ಕೆಂಚಮಲ್ಲ, ತಿರಕಪ್ಪ ಆರಿಕಟ್ಟಿ ಸೇರಿದಂತೆ ಅನೇಕರಿದ್ದರು